ನೋ ವ್ಯಾಕ್ಸಿನೇಷನ್- ನೋ ರೇಷನ್, ನೋ ವ್ಯಾಕ್ಸಿನೇಷನ್-ನೋ ಪೆನ್ಷನ್ | ಇನ್ನು ಮುಂದೆ ಲಸಿಕೆ ಪಡೆದುಕೊಳ್ಳದವರಿಗೆ ರೇಷನ್, ಪೆನ್ಷನ್ ಎರಡೂ ಕಟ್ !!

ಕರ್ನಾಟಕದಲ್ಲಿ ಕೊರೋನಾ ಲಸಿಕೆ ಈಗ ಸಾಮಾನ್ಯವಾಗಿ ಎಲ್ಲಾ ಕಡೆಗಳಲ್ಲೂ ದೊರೆಯುತ್ತಿದೆ. ದಿನಾಲೂ ಲಸಿಕೆ ಪಡೆದುಕೊಳ್ಳಲು ಜನ ಸಾಲುಗಟ್ಟಿ ನಿಂತಿರುತ್ತಾರೆ. ಹಾಗಿದ್ದರೂ ಕೆಲ ಜನರು ಲಸಿಕೆ ಪಡೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ನೀವು ಕೂಡ ಕೊರೋನಾ ಲಸಿಕೆ ಹಾಕಿಸಿಕೊಳ್ಳುವುದಿಲ್ಲವೇ? ಹಾಗಿದ್ದರೆ ನಿಮಗೆ ಇನ್ನು ಮುಂದೆ ರೇಷನ್ ಮತ್ತು ಪೆನ್ಷನ್ ಕಟ್!!

ಹೌದು, ಇಂತಹದ್ದೊಂದು ಆದೇಶ ಗಡಿ ಜಿಲ್ಲೆ
ಚಾಮರಾಜನಗರದಲ್ಲಿ ಜಾರಿಯಾಗಿದೆ. ನೋ ವ್ಯಾಕ್ಸಿನೇಷನ್- ನೋ ರೇಷನ್, ನೋ ವ್ಯಾಕ್ಸಿನೇಷನ್-ನೋ ಪೆನ್ಷನ್ . ವ್ಯಾಕ್ಸಿನೇಷನ್ ಪ್ರಮಾಣ ಪತ್ರ ತಂದರೆ ಮಾತ್ರ ಫಲಾನುಭವಿಗಳಿಗೆ ಪಡಿತರ ವಿತರಿಸುವಂತೆ ನ್ಯಾಯಬೆಲೆ ಅಂಗಡಿಗಳಿಗೆ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಸೂಚಿಸಿದ್ದಾರೆ.

ಅಷ್ಟೇ ಅಲ್ಲದೆ ಮಾಸಾಶನ ಪಡೆಯಬೇಕಿದ್ದರೂ ವ್ಯಾಕ್ಸಿನೇಷನ್ ಪ್ರಮಾಣಪತ್ರ ಬೇಕೇಬೇಕು. ಈ ಪತ್ರ ತಂದರಷ್ಟೇ ಹಣ ಪಾವತಿಸುವಂತೆ ಎಲ್ಲ ಬ್ಯಾಂಕ್‌ಗಳಿಗೂ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

ಜಿಲ್ಲೆಯಲ್ಲಿ 2.90 ಲಕ್ಷ ಬಿಪಿಎಲ್, ಅಂತ್ಯೋದಯ ಪಡಿತರದಾರರಿದ್ದಾರೆ. ಸಂಧ್ಯಾಸುರಕ್ಷಾ, ವಿಧವಾ ವೇತನ, ಅಂಗವಿಕಲ ವೇತನ ಸೇರಿದಂತೆ 2.20 ಸಾವಿರ ಮಂದಿ ಮಾಸಾಶನ ಫಲಾನುಭವಿಗಳಿದ್ದಾರೆ.

ಜಿಲ್ಲೆಯ ಹಾಡಿಗಳಲ್ಲಿ, ಕಾಡಂಚಿನ ಗ್ರಾಮಗಳ ಬಹುತೇಕರು ಕೊರೋನಾ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಎಷ್ಟೇ ಮನವೊಲಿಸಿದರೂ ಹಲವರು ಲಸಿಕೆ ಬೇಡ ಎಂದು ವಾಗ್ವಾದ ಮಾಡುತ್ತಿರುವ ಘಟನೆ ಮರುಕಳಿಸುತ್ತಲೇ ಇತ್ತು.

ಲಸಿಕಾಕರಣಕ್ಕೆ ವೇಗ ನೀಡಲು ಮತ್ತು ಕೊರೋನಾ ಸೋಂಕು ಗಂಭೀರತೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಅವರ ಆರೋಗ್ಯ ಸುರಕ್ಷತೆಗಾಗಿ ಚಾಮರಾಜನಗರ ಜಿಲ್ಲಾಡಳಿತ ವಿಭಿನ್ನ ಅಭಿಯಾನ ಹಮ್ಮಿಕೊಂಡಿದೆ. ಈ ಅಭಿಯಾನದಿಂದ ಎಚ್ಚೆತ್ತುಕೊಂಡ ಜನರು ಈಗ ವ್ಯಾಕ್ಸಿನ್ ಗಾಗಿ ಮುಗಿಬೀಳುತ್ತಿದ್ದಾರೆ.

ಜಿಲ್ಲಾಡಳಿತದ ಈ ಕ್ರಮಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಈ ರೀತಿಯ ಕ್ರಮಗಳನ್ನು ಕರ್ನಾಟಕ ರಾಜ್ಯಾದ್ಯಂತ ಮಾಡಿದ್ದರೆ ಕೊರೋನಾ ವಿರುದ್ಧ ಆದಷ್ಟು ಬೇಗ ಜಯಗಳಿಸಬಹುದು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

Leave A Reply

Your email address will not be published.