ರಾಜ್ಯದ ಹಲವು ಸ್ಥಳೀಯ ಸಂಸ್ಥೆಗಳನ್ನು ಒಳಗೊಂಡ ನಾಗರಿಕ ಗುಂಪುಗಳ ಸಮೂಹವು ರಾಜ್ಯಾದ್ಯಂತ ಏಕರೂಪದ ಮತ್ತು ಹೆಚ್ಚು ಪರಿಣಾಮಕಾರಿ ವಾರ್ಡ್ ಸಮಿತಿಗಳು ಮತ್ತು ಪ್ರದೇಶ ಸಭೆಗಳನ್ನು ರಚಿಸಲು ಮಾರ್ಗಸೂಚಿ ಕೋರಿ ರಾಜ್ಯ ಉಚ್ಚ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದೆ.
‘ಸಿವಿಕ್ ಬೆಂಗಳೂರು’ ಇದರ ಕ್ಯಾಥ್ಯಾಯಿನಿ ಚಾಮರಾಜ್ ಮುಖ್ಯ ಅರ್ಜಿದಾರರಾಗಿ ಮತ್ತು ಬೆಂಗಳೂರು ನಾಗರಿಕ ಶಕ್ತಿಯ ನರೇಂದ್ರ ಕುಮಾರ್, ಮಂಗಳೂರು ಸಿವಿಕ್ ಗ್ರೂಪ್ನ ನೈಜೆಲ್ ಅಲ್ಬುಕರ್ಕ್ ಮತ್ತು ಅಜೋಯ್ ಡಿಸಿಲ್ವ, ಮೈಸೂರು ಜಾಗೃತ ನಾಗರಿಕರ ವೇದಿಕೆ, ಬೆಳಗಾವಿ ಮತ್ತು ಕಲಬುರಗಿಯ ಜನಪರ ಸೇವಾ ಸಂಸ್ಥೆಗಳು, ಬಳ್ಳಾರಿ, ಹುಬ್ಬಳ್ಳಿ-ಧಾರವಾಡ ನಗರಗಳ ಕರ್ನಾಟಕ ವಾರ್ಡ್ ಸಮಿತಿ ವೇದಿಕೆ ಸದಸ್ಯರು ಸಹ ಅರ್ಜಿದಾರರಾಗಿ ಪಿಐಎಲ್ ಸಲ್ಲಿಸಿದ್ದಾರೆ.
ಪ್ರಾಥಮಿಕ ಪರಿಶೀಲನೆಯ ನಂತರ ಅರ್ಜಿಯನ್ನು ಸ್ವೀಕರಿಸಿದ ಹೈಕೋರ್ಟ್, ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆಯ ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ ಮತ್ತು ರಾಜ್ಯದ 11 ಮಹಾನಗರ ಪಾಲಿಕೆಗಳ ಆಯುಕ್ತರು (ಬಿಬಿಎಂಪಿ ಸೇರಿ) ಒಳಗೊಂಡಂತೆ ಎಲ್ಲ ಪ್ರತಿವಾದಿಗಳಿಗೆ ಈಗಾಗಲೇ ನೋಟಿಸ್ ನೀಡಿದೆ. ನ್ಯಾಯಾಲಯವು ಪ್ರತಿವಾದಿಗಳಿಗೆ ಸಲಹೆ ಗಳನ್ನು ಪಡೆಯಲು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅನುವು ಮಾಡಿಕೊಡಲು ಎಲ್ಲ ದಾಖಲೆಗಳನ್ನು ಸರಕಾರಿ ವಕೀಲರಿಗೆ ಹಸ್ತಾಂತರಿಸುವಂತೆ ನಿರ್ದೇಶಿಸಿದೆ.
ರಾಜ್ಯದ 11 ಮುನ್ಸಿಪಲ್ ಕಾರ್ಪೊರೇಶನ್ಗಳಲ್ಲಿ ವಾರ್ಡ್ ಸಮಿತಿ ಸದಸ್ಯರು ಮತ್ತು ಪ್ರದೇಶ ಸಭೆಯ ಪ್ರತಿನಿಧಿಗಳ ಆಯ್ಕೆಗೆ ಏಕರೂಪದ ಮತ್ತು ಹೆಚ್ಚು ಪರಿಣಾಮಕಾರಿ ಮಾರ್ಗಸೂಚಿಗಳನ್ನು ಕೋರಿ ರಾಜ್ಯದ ವಿವಿಧ ನಾಗರಿಕ ಗುಂಪುಗಳು ಸರಕಾರಕ್ಕೆ ಈ ಹಿಂದೆ ಮಾಡಿದ ಹಲವು ಪ್ರಾತಿನಿಧ್ಯಗಳನ್ನು ಪಿಐಎಲ್ನಲ್ಲಿ ಉಲ್ಲೇಖಿಸಲಾಗಿದೆ. ರಾಜ್ಯದ ಪ್ರತಿ ಮುನ್ಸಿಪಲ್ ಕಾರ್ಪೊರೇಶನ್ ತನ್ನದೇ ಆದ ನಾಮನಿರ್ದೇಶನವನ್ನು ಅನುಸರಿಸುತ್ತಿರುವುದು ಕಂಡುಬಂದ ಕಾರಣ ಪಿಐಎಲ್ ಅಗತ್ಯವಾಗಿತ್ತು. ರಾಜ್ಯದಲ್ಲಿ ವಿವಿಧ ಕಾನೂನುಗಳನ್ನು ಉಲ್ಲೇಖಿಸಿ ಇಂತಹ ನಾಮ ನಿರ್ದೇಶನಗಳನ್ನು ಮಾಡಲಾಗುತ್ತಿತ್ತು. ಪ್ರಸ್ತುತ ಪರಿಸ್ಥಿತಿಯು ಅಸಮಂಜಸವಾಗಿದ್ದು, ತರ್ಕಬದ್ಧವಾಗಿಲ್ಲ ಎಂದು ಪಿಐಎಲ್ನಲ್ಲಿ ನಮೂದಿಸಲಾಗಿದೆ.
ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಾಗರಿಕರ ಭಾಗವಹಿಸುವಿಕೆಯನ್ನು ಸಾಂಸ್ಥಿಕಗೊಳಿಸುವ ವಿಷಯಗಳಲ್ಲಿ ಕೆಎಂಸಿ (ತಿದ್ದುಪಡಿ) ಕಾಯ್ದೆ 2011 ಮತ್ತು ಬಿಬಿಎಂಪಿ ಕಾಯ್ದೆ 2020ನ್ನು ಕರ್ನಾಟಕ ನಗರಪಾಲಿಕೆಗಳು (ತಿದ್ದುಪಡಿ) ಕಾಯ್ದೆ 2020ರಂತೆಯೇ ತಿದ್ದುಪಡಿ ಮಾಡಬೇಕು. ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಜನರ ಸಹಭಾಗಿತ್ವದ ವ್ಯವಸ್ಥೆಗಳು ಮತ್ತು ವಿಧಾನಗಳು ಏಕರೂಪ, ಪಾರದರ್ಶಕ, ನ್ಯಾಯೋಚಿತ ಮತ್ತು ಪ್ರಜಾಸತ್ತಾತ್ಮಕವಾಗಿರಬೇಕು ಎಂದು ಒತ್ತಾಯಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.