ರಾಸಾಯನಿಕ ಗೊಬ್ಬರಕ್ಕೆ ಪರ್ಯಾಯವಾಗಿ ಸೆಗಣಿ ಹುಡಿ | ಉತ್ತಮ ಇಳುವರಿ ಪಡೆಯುವಲ್ಲಿ ಯಶಸ್ವಿಯಾದ ಜಯಗುರು ಆಚಾರ್ ಹಿಂದಾರ್

ರಾಸಾಯನಿಕ ಗೊಬ್ಬರಕ್ಕೆ ಪರ್ಯಾಯವಾಗಿ ಸೆಗಣಿ ಹುಡಿ ಬಳಸಿ ಉತ್ತಮ ಇಳುವರಿ ಪಡೆಯುವಲ್ಲಿ ಪುತ್ತೂರು ತಾಲೂಕಿನ ಮುಂಡೂರು ಗ್ರಾಮದ ಎಂಜಿನಿಯರಿಂಗ್‌ ಪದವೀಧರ ಕೃಷಿಕರೊಬ್ಬರೊಬ್ಬರು ಯಶಸ್ವಿಯಾಗಿದ್ದಾರೆ.

ಹಿಂದಾರು ನಿವಾಸಿ ಜಯಗುರು ಆಚಾರ್‌ ಈ ಮೂಲಕ ಸಾವಯವ ಕೃಷಿಗೆ ಹೊಸ ರೂಪ ನೀಡಿದ್ದಾರೆ. ಕೃಷಿಗೆ ಸೆಗಣಿ ಬಳಕೆ ಸಾಂಪ್ರದಾಯಿಕ ವಿಧಾನ. ಆದರೆ ಸೆಗಣಿಯನ್ನು ಸಂಸ್ಕರಿಸಿ ಬಳಸುವ ಮೂಲಕ ಭೂಮಿಯ ಫಲವತ್ತತೆಯನ್ನೂ ಹೆಚ್ಚಿಸಿಕೊಳ್ಳಬಹುದು ಎಂದು ಅವರು ತೋರಿಸಿಕೊಟ್ಟಿದ್ದಾರೆ.

ಸೆಗಣಿ ಹುಡಿ ತಯಾರಿ ಹೇಗೆ?
ಹಟ್ಟಿಯಿಂದ ಸೆಗಣಿ ಸಂಗ್ರಹಿಸಿ ತೊಟ್ಟಿಗೆ ಹಾಕಿ, ಪಂಪ್‌ ಮೂಲಕ ಸೆಗಣಿಯಿಂದ ನೀರಿನ ಅಂಶವನ್ನು ಬೇರ್ಪಡಿಸುವ ಯಂತ್ರಕ್ಕೆ ಹಾಯಿಸಲಾಗುತ್ತದೆ. ಆ ಯಂತ್ರದಲ್ಲಿ ಒಂದು ಕಡೆ ಸೆಗಣಿಯ ಹುಡಿ ತಯಾರಾದರೆ, ಇನ್ನೊಂದು ಕಡೆ ಸೆಗಣಿಯ ನೀರಿನಂಶ ಪ್ರತ್ಯೇಕಗೊಂಡು ಟ್ಯಾಂಕ್‌ನಲ್ಲಿ ಶೇಖರಣೆಗೊಳ್ಳುತ್ತದೆ. ತೋಟಕ್ಕೆ ಬಳಸಿ ಉಳಿದ ಸೆಗಣಿ ಹುಡಿ ಗೊಬ್ಬರವನ್ನು ತಲಾ 40 ಕೆ.ಜಿ.ಯ ಪ್ಯಾಕೆಟ್‌ ಮಾಡಿ ಮಾರಾಟ ಮಾಡುತ್ತಿದ್ದಾರೆ.

ಉಪ ಉತ್ಪನ್ನಗಳು
ಸೆಗಣಿ ಹುಡಿ ಗೊಬ್ಬರದ ಜತೆಗೆ ಗೋಮೂತ್ರ, ದನಗಳನ್ನು ತೊಳೆದ ನೀರು, ಸೆಗಣಿ ನೀರು ಸೇರಿಸಿ ಸ್ಲರಿ ತಯಾರಿಸಲಾಗುತ್ತಿದೆ. ಟ್ಯಾಂಕ್‌ ಮೂಲಕ ಸ್ಲರಿಯನ್ನು ತೋಟದಲ್ಲಿರುವ ಅಡಿಕೆ, ತೆಂಗು, ತರಕಾರಿ ತೋಟಕ್ಕೆ ಬಳಸುವ ಜತೆಗೆ ಪರಿಸರದ ತೋಟಗಳಿಗೂ ಟ್ಯಾಂಕರ್‌ ಮೂಲಕ ಪೂರೈಸುತ್ತಿದ್ದಾರೆ. ಸೆಗಣಿ ಹುಡಿಯಂತೆ ಸ್ಲರಿಗೂ ಬೇಡಿಕೆ ಇದೆ.

