ಮದುವೆ ಆಗಿ ಜತೆಗಿದ್ದದ್ದು ಕೇವಲ 5 ದಿನ | ಡೈವೋರ್ಸ್ ಗಾಗಿ ಕೋರ್ಟಲ್ಲಿ ಬಡಿದಾಡಿದ್ದು ಸುದೀರ್ಘ 26 ವರ್ಷ !

ನವದೆಹಲಿ: ದಂಪತಿಗಳು ಪರಸ್ಪರ ಒಬ್ಬರಿಗೊಬ್ಬರು ಜಿದ್ದಿಗೆ ಬಿದ್ದರೆ ಏನು ಅನರ್ಥ ಆಗಬಹುದು ಎನ್ನುವುದಕ್ಕೆ ಇದಕ್ಕಿಂತ ಒಳ್ಳೆಯ ಉದಾಹರಣೆ ಬೇರೆ ಸಿಗಲಿಕ್ಕಿಲ್ಲ. ಈ ದಂಪತಿ ಮದುವೆ ಆಗಿ ದಾಂಪತ್ಯ ಜೀವನ ನಡೆಸಿದ್ದು ಕೇವಲ ಐದಾರು ದಿನಗಳು; ಆದರೆ ವಿಚ್ಛೇದನಕ್ಕಾಗಿ ಸುದೀರ್ಘ 26 ವರ್ಷಗಳ ಕಾಲ ಕೋರ್ಟ್ ಅಲೆದಾಡಿವೆ ಈ ದುರದೃಷ್ಟವಂತ ದಂಪತಿಗಳು!

ಇದು ತ್ರಿಪುರಾ ಮೂಲದ ಐಎಎಸ್ ಅಧಿಕಾರಿಯ ಪುತ್ರಿ ಗ್ಮತ್ತು ಆಕೆಯ ಪತಿಯ ದುರಂತ ದಾಂಪತ್ಯದ ಕಥೆ. ಅವರಿಬ್ಬರಿಗೂ 1995ರಲ್ಲಿ ಇವರ ಮದುವೆಯಾಗಿದೆ. ಶ್ರೀಮಂತ ಮನೆತನದವಳಾಗಿರುವ ಕಾರಣ ಹಾಗೂ ತಮಗೇ ಒಬ್ಬಳೇ ಪುತ್ರಿ ಎನ್ನುವ ಕಾರಣ ಐಎಎಸ್ ಅಧಿಕಾರಿ, ಅಳಿಯನನ್ನು ಮನೆ ಅಳಿಯನನ್ನಾಗಿ ಇರುವಂತೆ ಹೇಳಿದ್ದಾರೆ. ಮಗಳು ಕೂಡ ಗಂಡನಿಗೆ ಒತ್ತಾಯ ಮಾಡಿದ್ದಾಳೆ. ಆದರೆ ಪತಿಗೆ ಇದು ಇಷ್ಟವಿರಲಿಲ್ಲ. ಏಕೆಂದರೆ ಅವರ ಮನೆಯಲ್ಲಿ ವಯಸ್ಸಾದ ತಾಯಿ, ನಿರುದ್ಯೋಗಿ ತಮ್ಮ ಇದ್ದು, ಅವರ ಜವಾಬ್ದಾರಿ ಈತನ ಮೇಲೆಯೇ ಇತ್ತು. ಅದಕ್ಕಾಗಿ ಮನೆ ಅಳಿಯ ಆಗಲು ಆತ ನಿರಾಕರಿಸಿದ್ದಾನೆ. ಅಲ್ಲಿಗೆ ‘ ಐಎಎಸ್ ‘ ಕುಟುಂಬದ ಅಹಂ ಹರ್ಟ್ ಆಗಿದೆ. ಅದೇ ಮಗಳ ಅಳಿಯನ ಬಾಳಿಗೆ ಶಾಶ್ವತ ಕತ್ತಲೆ ತಂದೊಡ್ಡಿದೆ.

ಅಲ್ಲಿಂದ ಶುರುವಾದ ಪರಸ್ಪರ ಕಚ್ಚಾಟ ಈ ಕ್ಷಣಕ್ಕೂ ನಿಂತಿಲ್ಲ. 1995ರಲ್ಲಿ ಶುರುವಾಗಿ, 2021 ಇನ್ನೇನು ಕೊನೆಗೆ ಬಂದು ನಿಂತಿದ್ದರೂ ಯಾವುದು ಇತ್ಯರ್ಥ ಆಗಿಲ್ಲ. ಪತಿ ವಿಚ್ಛೇದನ ಬೇಕು ಎಂದು, ಪತ್ನಿ ಬೇಡ ಎಂಬ ಹಠ ಹಿಡಿಯುತ್ತಾ ಕುಳಿತಿರುವ ಕಾರಣ, ಕೇಸು ಆ ಕೋರ್ಟ್, ಈ ಕೋರ್ಟ್ ಎಂದು ಕುಂಟುತ್ತಾ ಅಲೆದಾಡುತ್ತಲೇ ಮುಂದೆ ಸಾಗಿದೆ. ಅಷ್ಟರಲ್ಲಾಗಲೇ ಅವರಿಬ್ಬರ ಯೌವನ ಸೋರಿ ಹೋಗಿದ್ದು, ಇದೀಗ ಈಗ ಪತಿಗೆ 55, ಪತ್ನಿಗೆ 50 ವರ್ಷ ವಯಸ್ಸು!!

