15 ನೇ ವಯಸ್ಸಿನಲ್ಲಿ ಕೊಲೆ ಮಾಡಿದರು, 30 ನೇ ವಯಸ್ಸಿನಲ್ಲಿ ಸಿಕ್ಕಿಬಿದ್ದರು

ಚಿಕ್ಕಬಳ್ಳಾಪುರ: 15 ವರ್ಷಗಳ ನಂತರ ಬೆರಳಚ್ಚುಗಳ ಸಹಾಯದಿಂದ ಕೊಲೆಗಾರರು ಪತ್ತೆಯಾಗಿರುವ ಅಪರೂಪದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.

ಆರೋಪಿಯನ್ನು ವೀರು ಅಲಿಯಾಸ್ ಜೈ ವೀರು ಎಂದು ಗುರುತಿಸಲಾಗಿದ್ದು, 2006ರ ನವೆಂಬರ್ 5 ರಂದು ಬಂಧಿತ ವೀರು ಬೆಂಗಳೂರಿನ ಯಶವಂತಪುರದ ಬಿ.ಕೆ ನಗರದಲ್ಲಿ ವೀಡಿಯೋ ಗೇಮ್ ಸೆಂಟರ್‍ನ ಮಾಲೀಕ ಶಶಿಧರನ್ ಎಂಬವರನ್ನ ಹಣಕ್ಕಾಗಿ ಕೊಲೆ ಮಾಡಿ ಪರಾರಿಯಾಗಿದ್ದ. ವೀರು ಜೊತೆ ಮತ್ತಿಬ್ಬರು ಸೇರಿ ಹಗ್ಗದಿಂದ ಕೈ ಕಾಲು ಕಟ್ಟಿ ಹಾಕಿ ಬಾಯಿಗೆ ಪ್ಲಾಸ್ಟರ್ ಹಾಕಿ ಹಲ್ಲೆ ಮಾಡಿ ಕೊಲೆ ಮಾಡಿದ್ದರು.

ಇದೇ ವೀರು, 2010ರ ಮೇ 5ರಂದು ನಂದಿ ಗಿರಿಧಾಮದಲ್ಲಿ ತನ್ನಿಬ್ಬರು ಸಹಚರರ ಜೊತೆ ಸೇರಿ ಎಚ್.ಎಸ್.ಆರ್ ಲೇಔಟ್ ನಿವಾಸಿ ವಾಸೀತ್ ನಿಸಾರ್ ಎಂಬವರ ಬಳಿ 3 ಚಿನ್ನದ ಸರ ಕಳವು ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಅಂದು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಆರೋಪಿ ವೀರು ನನ್ನ ಬಂಧಿಸಿ ಜೈಲುಗಟ್ಟಿದ್ದರು. ಕಳ್ಳತನ ಪ್ರಕರಣದಲ್ಲಿ ಈತನ ಬೆರಳಚ್ಚುಗಳನ್ನ ಸಹ ಸಂಗ್ರಹಿಸಿಟ್ಟುಕೊಂಡಿದ್ದರು.

ಈಗ ಈತನ ಬೆರಳಚ್ಚುಗಳು ಆಟೋಮೆಟೆಡ್ ಫಿಂಗರ್ ಪ್ರಿಂಟ್ ಐಡೆಂಟಿಟಿ ಸಿಸ್ಟಂನಲ್ಲಿ ಪರಿಶೀಲನೆ ಮಾಡುತ್ತಿದ್ದಾಗ ಈತನ ಬೆರಳಚ್ಚುಗಳು ಯಶವಂತಪುರದಲ್ಲಿ ನಡೆದಿದ್ದ ಶಶಿಧರನ್ ಕೊಲೆ ಪ್ರಕರಣಕ್ಕೆ ತಾಳೆಯಾಗಿವೆ. ಹೀಗಾಗಿ ಆರೋಪಿ ವೀರುನನ್ನು ಯಶವಂತಪುರ ಪೊಲೀಸರು ಬಂಧಿಸಿದ್ದು, ಕೊಲೆ ಪ್ರಕರಣವನ್ನು ಒಪ್ಪಿಕೊಂಡಿದ್ದಾನೆ.

ವೀರು ತನ್ನ ಸ್ನೇಹಿತರಾದ ಅವಿನಾಶ್ ಹಾಗೂ ಮೋಸಿನ್ ಖಾನ್ ಜೊತೆ ಸೇರಿ ಕೊಲೆ ಮಾಡಿದ್ದು, ಅವರನ್ನು ಕೂಡ ಬಂಧಿಸಲಾಗಿದೆ. ಇನ್ನು ಕೊಲೆ ನಡೆದಾಗ ಈ ಮೂವರು ಆರೋಪಿಗಳು 14-15 ವರ್ಷದವರಾಗಿದ್ದರು. ಇನ್ನೂ ಕೊಲೆ ಪ್ರಕರಣದಲ್ಲಿ ಆರೋಪಿಗಳು ಸುಳಿವು ಸಿಗಲಿಲ್ಲ ಅಂತ ಪೊಲೀಸರು ಘನ ನ್ಯಾಯಾಲಯಕ್ಕೆ ಅಂತಿಮ ವರದಿಯನ್ನು ಸಹ ಸಲ್ಲಿಕೆ ಮಾಡಿದ್ದರು. ಆದರೆ ಈಗ ಬೆರಳಚ್ಚುಗಳ ಮೂಲಕ ಕೊಲೆಗಡುಕರು ಸಿಕ್ಕಿಬಿದ್ದಿದ್ದು, ಪ್ರಕರಣಕ್ಕೆ ಮತ್ತೆ ಜೀವ ಬಂದಿದೆ.

Leave A Reply

Your email address will not be published.