ಕಳೆದೆರಡು ವರ್ಷಗಳಿಂದ ಪೂರ್ಣ ಪ್ರಮಾಣದಲ್ಲಿ ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುವ ಜಯಗುರು ಅವರ ಮನೆಯಲ್ಲಿ 130 ಗೋವುಗಳಿವೆ. ದಿನಕ್ಕೆ 750 ಲೀ. ಹಾಲನ್ನು ಡಿಪೋಗೆ ನೀಡುತ್ತಿದ್ದಾರೆ. ಸೆಗಣಿಯನ್ನು ಹುಡಿ ಗೊಬ್ಬರ ಮಾಡುವುದರಿಂದ ಸಾಗಾಣಿಕೆಯೂ ಸುಲಭ. ವಾಸನೆ ಇರುವುದಿಲ್ಲ, ತೋಟಕ್ಕೆ ಸುಲಭವಾಗಿ ಹಾಕಬಹುದು. ಜತೆಗೆ ಗೋನಂದಾಜಲವನ್ನೂ ಬಳಸುತ್ತಿದ್ದು, ಇವೆಲ್ಲದರ ಬಳಕೆಯಿಂದ ಇಳುವರಿ ಅಧಿಕವಾಗಿದೆ.

ಗೋ ಆಧಾರಿತ ಕೃಷಿ ಕ್ರಾಂತಿ
ಕಂಪೆನಿಯೊಂದರಲ್ಲಿ ಎಂಜಿನಿಯರಿಂಗ್‌ ಆಗಿದ್ದ ಜಯಗುರು 2019ರಲ್ಲಿ ವೃತ್ತಿಗೆ ವಿದಾಯ ಹೇಳಿ ತಂದೆ ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ಸಂಚಾಲಕ ಭಾಸ್ಕರ ಆಚಾರ್‌ ಅವರು ನಡೆಸುತ್ತಿದ್ದ ಹೈನುಗಾರಿಕೆಯಲ್ಲಿ ಕೈಜೋಡಿಸಿದರು. ಬಳಿಕ ತನ್ನ ಕೃಷಿ ಭೂಮಿಯನ್ನು ರಾಸಾಯನಿಕ ಮುಕ್ತ ಮಾಡಬೇಕೆಂಬ ಕನಸಿನಂತೆ ಅದರಲ್ಲಿ ಯಶಸ್ವಿಯಾಗಿದ್ದಾರೆ. ಪ್ರಸ್ತುತ ದ್ರವ ರೂಪದ ಗೊಬ್ಬರ ತಯಾರಿಸುವ ಪ್ರಯೋಗ ಆರಂಭಿಸಿರುವುದಲ್ಲದೆ ಆ ಮೂಲಕ ಗೋ ಆಧಾರಿತ ಕೃಷಿ ಕ್ರಾಂತಿಗೆ ಮುಂದಡಿಯಿಟ್ಟಿದ್ದಾರೆ.

ಫಲವತ್ತತೆ ಅಧಿಕ
ನಾನು ತೋಟಕ್ಕೆ ಯಾವುದೇ ರಾಸಾಯನಿಕ ಗೊಬ್ಬರ ಹಾಕುತ್ತಿಲ್ಲ. ಸೆಗಣಿ ಹುಡಿ ಗೊಬ್ಬರ ಸಾಗಾಟವೂ ಸುಲಭ. ವಾಸನೆ ಇರುವುದಿಲ್ಲ. ತೋಟಕ್ಕೆ ಸುಲಭವಾಗಿ ಬಳಸಬಹುದು. ಗೋನಂದಾಜಲವನ್ನೂ ಬಳಸುತ್ತಿದ್ದು, ಇವೆಲ್ಲರ ಬಳಕೆಯಿಂದ ತೋಟದಲ್ಲಿ ಇಳುವರಿ ಹೆಚ್ಚಳಗೊಂಡಿದೆ. ಭೂಮಿಯ ಫಲವತ್ತತೆ ಅ ಧಿಕವಾಗಿದೆ. ಇಳುವರಿ ಹೆಚ್ಚಿರುವುದಲ್ಲದೆ ಅಡಿಕೆ ಕೊಳೆರೋಗವೂ ದೂರವಾಗಿದೆ.
-ಜಯಗುರು ಆಚಾರ್‌ ಹಿಂದಾರು,
ಯುವ ಕೃಷಿಕ

Leave A Reply

Your email address will not be published.