ಇಷ್ಟು ಸುದೀರ್ಘ ಅವಧಿಯ ನಂತರ ಸುಪ್ರೀಂಕೋರ್ಟ್ ಮುಂದೆ ಇಂದು ಈ ಪ್ರಕರಣದ ವಿಚಾರಣೆ ಬಂದಿದೆ. ಆಗ ನ್ಯಾಯಮೂರ್ತಿಗಳಾದ ಎಂ.ಆರ್.ಷಾ ಹಾಗೂ ಎ.ಎಸ್.ಬೋಪಣ್ಣ ಅವರಿದ್ದ ಪೀಠವು ಅರ್ಜಿಯನ್ನು ನೋಡಿ ನ್ಯಾಯಾಧೀಶರೊಬ್ಬರು ವಿಷಾದ ವ್ಯಕ್ತಪಡಿಸಿದ್ದಾರೆ. ನಂತರ ದಂಪತಿಯನ್ನು ಕರೆದು ಬುದ್ಧಿಮಾತು ಹೇಳಿದ್ದಾರೆ. ‘ ನೀವು ಇಡೀ ಬದುಕನ್ನು ಕೋರ್ಟ್‌ನಲ್ಲಿ ಪರಸ್ಪರ ಹೋರಾಟ ನಡೆಸುವ ಮೂಲಕ ಕಳೆದಿದ್ದೀರಿ. ನಿಮ್ಮಿಬ್ಬರಿಗೂ ಒಟ್ಟಿಗೆ ಜೀವಿಸಲು ಆಗುವುದೇ ಇಲ್ಲ ಎಂದಾದರೆ, ಪ್ರತ್ಯೇಕವಾಗಿ ವಾಸಿಸುವು ಲೇಸು ‘ ಎಂದಿದೆ ನ್ಯಾಯಪೀಠ.

ಪತ್ನಿಯ ಮಾತಿಗೆ ಅಸಮ್ಮತಿ ಸೂಚಿಸಿದ ಪತಿ ವಿಚ್ಛೇದನ ಕೋರಿ ತ್ರಿಪುರಾ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ತನಗೆ ವಿಚ್ಛೇದನ ಬೇಡ ಎಂದು ಪತ್ನಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಇದರ ನಡುವೆಯೇ ಜೀವನಾಂಶದ ಕುರಿತೂ ಪತ್ನಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಜೀವನಾಂಶದ ಅರ್ಜಿ ಇತ್ಯರ್ಥವಾಗಿರಲಿಲ್ಲ. ಈ ಮಧ್ಯೆಯೇ ಕೋರ್ಟ್ ಡಿವೋರ್ಸ್‌ಗೆ ಅನುಮತಿ ನೀಡಿತ್ತು.

ಜೀವನಾಂಶ ಕುರಿತ ವಿಷಯವು ಇತ್ಯರ್ಥವಾಗದ ಕಾರಣ ವಿಚ್ಛೇದನಕ್ಕೆ ಆದೇಶ ನೀಡಿದ ಹೈಕೋರ್ಟ್‌ನ ಕ್ರಮವು ಸರಿಯಾದುದಲ್ಲ ಎಂದು ಪತ್ನಿ ಮತ್ತೆ ಸುಪ್ರೀಂಕೋರ್ಟ್‌ನಲ್ಲಿ ವಾದಿಸಿದ್ದರು. ಆದರೆ ಇದ್ದದ್ದು ಐದಾರು ದಿನ ಮಾತ್ರ, ನನ್ನ ಬದುಕೇ ಸರ್ವನಾಶವಾಗಿದೆ. ಕಿರುಕುಳ ಸಹಿಸಿಕೊಳ್ಳಲು ಆಗದು, ವಿಚ್ಛೇದನ ಬೇಕೇ ಬೇಕು ಎಂದು ಪತಿ ವಾದಿಸಿದ್ದರು. ಜತೆಗೆ ಈಗ ಪತ್ನಿ ಜೊತೆ ಜೀವಿಸಲು ಇಷ್ಟವಿಲ್ಲ. ಜೀವನಾಂಶ ಕೊಡಲು ಸಿದ್ಧ ಎಂದಿದ್ದರು. ಆದರೆ ಜೀವನಾಂಶ ಬೇಕು ಎಂದು ಒತ್ತಾಯಿಸುತ್ತಿದ್ದ ಪತಿ ವಿಚ್ಛೇದನ ಕೊಟ್ಟಿದ್ದು ಸರಿಯಲ್ಲ ಎಂದು ಮತ್ತೊಂದು ಕೇಸು ಹಾಕಿದರು. ಹೀಗೆ ಬದುಕಿನ ಬಂಡಿ ಎಳೆಯಲಾಗದೇ ಎಳೆದಾಡುತ್ತಾ ಕೇಸು ಸಾಗಿದೆ.

ಈಗ ಕೋರ್ಟ್, ನಿಮ್ಮಿಬ್ಬರಿಗೂ ಒಟ್ಟಿಗೆ ಜೀವಿಸಲು ಆಗುವುದೇ ಇಲ್ಲ ಎಂದಾದರೆ, ಪ್ರತ್ಯೇಕವಾಗಿ ವಾಸಿಸುವುದೇ ಲೇಸು ಎಂದಿದ್ದು, ಈ ಬಗ್ಗೆ ಒಮ್ಮತದ ತೀರ್ಮಾನಕ್ಕೆ ಬನ್ನಿ ಎಂದು ಹೇಳುವ ಮೂಲಕ ಅರ್ಜಿಯ ವಿಚಾರಣೆಯನ್ನು ಮುಂದಕ್ಕೆ ಹಾಕಿದೆ. ಮತ್ತೆ ಸೋರಿ ಹೋಗಲಿದೆ ಕಾಲ !!

Leave A Reply

Your email address will not be published.