ಪುತ್ತೂರು : ಹನಿಟ್ರ್ಯಾಪ್ ಗೆ ಒಳಗಾದ ಯುವಕ | ಯುವತಿಯ ಬಂಧನ

ಹನಿಟ್ರ್ಯಾಪ್‌ಗೊಳಗಾದ ಯುವಕನೋರ್ವ ಲಕ್ಷಾಂತರ ರೂಪಾಯಿ ಕಳೆದುಕೊಂಡಿರುವ ಘಟನೆ ಪುತ್ತೂರು ತಾಲೂಕಿನಲ್ಲಿ ನಡೆದಿದೆ. ಈ ಬಗ್ಗೆ ಆತ 7 ಮಂದಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಈ ಪೈಕಿ ಯುವತಿಯೋರ್ವಳನ್ನು ಪೊಲೀಸರು ಬಂಧಿಸಿರುವ ಘಟನೆ ವರದಿಯಾಗಿದೆ.

ಪುತ್ತೂರು ತಾಲೂಕು ನೆಟ್ಟಣಿಗೆ ಮುನ್ನೂರು ಗ್ರಾಮದ ಚೀಚಗದ್ದೆ ನಿವಾಸಿ ಇಬ್ರಾಹಿಂ ಎಂಬವರ ಪುತ್ರ, ವೃತ್ತಿಯಲ್ಲಿ ಸೇಲ್ಸ್‌ಮ್ಯಾನ್ ಆಗಿರುವ ಅಬ್ದುಲ್ ನಾಸೀರ್ (25)ಎಂಬವರು ಹನಿಟ್ರ್ಯಾಪ್‌ಗೆ ಬಲಿಯಾಗಿ ರೂ.30 ಲಕ್ಷ ಕಳೆದುಕೊಂಡಿರುವುದಾಗಿ ಪೊಲೀಸರಿಗೆ ದೂರು ನೀಡಿದವರು.

ಘಟನೆ ಎ.12ಕ್ಕೆ ನಡೆದಿದ್ದು, ಇದೀಗ ಪೊಲೀಸ್ ಮೇಲಾಧಿಕಾರಿಗಳ ಸೂಚನೆಯಂತೆ ಅವರು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ನೆಟ್ಟಣಿಗೆ ಮುನ್ನೂರು ಚೀಚಗದ್ದೆಯ ಹನೀಫ್ ಯಾನೆ ಕೆಎಂವೈ ಹನೀಫ್, ಕೊಟ್ಯಾಡಿಯ ಮಹಮ್ಮದ್ ಕುಂಞ, ಕೊಟ್ಯಾಡಿಯ ಶಾಫಿ, ಸವಣೂರಿನ ಅಝರ್, ಸಯೀದ್ ಮೋನು, ನಾಸಿರ್ ಮತ್ತು ಕಾರ್ಕಳದವಳೆಂದು ಪರಿಚಯಿಸಿಕೊಂಡಿದ್ದ ತನೀಶಾ ಎಂಬವರ ವಿರುದ್ಧ ಅವರು ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.

ತನಿಖೆ ಕೈಗೆತ್ತಿಗೊಂಡ ಉಪವಿಭಾಗದ ಡಿವೈಎಸ್ಪಿ ಡಾ.ಗಾನ ಪಿ.ಕುಮಾರ್ ನೇತೃತ್ವದ ಪೊಲೀಸರು ಪ್ರಕರಣದ ಆರೋಪಿಗಳ ಪೈಕಿ ತನೀಶಾ ಎಂಬವರನ್ನು ಬಂಧಿಸಿದ್ದಾರೆ. ಉಳಿದ ಆರು ಮಂದಿ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಹನಿಟ್ರಾಪ್ ಮಾಡುವ ಜಾಲವೇ ಇದಾಗಿದ್ದು, ಈ ರೀತಿ ಅದೆಷ್ಟು ಜನರಿಗೆ ಮೋಸ ಮಾಡಿದ್ದಾರೆ ಎಂಬ ಸತ್ಯ ಇನ್ನಷ್ಟು ತನಿಖೆ ಮೂಲಕ ಹೊರಬೀಳುವ ಸಾಧ್ಯತೆಯಿದೆ.

Leave A Reply

Your email address will not be published.