ಕಾಡುಹಂದಿಯೆಂದು ತಿಳಿದು ಹೊಡೆದ ಗುಂಡು ಯುವಕನ ಹೊಟ್ಟೆಗೆ!!| ಬೇಟೆಗಾರರು ಪೊಲೀಸ್ ವಶಕ್ಕೆ

ಕಾಡುಹಂದಿಯ ಬೇಟೆಗೆ ಬಂದಿದ್ದ ಹವ್ಯಾಸಿ ಬೇಟೆಗಾರರಿಂದ ಹಂದಿ ಎಂದು ತಿಳಿದು ಹೊಡೆದ ಗುಂಡು ಯುವಕನಿಗೆ ತಗುಲಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮೇಳಾಪುರ ಗ್ರಾಮದ ಹೊರವಲಯದಲ್ಲಿ ಈ ದುರಂತ ಸಂಭವಿಸಿದೆ. ಮಾದೇಶ್ (25) ಎಂಬ ಯುವಕನಿಗೆ ಗುಂಡೇಟು ತಗುಲಿದೆ.

ಮೈಸೂರು ಜಿಲ್ಲೆಯ 6 ಮಂದಿ ಯುವಕರ ತಂಡ ಬೇಟೆಗೆ ಬಂದಿತ್ತು. ನಾಡಬಂದೂಕು ಬಳಸಿ ಕಾಡುಹಂದಿ ಬೇಟೆಗೆ ಈ ತಂಡ ಬಂದಿತ್ತು. ಮಾದೇಶ ಅವರ ಕಬ್ಬಿನ ಗದ್ದೆಯಲ್ಲಿ ಹಂದಿಗಾಗಿ ತಂಡ ಶೋಧ ನಡೆಸುತ್ತಿತ್ತು. ಈ ಸಮಯದಲ್ಲಿ ಅದೇ ಗದ್ದೆಯ ಬದುವಿನಲ್ಲಿ ಮಾದೇಶ ಹುಲ್ಲು ಕೊಯ್ಯುತ್ತಿದ್ದ. ಕಬ್ಬಿನ ಗರಿಗಳು ಅಲುಗಾಡುತ್ತಿದ್ದನ್ನು ಗಮನಿಸಿದ ತಂಡ ಹಂದಿ ಇರಬಹುದು ಎಂದುಕೊಂಡು ಫೈರಿಂಗ್ ಮಾಡಿದೆ. ಇದು ಮಾದೇಶನಿಗೆ ತಗುಲಿದೆ.

ಗಾಯಗೊಂಡ ಯುವಕ

ಮಾದೇಶನ ಹೊಟ್ಟೆ ಭಾಗಕ್ಕೆ ಗುಂಡು ತಗುಲಿ ಗಂಭೀರ ಗಾಯವಾಗಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆರು ಮಂದಿ ಯುವಕರ ಪೈಕಿ ಮೂವರನ್ನು ಹಿಡಿದು ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದು, ತನಿಖೆ ನಡೆಯುತ್ತಿದೆ ಎಂದು ತಿಳಿದುಬಂದಿದೆ‌.

Leave A Reply

Your email address will not be published.