ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ | ಕೊನೆಗೆ ಮದುವೆಯಾಗಲು ಜಾತಕ ಸರಿ ಇಲ್ಲ ಎಂದು ಕೈಕೊಟ್ಟ ಆರೋಪಿ

ಯುವತಿಯೋರ್ವಳನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿ, ನಂತರ ಮದುವೆಯಾಗಲು ನಿನ್ನ ಜಾತಕ ಸರಿಯಿಲ್ಲ ಎಂಬ ಕಾರಣ ನೀಡಿ ಮದುವೆ ನಿರಾಕರಿಸಿದ ಆರೋಪಿಯ ವಿರುದ್ಧ ಸಂತ್ರಸ್ತೆ ಉಡುಪಿಯ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

ತಮಿಳುನಾಡಿನ ವೆಲ್ಲೂರು ನಿವಾಸಿಯಾಗಿರುವ ಪ್ರಶಾಂತ್ ಮುದಲಿಯಾರ್ ಎಂಬಾತನೇ ಪ್ರಕರಣದ ಆರೋಪಿ.

ಘಟನೆಯ ವಿವರ : ಯುವತಿ ಹಾಗೂ ಪ್ರಶಾಂತ್ ಇಬ್ಬರೂ ಕಾಲೇಜು ದಿನಗಳಿಂದಲೇ ಪರಿಚಿತರು. ಆಗಿನಿಂದಲೂ ಇಬ್ಬರೂ ಕೂಡ ಪರಸ್ಪರ ಪ್ರೀತಿಸುತ್ತಿದ್ದರು. ಕಾಲೇಜು ಮುಗಿದ ನಂತರ ಪ್ರಶಾಂತ್ ಮಣಿಪಾಲದಲ್ಲಿ ಉದ್ಯೋಗದಲ್ಲಿದ್ದ. ಕಳೆದ ಜೂನ್ ತಿಂಗಳಲ್ಲಿ ಯುವತಿಯನ್ನು ಮಣಿಪಾಲಕ್ಕೆ ಕರೆಸಿಕೊಂಡಿದ್ದ ಪ್ರಶಾಂತ್, ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ. ನಂತರ ಮದುವೆಯಾಗಲು ನಿಕಾರಿಸಿದ್ದಾನೆ. ಯುವತಿ ಎಷ್ಟೇ ಕೇಳಿಕೊಂಡರೂ ಕೂಡ ನಿನ್ನ ಜಾತಕ ಸರಿಯಿಲ್ಲ ಹೀಗಾಗಿ ಮದುವೆಯಾಗಲು ಸಾಧ್ಯವಿಲ್ಲ ಎಂದಿದ್ದಾನೆ.

ಎಲ್ಲಾ ಪ್ರಯತ್ನಗಳನ್ನು ಮಾಡಿ ನಂತರ ಬೇರೆ ದಾರಿಯಿಲ್ಲದೆ ಸಂತ್ರಸ್ತೆ ಇದೀಗ ಉಡುಪಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Leave A Reply

Your email address will not be published.