ಅಜ್ಜಿಯ ಹಲ್ಲಿನ ಸೆಟ್ ಹಾಳು ಮಾಡಿದ ಬಾಲಕಿಯ ಕೊಂದ ಕಿರಾತಕ

ತಾಯಿಯ ಹಲ್ಲಿನ ಸೆಟ್ ನಾಶ ಮಾಡಿದಳೆಂಬ ಕಾರಣಕ್ಕೆ ಯುವಕನೊಬ್ಬ ಆರು ವರ್ಷದ ಬಾಲಕಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.

ಈ ಸಂಬಂಧ ಆರೋಪಿ ಯನ್ನು ಪೊಲೀಸರು ಬಂಧಿಸಿದ್ದಾರೆ.

ಆ.9 ರಂದು ವಿಜಯಪುರ ಜಿಲ್ಲೆಯ ಮಿರಗಿ ಗ್ರಾಮದಲ್ಲಿ ಬೋಳೆಗಾಂವ ಮೂಲದ ಆರು ವರ್ಷದ ಬಾಲಕಿ ಗ್ರಾಮದ ಹನುಮಂತ ದೇವಸ್ಥಾನದ ಬಳಿ ಆಡುತ್ತಿದ್ದಾಗ ಕಣ್ಮರೆಯಾಗಿದ್ದಳು. ಜೊತೆಗಿದ್ದ ಆಕೆಯ ಸಹೋದರಿ ಮನೆಗೆ ಬಂದರೂ ಈ ಬಾಲೆ ಮನೆಗೆ ಮರಳದ ಕಾರಣ ಗ್ರಾಮದಲ್ಲಿ ಹುಡುಕಿದ ಪಾಲಕರು ಹೋರ್ತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡು ಇಂಡಿ ಡಿವೈಎಸ್ ಪಿ ಶ್ರೀಧರ ದೊಡ್ಡಿ ನೇತೃತ್ವದಲ್ಲಿ ತನಿಖೆ ಇಳಿದ ಇಂಡಿ ಸಿಪಿಐ ರಾಜಶೇಖರ, ಹೊರ್ತಿ ಎಸ್.ಐ ಎನ್.ಬಿ.ಶಿವುರ ಹಾಗೂ ಪೊಲೀಸ್ ಸಿಬ್ಬಂದಿಗೆ ಆಘಾತ ಕಾದಿತ್ತು. ಸಾಕ್ಷಿ, ಪುರಾವೆ ಸಿಗದಂತೆ ಆರೋಪಿ ನಾಶ ಮಾಡಿದ್ದರಿಂದ ಪ್ರಕರಣ ಅತೀ ಸೂಕ್ಷ್ಮತೆಯಿಂದ ಕೂಡಿತ್ತು.

ಘಟನಾ ಸ್ಥಳವನ್ನು ಪರಿಶೀಲಿಸಿದ ಪೊಲೀಸ ತನಿಖಾ ಕೊನೆಗೂ ಆ.15 ರಂದು ಬೋಳೆಗಾಂವ ಗ್ರಾಮದಲ್ಲಿ ಸಂಗನಗೌಡ ಬಾಬುಗೌಡ ಬಿರಾದಾರ (24 ವ) ವಿಚಾರಣೆ ನಡೆಸಿದಾಗ ತಾನೇ ಹತ್ಯೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ.

ಓಣಿ ನಿವಾಸಿ ಬಾಲಕಿ ಆಟವಾಡುವಾಗ ಸಂಗನಗೌಡನ ಅಜ್ಜಿಯ ಹಲ್ಲಿನ ಸೆಟ್ ಹಾಳು ಮಾಡಿದ್ದಳು.‌ ಇದರಿಂದ ಆಕೆ ಊಟ ಮಾಡಲು ಸಂಕಟ ಪಡಲು ಈ ಬಾಲಕಿಯೇ ಕಾರಣ ಎಂದು ಸಿಟ್ಟಿನಿಂದ ಆಕೆಯನ್ನು ಅಪಹರಿಸಿ, ಹತ್ಯೆ ಮಾಡಿ, ಸಾಕ್ಷಿ-ಪುರಾವೆ ನಾಶ ಮಾಡಿದ್ದನ್ನು ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಎಸ್ ಪಿ ಆನಂದ್ ಕುಮಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಅಲ್ಲದೇ ಸದರಿ ಕ್ಲಿಷ್ಟಕರ ಪ್ರಕರಣ ಬೇಧಿಸುವಲ್ಲಿ ಯಶಸ್ವಿ ಆಗಿರುವ ತನಿಖಾ ತಂಡವನ್ನು ಶ್ಲಾಘಿಸಿದ್ದು, ನಗದು ಬಹುಮಾನ ಘೋಷಿಸಿದ್ದಾರೆ.

Leave A Reply

Your email address will not be published.