ಮ್ಯಾಸಿವ್‌ ಆ್ಯಂಟಿರಿಯರ್‌ ವಾಲ್‌ ಹೃದಯಾಘಾತದ ಬಗ್ಗೆ ನಿಮಗೆಷ್ಟು ಗೊತ್ತು?? | ಯುವಜನತೆಯಲ್ಲಿ ಹೆಚ್ಚುತ್ತಿರುವ ಹೃದಯಾಘಾತಕ್ಕೆ ಕಾರಣವೇನು?? ಇಲ್ಲಿದೆ ಮಾಹಿತಿ

ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹಠಾತ್ ನಿಧನದಿಂದ ಇಡೀ ಕನ್ನಡ ನಾಡು ಶೋಕಸಾಗರದಲ್ಲಿ ಮುಳುಗಿದೆ. ಫಿಟ್‌ನೆಸ್‌ ಕಡೆಗೆ ಸಿಕ್ಕಾಪಟ್ಟೆ ಗಮನ ಕೊಡುತ್ತಿದ್ದ ಅಪ್ಪು 46ನೇ ವಯಸ್ಸಿಗೆ ನಿಧನರಾಗಿರುವ ವಿಷಯವನ್ನು ಯಾರಿಗೂ ಅರಗಿಸಿಕೊಳ್ಳಲಾಗುತ್ತಿಲ್ಲ.

ನಟ ಪುನೀತ್‌ ರಾಜ್‌ಕುಮಾರ್ ಸಾವಿಗೆ ಕಾರಣವಾಗಿದ್ದು ಮ್ಯಾಸಿವ್‌ ಆ್ಯಂಟಿರಿಯರ್‌ ವಾಲ್‌ ಹೃದಯಾಘಾತ. ಹ್ಯೂಜ್‌ ಅಥವಾ ಮ್ಯಾಸಿವ್‌ ಆ್ಯಂಟಿರಿಯರ್‌ವಾಲ್‌ ಅಂದರೆ, ಹೃದಯದ ಮೇಲ್ಭಾಗದಲ್ಲಿರುವ ಶೇಕಡಾ 60ರಷ್ಟು ಸ್ನಾಯುಗಳನ್ನು ಹೊಂದಿರುವ ಗೋಡೆ. ಹೃದಯದ ಮೇಲ್ಭಾಗದಲ್ಲಿರುವ ಈ ಕವಾಟಕ್ಕೆ ರಕ್ತ ಪೂರೈಕೆಯಲ್ಲಿ ವ್ಯತ್ಯಯವಾದರೆ ಈ ರೀತಿಯ ಹೃದಯಾಘಾತ ಸಂಭವಿಸುತ್ತದೆ. ಈ ರೀತಿ ಆದರೆ ಬದುಕುಳಿಯುವ ಸಾಧ್ಯತೆ ಕಡಿಮೆ ಎಂದು ಜಯದೇವ ಆಸ್ಪತ್ರೆ ಮುಖ್ಯಸ್ಥ ಡಾ. ಸಿ.ಎನ್‌. ಮಂಜುನಾಥ್‌ ಹೇಳುತ್ತಾರೆ.

ಇದು ಹೇಗೆ ಉಂಟಾಗುತ್ತದೆ ?

