ರಾತ್ರಿ ಮಲಗಿದ್ದ ತಂದೆ ಮೇಲೆ ರುಬ್ಬುವ ಕಲ್ಲನ್ನು ಎತ್ತಿ ಹಾಕಿ ಕೊಲೆ ಮಾಡಿದ ಪಾಪಿ ಮಗ

ಕೋಲಾರ: ರಾತ್ರಿ ಮಲಗಿದ್ದ ತಂದೆಯ ತಲೆಗೆ ಪಾಪಿ ಮಗನೊಬ್ಬ ರುಬ್ಬುವ ಕಲ್ಲನ್ನು ಎತ್ತಿ ಹಾಕಿ ಕೊಲೆ ಮಾಡಿದ ಘಟನೆ ಶ್ರೀನಿವಾಸಪುರ ತಾಲೂಕಿನ ಅಂಬೇಡ್ಕರ್ ಪಾಳ್ಯದಲ್ಲಿ ಶುಕ್ರವಾರ ಬೆಳಗಿನ ಜಾವ ಸಂಭವಿಸಿದೆ.

ಅಂಬೇಡ್ಕರ್ ಪಾಳ್ಯದ ವೆಂಕಟೇಶ್ (65) ಮಗನಿಂದಲೇ ಕೊಲೆಯಾದ ದುರ್ದೈವಿ. ನವೀನ್ ಪ್ರಕಾಶ್ ಕೊಲೆ ಮಾಡಿದ ಪಾಪಿ ಮಗ.

ಮಗನ ಕೌಟುಂಬಿಕ ಸಮಸ್ಯೆ ಸರಿ ಪಡಿಸಲು ಮುಂದಾದ ತಂದೆಗೆ, ಮಗ ಎಂತಹ ಶಿಕ್ಷೆ ಕೊಟ್ಟಿದ್ದಾನೆ ನೋಡಿ. ಹೌದು ಕುಟುಂಬದಲ್ಲಿ ನವೀನ್ ಪ್ರಕಾಶ್ ಗೆ ಏನೋ ಸಮಸ್ಯೆ ಎದುರಾಗಿತ್ತು. ಇದರ ಕುರಿತಾಗಿ ತಂದೆ ಮತ್ತು ಮಗನ ನಡುವೆ ಗುರುವಾರ ತಡರಾತ್ರಿ ಗಲಾಟೆ ನಡೆದಿತ್ತು. ಇದೇ ಸಿಟ್ಟಿನಲ್ಲಿ, ಮಲಗಿದ್ದ ತಂದೆಯ ತಲೆ ಮೇಲೆ ಅಡುಗೆ ಮನೆಯಲ್ಲಿದ್ದ ರುಬ್ಬುವ ಗುಂಡುಕಲ್ಲನ್ನು ಎತ್ತಿ ಹಾಕಿ ನವೀನ್ ಕೊಲೆ ಮಾಡಿದ್ದಾನೆ.

ಇಡೀ ಮನೆ ರಕ್ತಸಿಕ್ತವಾಗಿದ್ದನ್ನು ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ ಹಾಗೂ ಸ್ಥಳೀಯರೇ ನವೀನ್‌ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ಬಗ್ಗೆ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.