ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ನರಸಿಂಹ ಯುವಕ ಮಂಡಲದ ನೇತೃತ್ವದಲ್ಲಿ ನಿರ್ಮಾಣಗೊಂಡ ಬಾಳಿಗೊಂದು ಆಸರೆ ಮನೆ ನಾಳೆ ಹಸ್ತಾಂತರ

ಕಾಣಿಯೂರು: ಕಡಬ ತಾಲೂಕು ಕಾಣಿಯೂರು ಗ್ರಾಮದ ಎಲುವೆ ಎಂಬಲ್ಲಿ ವಾಸವಿರುವ ಬೊಮ್ಮಿ ಎಂಬವರ ಮನೆಯ ಗೋಡೆ ಮತ್ತು ಛಾವಣಿ ಕುಸಿತಗೊಂಡು ಬೀಳುವ ಸ್ಥಿತಿಯಲ್ಲಿದ್ದ ಕಾರಣ ಬಡಕುಟುಂಬದ ನೆರವಿಗೆ ಧಾವಿಸಿದ ಕಾಣಿಯೂರು
ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲವು ಸದಸ್ಯರೊಂದಿಗೆ,ಊರಿನ ಉತ್ಸಾಹಿ ಯುವಕರನ್ನು ಸೇರಿಸಿ ಲಾಕ್ ಡೌನ್ ಸಮಯವನ್ನು ಸದುಪಯೋಗಪಡಿಸಿಕೊಂಡು ಸದಾ ನೆನಪಿನಲ್ಲಿ ಉಳಿಯುವಂತಹ ಕೆಲಸವನ್ನು ಮಾಡಿದೆ. ಕಳೆದ ಒಂದು ತಿಂಗಳಿನಿಂದ ಅವಿರತವಾಗಿ ಶ್ರಮದಾನದ ಮೂಲಕ ದುಡಿದು ಬೊಮ್ಮಿ ಮತ್ತು ಸೀತಾರಾಮ-ಕಾವೇರಿ ಬಡಕುಟುಂಬಕ್ಕೆ ನೂತನ‌ ಮನೆಯನ್ನು ನಿರ್ಮಿಸಿ ಕೊಟ್ಟಿರುತ್ತಾರೆ. ಮನೆಯ ನಿರ್ಮಾಣಕ್ಕೆ ಕಾಣಿಯೂರು ಗ್ರಾಮ ಪಂಚಾಯತ್, ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿ, ಹಾಲು ಉತ್ಪಾದಕರ ಸಂಘ ಕಾಣಿಯೂರು,ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಕೂಡುರಸ್ತೆ, ಸ್ನೇಹಿತರ ಬಳಗ ಕಲ್ಪಡ, ಅಲ್ಲದೇ ಊರಿನ ಹಲವಾರು ದಾನಿಗಳು ಹಣಕಾಸಿನ ನೆರವನ್ನು ನೀಡಿರುತ್ತಾರೆ. ಯುವಕ ಮಂಡಲದ ಸದಸ್ಯರು ಧನಸಹಾಯದೊಂದಿಗೆ ಮನೆನಿರ್ಮಾಣ ಕೆಲಸದಲ್ಲಿ ಶ್ರಮವಹಿಸಿ ಸುಂದರ ಮನೆ ನಿರ್ಮಾಣ ಆಗುವಲ್ಲಿ ಸಹಕರಿಸಿದ್ದಾರೆ.
ಯುವಕ ಮಂಡಲದ ಸ್ಥಾಪನೆಯಾಗಿ 25 ವರ್ಷ ತುಂಬುತ್ತಿರುವ ಈ ಸಂದರ್ಭದಲ್ಲಿ ಆ ಸವಿನೆನಪಿಗಾಗಿ ಬಡಕುಟುಂಬದ ಬಾಳಿಗೊಂದು ಆಸರೆಯಾಗಿ ನಿರ್ಮಾಣಗೊಂಡ “ಬೊಳ್ಳಿ ಬೊಲ್ಪು” ನೂತನ ಮನೆಯ ಹಸ್ತಾಂತರ, ಗೃಹಪ್ರವೇಶ ಕಾರ್ಯಕ್ರಮ ಕೋವಿಡ್ ನಿಯಮಾವಳಿಯಂತೆ ಜೂನ್ 18 ರಂದು ಬೆಳಿಗ್ಗೆ ಅತ್ಯಂತ ಸರಳವಾಗಿ ನಡೆಯಲಿದೆ.

Leave A Reply

Your email address will not be published.