ಪರ್ಸ್ ಎಗರಿಸಿದ್ದ ಕಳ್ಳ ಅಗತ್ಯ ದಾಖಲೆಗಳನ್ನು ಮಾತ್ರ ಪೋಸ್ಟ್ ಮಾಡಿದ !!| ಕಳ್ಳರು ಹೀಗೂ ಇರುತ್ತಾರಾ??

ಪರ್ಸ್ ಎಗರಿಸಿದ್ದ ಕಳ್ಳನೊಬ್ಬ ಅದರಲ್ಲಿದ್ದ ಬೆಲೆ ಬಾಳುವ ದಾಖಲೆಗಳನ್ನು ಅಂಚೆ ಮೂಲಕ ವಾರಸುದಾರರಿಗೆ ಮರಳಿಸಿದ ಸ್ವಾರಸ್ಯಕರ ಘಟನೆ ಕಾಸರಗೋಡಿನಲ್ಲಿ ನಡೆದಿದೆ.

ಕಳೆದ ಮೂರು ದಿನಗಳ ಹಿಂದೆ ಕಾಸರಗೋಡು ಆಸ್ಪತ್ರೆಗೆ ಬಂದಿದ್ದ ಪೊಯಿನಾಚಿಯ ಕೆ. ಮಾಧವನ್ ನಾಯರ್ ಅವರ ಪರ್ಸ್ ಬಸ್‌ನಲ್ಲಿ ಕಳ್ಳತನವಾಗಿತ್ತು. ಅದರಲ್ಲಿ ಡ್ರೈವಿಂಗ್ ಲೈಸನ್ಸ್, ಪಾನ್ ಕಾರ್ಡ್, ಎಟಿಎಂ ಕಾರ್ಡ್, ಆಧಾರ್ ಕಾರ್ಡ್ ಇತ್ಯಾದಿ ದಾಖಲೆಗಳಿದ್ದವು. ಕಳವಾದ ಮೂರನೇ ದಿನಕ್ಕೆ ಅವರ ಪರ್ಸ್ ನಲ್ಲಿದ್ದ ಎಲ್ಲ ದಾಖಲೆಗಳು ಅಂಚೆ ಮೂಲಕ ಅವರ ಕೈಸೇರಿದೆ.

ಪರ್ಸ್‌ನಲ್ಲಿದ್ದ 7 ಸಾವಿರ ರೂ.ಗಳನ್ನು ಮಾತ್ರ ಕಳ್ಳ ಇರಿಸಿಕೊಂಡಿದ್ದಾನೆ. ತಮ್ಮ ಪರ್ಸ್ ಕಳವಾಗಿರುವ ಕುರಿತು ಸ್ಥಳೀಯ ಪತ್ರಿಕೆಯಲ್ಲಿ ಜಾಹೀರಾತು ನೀಡಿದ್ದ ಅವರು ದಾಖಲೆ ಪತ್ರ ಸಿಕ್ಕಿದವರು ಮರಳಿಸುವಂತೆ ಕೋರಿದ್ದರು.

ಅದನ್ನು ನೋಡಿ ಕಳ್ಳ ಈ ರೀತಿ ಕೆಲಸ ಮಾಡಿರಬೇಕೆಂದು ಎನ್ನಲಾಗಿದೆ. ಕಳ್ಳನಾದರೂ ಈ ರೀತಿ ಉಪಕಾರ ಮಾಡಿದ ಆತನಿಗೆ ವಾರಸುದಾರರು ಬಯ್ಯಬೇಕೋ ಅಥವಾ ಕೃತಜ್ಞತೆ ಸಲ್ಲಿಸಬೇಕೋ ಎಂಬ ಗೊಂದಲಕ್ಕೀಡಾಗಿದ್ದಂತೂ ಸತ್ಯ.

Leave A Reply

Your email address will not be published.