ಅತಿ ಹೆಚ್ಚು ವ್ಯಾಯಾಮ ಮಾಡುವುದು, ತಕ್ಷಣಕ್ಕೆ ಗೊತ್ತಿಲ್ಲದ ವ್ಯಾಯಾಮ ಮಾಡುವುದರಿಂದ ಈ ರೀತಿಯ ಹೃದಯಾಘಾತವಾಗುವ ಹೆಚ್ಚಿನ ಸಾಧ್ಯತೆ ಇರುತ್ತದೆ. ಅಷ್ಟೇ ಅಲ್ಲದೆ ಒತ್ತಡ ನಿಯಂತ್ರಿಸುವ ಶಕ್ತಿ, ಕೌಟುಂಬಿಕ ಹಿನ್ನೆಲೆ ಕೂಡ ಹ್ಯೂಜ್‌ ಆ್ಯಂಟಿರಿಯರ್‌ ವಾಲ್‌ ಹೃದಯಾಘಾತಕ್ಕೆ ಕಾರಣವಾಗುತ್ತದೆ. ಶೇ. 30ರಷ್ಟು ಜನರಿಗೆ ಅರಿವಿಲ್ಲದೆ ಈ ರೀತಿಯ ಹೃದಯಾಘಾತಕ್ಕೆ ತುತ್ತಾಗುತ್ತಾರೆ ಎನ್ನುತ್ತಾರೆ ಡಾ. ಮಂಜುನಾಥ್‌. ಇದು ದಿನದ ಯಾವುದೇ ಸಂದರ್ಭದಲ್ಲಿ ಬೇಕಾದರೂ ಸಂಭವಿಸಬಹುದು. ಮೂರು ತಾಸು ಮೊದಲೇ ಮುನ್ಸೂಚನೆಯನ್ನು ಇದು ನೀಡುತ್ತದೆ. ಅರ್ಧತಾಸಿಗೂ ಹೆಚ್ಚು ಸಮಯ ಹೃದಯದಲ್ಲಿ ನಿರಂತರ ನೋವು ಕಾಣಿಸಿಕೊಂಡರೆ ಕೂಡಲೇ ಆಸ್ಪತ್ರೆಗೆ ದಾಖಲಾಗುವುದು ಒಳ್ಳೆಯದು. ಹೃದಯ ನೋವು ನಿಧಾನವಾಗಿ ದವಡೆ, ಬೆನ್ನು, ಕತ್ತಿನ ಎಡಭಾಗ, ಎಡಗೈಗೆ ಹರಡುತ್ತದೆ. ಯುವಕರಲ್ಲಿ ಈ ರೀತಿಯ ಹೃದಯಾಘಾತ ಹೆಚ್ಚಾಗಿ ಕಂಡುಬರುತ್ತದೆ.

2017ರಲ್ಲಿ ಜಯದೇವದಲ್ಲಿ ನಡೆದ ‘ಯುವಜನರಲ್ಲಿ ಹೃದಯಾಘಾತ’ ಎನ್ನುವ ಪೀಕ್‌ ಕ್ಯಾಡ್‌ ಕಾರ್ಯಕ್ರಮದಲ್ಲಿ ನಟ ಪುನೀತ್‌ ರಾಜ್‌ಕುಮಾರ್‌ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ನಟ ಪುನೀತ್ ರಾಜ್‌ಕುಮಾರ್ ಅವರು ಹೃದಯದ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತಿದ್ದರು. ಅಂತವರಿಗೆ ಈ ರೀತಿಯ ಹೃದಯಾಘಾತವಾಗಿರುವುದು ನಿಜಕ್ಕೂ ನಂಬಲಾಗುತ್ತಿಲ್ಲ ಎಂದು ಡಾ. ಮಂಜುನಾಥ್‌ ಹೇಳಿದ್ದಾರೆ.

ಅಪೋಲೋ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ ಅಭಿಜಿತ್ ಕುಲಕರ್ಣಿ, ಇಂತಹ ಘಟನೆಗಳಿಗೆ ಯಾವುದೇ ನಿಖರವಾದ ಕಾರಣಗಳಿಲ್ಲದಿದ್ದರೂ, ಜೀವನಶೈಲಿ,ಆಹಾರ ಕ್ರಮ, ವ್ಯಾಯಾಮ ಕ್ರಮ ಮತ್ತು ಜೀವನದ ಒತ್ತಡದ ಮಟ್ಟಗಳು ಕಾರಣವಾಗುತ್ತದೆ. ಅನೇಕ ಜನರಲ್ಲಿ ಅಡೆತಡೆಗಳು ಕ್ರಮೇಣ ಬೆಳವಣಿಗೆಯಾಗುತ್ತವೆ.

ಎದೆಯ ಅಸ್ವಸ್ಥತೆ, ಹಿಂದಿನ ಹೃದ್ರೋಗ ಸಮಸ್ಯೆಗಳು ಹೀಗೆ ಹತ್ತಾರು ಅನಾರೋಗ್ಯ ಸೂಚನೆಗಳನ್ನು ಹೃದಯಾಘಾತಕ್ಕೆ ಮೊದಲು ನೀಡುತ್ತಿರುತ್ತಾರೆ. ಪುನೀತ್ ರಾಜ್ ಕುಮಾರ್, ಸಿದ್ಧಾರ್ಥ್ ಶುಕ್ಲ ಮತ್ತು ಚಿರಂಜೀವಿ ಸರ್ಜಾರಂತಹ ಕೆಲವೊಬ್ಬರಲ್ಲಿ ಯಾವುದೇ ಸೂಚನೆ ನೀಡದೆ ಹೃದಯಾಘಾತವಾಗಿರುತ್ತದೆ.

