ಮೊದಲನೇ ಪ್ರೀತಿ ಎರಡನೇ ಮದುವೆ | ಆದರೆ ಆದದ್ದು ಮಾತ್ರ ದುರಂತ ಅಂತ್ಯ

ಮದುವೆಯಾಗಿ ಕೇವಲ 4 ತಿಂಗಳಿಗೆ ಗಂಡನನ್ನು ಬಿಟ್ಟು ಬಂದು, ಪ್ರೀತಿಸಿದ್ದ ಹುಡುಗನ ಜೊತೆ ಎರಡನೆಯ ಮದುವೆಯಾಗಿ ಇದೀಗ ಅನುಮಾನಾಸ್ಪದವಾಗಿ ಯುವತಿ ಸಾವನ್ನಪ್ಪಿದ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಕೆಲೂರು ಗ್ರಾಮದಲ್ಲಿ ನಡೆದಿದೆ.

20 ವರ್ಷದ ಬಸಮ್ಮ ಮಾದರ್ ಆತ್ಮಹತ್ಯೆ ಮಾಡಿಕೊಂಡ ಯುವತಿ. ಯಾರು ವಾಸವಿಲ್ಲದ ತೋಟದ ಮನೆಯಲ್ಲಿ ಆಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ನಾಲ್ಕು ತಿಂಗಳ ಹಿಂದೆ ಗದಗ ಜಿಲ್ಲೆಯ ರೋಣ ತಾಲೂಕಿನ ಶಾಂತಗಿರಿ ಗ್ರಾಮದ ಯುವಕನೊಬ್ಬನ ಜೊತೆ ಬಸಮ್ಮಳ ಮದುವೆಯಾಗಿತ್ತು. ಕೆಲ ದಿನಗಳಿಂದ ಬಸಮ್ಮ ಗಂಡನನ್ನ ಬಿಟ್ಟು, ಕೆಲೂರು ಗ್ರಾಮದಲ್ಲಿ ವಾಸವಾಗಿದ್ದಳು.

ಮದುವೆಗೆ ಮೊದಲು ಪ್ರೀತಿ ಮಾಡುತ್ತಿದ್ದ ರಂಜಿತ್ ಪಂಚನ್ನವರ್ ಎಂಬವನ ಜೊತೆ ಮರು ಸಂಪರ್ಕ ಹೊಂದಿ ಕೆಲ ದಿನಗಳ ಹಿಂದೆ ಪೊಲೀಸ್ ಠಾಣೆಯಲ್ಲಿ ಇನಿಯನ ಜೊತೆ ಮದುವೆ ಕೂಡ ಆಗಿದ್ದಳು.

ಆದರೆ ಮದುವೆಗೆ ರಂಜಿತ್ ಕುಟುಂಬಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಶುಕ್ರವಾರ ಬಸಮ್ಮ ತೋಟದ ಮನೆಯಲ್ಲಿ ನೇಣಿಗೆ ಶರಣಾಗಿರುವ ವಿಷಯ ತಿಳಿದು ರಂಜಿತ್ ಮನೆಯವರು ಎಸ್ಕೇಪ್ ಆಗಿದ್ದಾರೆ.

ಸ್ಥಳಕ್ಕೆ ಸ್ಥಳೀಯ ಪೊಲೀಸರು ಆಗಮಿಸಿ, ತನಿಖೆ ಮುಂದುವರಿಸಿದ್ದಾರೆ.

Leave A Reply

Your email address will not be published.