ಹಾಡುಹಗಲೇ ಮಹಿಳೆಯ ಕುತ್ತಿಗೆಯಲ್ಲಿದ್ದ ಕರಿಮಣಿ ಸರ ಎಳೆದೊಯ್ದು ಪರಾರಿ | ಸಾರ್ವಜನಿಕರ ಸಹಕಾರದಿಂದ ಕಳ್ಳನ‌ ಪತ್ತೆ

Share the Article

ಬೆಳ್ತಂಗಡಿ : ಹಾಡು ಹಗಲೇ ಮನೆಯೊಳಗೆ ನುಗ್ಗಿದ ಕಳ್ಳನೋರ್ವ ಮಹಿಳೆಯೋರ್ವರ ಕುತ್ತಿಗೆಯಲ್ಲಿದ್ದ ಕರಿಮಣಿ ಸರವನ್ನು ಎಳೆದು ಪರಾರಿಯಾದ ಘಟನೆ ತಾಲೂಕಿನ ಓಡಿಲ್ನಾಳ ಗ್ರಾಮದಲ್ಲಿ ಅ.19ರಂದು ಸಂಜೆ ನಡೆದಿದೆ.

ಓಡಿಲ್ನಾಳ ಗ್ರಾಮದ ಪ್ರಾಥಮಿಕ ಶಾಲಾ ಬಳಿಯ ನಿವಾಸಿ ಉಮಾನಾಥ ಮೂಲ್ಯ ಅವರ ಮನೆ ಬಳಿ ಬೈಕಿನಲ್ಲಿ ಬಂದ ಕಳ್ಳ ಮನೆಯೊಳಗಿದ್ದ ಅವರ ಪತ್ನಿ ಕಮಲ ರವರ ಕುತ್ತಿಗೆಯಲ್ಲಿದ್ದ ಕರಿಮಣಿಯನ್ನು ಎಗರಿಸಿ ಪರಾರಿಯಾಗಿದ್ದಾನೆ.

ಮಹಿಳೆಯ ಬೊಬ್ಬೆಯನ್ನು ಕೇಳಿದ ಸ್ಥಳೀಯ ನಿವಾಸಿಯೋರ್ವರು ಕೂಡಲೇ ಸ್ಥಳಕ್ಕೆ ಹೋಗಿದ್ದ ಸಂಧರ್ಭದಲ್ಲಿ ಈ ವಿಚಾರ ಬೆಳಕಿಗೆ ಬಂದಿತ್ತು ಕೂಡಲೇ ಅವರು ಪೊಲೀಸ್ ಠಾಣೆಗೆ ವಿಚಾರ ತಿಳಿಸಿದ್ದರು.

ಆ ಕ್ಷಣವೇ ಸೇರಿದ ಸ್ಥಳೀಯರು ಕಳ್ಳನ ಚಹರೆ ಬಗ್ಗೆ ಮಹಿಳೆಯಲ್ಲಿ ವಿಚಾರಿಸಿದ್ದು, ಮದ್ದಡ್ಕ ದಲ್ಲಿರುವ ಸೆಲೂನಿನಲ್ಲಿ ಆ ಕಳ್ಳನಿರುವ ಮಾಹಿತಿ ಸಂಗ್ರಹಿಸಿದ್ದಾರೆ.

ಕೂಡಲೇ ಆತನನ್ನು ಸ್ಥಳೀಯರು ಬೆಳ್ತಂಗಡಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಕಳವು ಮಾಡುವ ಸಂಧರ್ಭದಲ್ಲಿ ಕಳ್ಳನ ಮೊಬೈಲ್ ಹೆಡ್ ಫೋನ್ ಸಿಕ್ಕಿದ ಆಧಾರದಲ್ಲಿ ತಾನೇ ಕಳವು ಮಾಡಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ.

ಅದೇ ಊರಿನಲ್ಲಿರುವ ಸಂಭಂಧಿಯೋರ್ವರ ಮನೆಗೆ ಬಂದಿದ್ದ ಈ ಕಳ್ಳ ಮನೆಯವರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡು ಈ ಕೃತ್ಯ ಎಸಗಿದ್ದಾನೆ ಎಂಬುವುದಾಗಿ ಪೊಲೀಸ್ ತನಿಖೆಯ ವೇಳೆ ತಿಳಿದುಬಂದಿದೆ.

Leave A Reply