ವಿಟ್ಲದಲ್ಲಿ ಕಲ್ಲಿನ ಕೋರೆ ನಡೆಸುತ್ತಿರುವ ಈಶ್ವರಮಂಗಲದ ವ್ಯಕ್ತಿಗೆ ಬ್ಲೇಡ್ ಸಾದಿಕ್ ತಂಡದಿಂದ ಕಛೇರಿಗೆ ನುಗ್ಗಿ ಬೆದರಿಕೆ | ಪೊಲೀಸರಿಗೆ ದೂರು

ಬಂಟ್ವಾಳ : ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಕಲ್ಲಿನಕೋರೆ ನಡೆಸುತ್ತಿರುವ ಪುತ್ತೂರು ತಾಲೂಕಿನ ಈಶ್ವರಮಂಗಲ ಸಮೀಪದ ವ್ಯಕ್ತಿಗೆ ಕಲ್ಲಿನ ಕೋರೆಯ ಕಛೇರಿಗೆ ನುಗ್ಗಿ ಬ್ಲೇಡ್ ಸಾದಿಕ್ ತಂಡ ಬೆದರಿಕೆ ಹಾಕಿದೆ ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಟ್ಲ ನಿವಾಸಿ ಬ್ಲೇಡ್ ಸಾದಿಕ್ , ಆತನ ಸಹೋದರ ಸಫ್ರೀನ್ ಮತ್ತು ಇನ್ನೋರ್ವ ತನ್ನ ಕ್ವಾರಿಯ ಕಚೇರಿಗೆ ನುಗ್ಗಿ ಕ್ವಾರಿಯ ಮೆನೇಜರ್ ಗೆ ನಿಂದಿಸಿ, ಬೆದರಿಕೆ ಒಡ್ಡಿದ್ದಾರೆ ಎಂದು ಪುತ್ತೂರು ತಾಲೂಕಿನ ಈಶ್ವರಮಂಗಲ ಸಮೀಪದ ಪಡವನ್ನೂರು ಗ್ರಾಮದ ಪುಂಡಿಕಾಯಿ ನಿವಾಸಿ ಎನ್‌.ಎಸ್‌. ಅಬ್ದುಲ್‌ ಕುಂಞ ಅವರು ವಿಟ್ಲ ಠಾಣೆಗೆ ದೂರು ನೀಡಿದ್ದಾರೆ.

ವಿಟ್ಲಮುಡ್ನೂರು ಗ್ರಾಮದ ಕಂಬಳಿಮೂಲೆಯಲ್ಲಿರುವ ಎನ್.ಎಸ್. ಕಪ್ಪುಕಲ್ಲು ಹುಡಿ ಮಾಡುವ ಘಟಕಕ್ಕೆ ಇನ್ನೋವಾ ಕಾರಿನಲ್ಲಿ ಬಂದ ಆರೋಪಿಗಳಾದ ಸಫ್ರಿನ್‌ ಹಾಗೂ ಇನ್ನೊಬ್ಬ ಕಲ್ಲುಪುಡಿ ಮಾಡುವ ಘಟಕದ ಕಚೇರಿ ಕೋಣೆಗೆ ಬಂದು ಕಚೇರಿಯಲ್ಲಿದ್ದ ಮ್ಯಾನೇಜರಗಳಾದ ರವಿಚಂದ್ರ ಹಾಗೂ ಯಾಸೀನ್‌ ಎಂಬವರಿಗೆ ಬೆದರಿಕೆ ಒಡ್ಡಿದ್ದಾರೆ.

ನೀವು ಕಪ್ಪುಕಲ್ಲು ವ್ಯವಹಾರ ನಮಗೆ ನೀಡಬೇಕು. ಇಲ್ಲದಿದ್ದರೆ ನಿಮ್ಮ ಧಣಿಯನ್ನು ಜೀವಂತ ಬಿಡುವುದಿಲ್ಲ ಎಂದು ನಮ್ಮ ತಂಡದ ಮುಖ್ಯಸ್ಥ ಸಾದೀಕ್ ತಿಳಿಸಲು ನಮ್ಮನ್ನು ಇಲ್ಲಿಗೆ ಕಳುಹಿಸಿದ್ದಾನೆ ಎಂದು ಬೆದರಿಕೆ ಹಾಕಿದ್ದು, ಬಳಿಕ ಮಾಲಕ ಅಬ್ದುಲ್ ಕುಂಞ ಅವರ ಮೊಬೈಲ್‌ ನಂಬರ್ ಗೆ ಕರೆ ಮಾಡಿ ವ್ಯವಹಾರದ ಪಾಲುದಾರಿಕೆ ನೀಡಬೇಕು” ನೀನು ಈಶ್ವರ ಮಂಗಲದಿಂದ ಬಂದು ಈ ಊರಿನಲ್ಲಿ ವ್ಯವಹಾರ ಹೇಗೆ ನಡೆಸುತ್ತಿಯಾ ಎಂದು ನಿಂದಿಸಿ ಕ್ವಾರಿಯಲ್ಲಿ ಪಾಲುದಾರಿಕೆ ನೀಡದೆ ಇದ್ದರೆ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Leave A Reply

Your email address will not be published.