ಡಿ.ಕೆ.ಶಿಗೆ ತುಳುನಾಡಿನ ದೈವಗಳ ಆಯುಧ ( ಕಡ್ತಲೆ) ನೀಡಿ ಉಡುಪಿ ಕಾಂಗ್ರೆಸ್ ನಾಯಕರ ಯಡವಟ್ಟು | ತುಳುವರಿಂದ ವ್ಯಾಪಕ ಆಕ್ರೋಶ !
ಉಡುಪಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಉಡುಪಿ ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ತುಳುನಾಡಿನ ದೈವಗಳ ಕಡ್ತಲೆಯನ್ನು ಉಡುಗೂರೆಯಾಗಿ ನೀಡಿ ಎಡವಟ್ಟು ಮಾಡಿಕೊಂಡಿದ್ದು, ಇದಕ್ಕೆ ಎಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಉಡುಪಿ ಜಿಲ್ಲಾ ಕಾಂಗ್ರೆಸ್ ಭವನಕ್ಕೆ ಡಿ.ಕೆ. ಶಿವಕುಮಾರ್ ಭೇಟಿ ನೀಡಿದ ವೇಳೆ ಕಾಂಗ್ರೆಸ್ ಮುಖಂಡರು ಬೆಳ್ಳಿಯ
ದೈವದ ಕಡ್ತಲೆ (ಕತ್ತಿ) ನೀಡಿ ಸ್ವಾಗತ ಮಾಡಿದ್ದಾರೆ. ಕಾಂಗ್ರೆಸ್ ಮುಖಂಡರ ಈ ಕಾರ್ಯಕ್ಕೆ ತುಳುವರು ಉರಿದು ಬಿದ್ದಿದ್ದಾರೆ.
ಕರಾವಳಿ ಜನರು ಶ್ರದ್ಧಾ ಭಕ್ತಿಯಿಂದ ಆರಾಧಿಸುವ ದೈವಗಳ ಆಯುಧ ಸಾಮಾನ್ಯವಾಗಿ ದೈವಗಳ ಗುಡಿಯಲ್ಲಿಟ್ಟು ಪೂಜೆ ಮಾಡಲಾಗುತ್ತದೆ. ಆದರೆ ಕಾಂಗ್ರೆಸ್ ಮುಖಂಡರು ಅದೇ ಆಯುಧವನ್ನು ಡಿ.ಕೆ. ಶಿವಕುಮಾರ್ಗೆ ನೀಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಈ ಆಯುಧಕ್ಕೆ ಭಾರೀ ಹಿನ್ನಲೆ ಮತ್ತು ಮಹತ್ವವಿದ್ದು, ದೈವಪಾತ್ರಿಗಳಲ್ಲದೆ ಬೇರೆ ಯಾರೂ ಹಿಡಿಯುವಂತಿಲ್ಲ ಎಂಬ ನಿಯಮ ಕೂಡಾ ಕರಾವಳಿಯಲ್ಲಿದೆ. ಇದರ ಹೊರತಾಗಿಯೂ ಕಾಂಗ್ರೆಸ್ ಮುಖಂಡರು ಈ ಆಯುಧ ನೀಡಿರುವುದು ವಿವಾದವನ್ನು ಹುಟ್ಟುಹಾಕಿದೆ. ಅತ್ತ ಬಿಜೆಪಿಯವರು, ‘ ಇನ್ನು ಡಿಕೆಶಿ ಯನ್ನು ಕಂಟ್ರೋಲ್ ಮಾಡುವುದಕ್ಕೆ ನಮಗೆ ತಲೆಬಿಸಿ ಇಲ್ಲ. ಎಲ್ಲಾ ಆ ದೈವ ನೋಡಿಕೊಳ್ತದೆ ‘ ಎಂದು ಟ್ರೋಲ್ ಮಾಡ್ತಿದ್ದಾರೆ.