ಜಿಮ್‌ನಲ್ಲಿ ತೀವ್ರವಾದ ವರ್ಕೌಟ್‌ಗಳು, ಪ್ರೋಟೀನ್ ಶೇಕ್‌ಗಳು ಮತ್ತು ಇತರ ಅಂಶಗಳು ಹೃದಯಾಘಾತವನ್ನು ಪ್ರಚೋದಿಸಬಹುದು ಎಂದು ಅವರು ಹೇಳುತ್ತಾರೆ. ತೂಕವನ್ನು ಎತ್ತುವಂತಹ ಐಸೊಮೆಟ್ರಿಕ್ ವ್ಯಾಯಾಮಗಳನ್ನು ತಪ್ಪಿಸುವುದು ಒಳ್ಳೆಯದು. ಅದರ ಬದಲಿಗೆ ವಾಕಿಂಗ್ ಮತ್ತು ಸೈಕ್ಲಿಂಗ್‌ನಂತಹ ಐಸೊಟೋನಿಕ್ ವ್ಯಾಯಾಮಗಳನ್ನು ಮಾಡುವುದು ಉತ್ತಮವಾಗಿರುತ್ತದೆ. ಸ್ನಾಯುಗಳಿಗೆ ಒತ್ತಡ ಹಾಕುವ ವ್ಯಾಯಾಮಗಳಿಂದ ದೂರವಿರುವುದು ಒಳಿತು ಎನ್ನುತ್ತಾರೆ ಡಾ ಮಂಜುನಾಥ್.

ಕುಟುಂಬಸ್ಥರಲ್ಲಿ ಹೃದ್ರೋಗ ಸಂಬಂಧಿ ರೋಗಗಳಿದ್ದರೆ ಅದು ಕೂಡ ಕುಟುಂಬದಲ್ಲಿ ಮತ್ತೊಬ್ಬರಿಗೆ ಹೃದಯಾಘಾತಕ್ಕೆ ಕಾರಣವಾಗಬಹುದು. ಪುನೀತ್ ರಾಜ್ ಕುಮಾರ್ ಅವರ ವಿಚಾರದಲ್ಲಿ ಅವರ ಸೋದರರಾದ ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಅವರು ಸಹ ಹೃದ್ರೋಗ ಸಮಸ್ಯೆ ಹೊಂದಿರುವವರಾಗಿದ್ದಾರೆ. ಒತ್ತಡ ಮತ್ತು ಜೀವನಶೈಲಿಯು ಕೂಡ ಕಾರಣವಾಗುತ್ತದೆ.

ಈ ಮುನ್ನೆಚ್ಚರಿಕೆಗಳನ್ನು ಪಾಲಿಸಿ:

ನಿಯಮಿತ ಹೃದಯ ತಪಾಸಣೆ ಮಾಡಿಸಿಕೊಳ್ಳಿ.
ಕುಟುಂಬದಲ್ಲಿ ಬೇರೆ ಸದಸ್ಯರಿಗೆ ಹೃದಯ ಕಾಯಿಲೆಯ ಸಮಸ್ಯೆಯಿದ್ದರೆ ಹೃದ್ರೋಗಶಾಸ್ತ್ರಜ್ಞರನ್ನು ಭೇಟಿ ಮಾಡಿ.
ಜೀವನಶೈಲಿಯನ್ನು ಬದಲಾಯಿಸಿಕೊಂಡು,
ಹೆಚ್ಚುವರಿ ಸಕ್ಕರೆ ಸೇವನೆ ಮತ್ತು ಕೊಬ್ಬಿನ ಸೇವನೆಯನ್ನು ನಿಯಂತ್ರಿಸಿ. ಧೂಮಪಾನ ಮತ್ತು ಮದ್ಯಪಾನವನ್ನು ತ್ಯಜಿಸಿ. ಐಸೊಮೆಟ್ರಿಕ್ ವ್ಯಾಯಾಮಗಳನ್ನು ತಪ್ಪಿಸಿ ಹೆಚ್ಚು ಐಸೊಟೋನಿಕ್ ವ್ಯಾಯಾಮಗಳನ್ನು ಮಾಡಿ.

ಎಲ್ಲರಿಗೂ ಇರುವುದು ಒಂದೇ ಹೃದಯ. ಆ ಪುಟ್ಟ ಹೃದಯವನ್ನು ಸದಾ ಜೋಪಾನ ಮಾಡೋಣ.

Leave A Reply

Your email address will not be published.