ಹಣಕ್ಕಾಗಿ ಬಾಲಕನ ಅಪಹರಿಸಿ 25 ಲಕ್ಷ ಬೇಡಿಕೆ | ಹೆತ್ತವರಿಂದ ಪೊಲೀಸರಿಗೆ ದೂರು | ಬಾಲಕನ ಕೊಂದ ಅಪಹರಣಕಾರರು

ಹಣಕ್ಕಾಗಿ 10 ವರ್ಷದ ಬಾಲಕನನ್ನು ಅಪಹರಿಸಿದ ದುಷ್ಕರ್ಮಿಗಳು ಆ ಬಾಲಕನನ್ನು ಹತ್ಯೆಗೈದ ಘಟನೆ ಬೆಂಗಳೂರಿನ ಹೆಬ್ಬಗೋಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರಿನ ಹೆಬ್ಬಗೋಡಿ ಠಾಣಾ ವ್ಯಾಪ್ತಿಯ ಶಿಕಾರಿಪಾಳ್ಯದ ಮುಹಮ್ಮದ್ ಆಸೀಫ್(10) ಕೊಲೆಯಾದ ದುರ್ದೈವಿ ಬಾಲಕ.

ನಾಲ್ಕು ದಿನಗಳ ಹಿಂದೆ ದುಷ್ಕರ್ಮಿಗಳು ಮುಹಮ್ಮದ್ ಆಸೀಫ್‌ನನ್ನು ಅಪಹರಿಸಿದ್ದರು.

ಬಳಿಕ ಅಪಹರಣಕಾರರು ಬಾಲಕನ ಪೋಷಕರಿಗೆ ಮೊಬೈಲ್ ಕರೆ ಮೂಲಕ ಸಂಪರ್ಕಿಸಿ 25 ಲಕ್ಷ ರೂ. ನೀಡುವಂತೆ ಬೇಡಿಕೆಯಿಟ್ಟಿದ್ದರು.

ಬಳಿಕದ ಬೆಳವಣಿಗೆಯಲ್ಲಿ ಬಾಲಕನ ಪೋಷಕರು ಹೆಬ್ಬಗೋಡಿ ಠಾಣಾ ಪೊಲೀಸರಿಗೆ ದೂರು ನೀಡಿದ್ದರು.

ಪೊಲೀಸರು ಕಳೆದ ಎರಡು ದಿನಗಳಿಂದ ಹುಡುಕಾಟ ನಡೆಸಿದರೂ, ದುಷ್ಕರ್ಮಿಗಳ ಕುರಿತು ಮಾಹಿತಿ ಸಿಕ್ಕಿರಲಿಲ್ಲ.

ಪೊಲೀಸರು ತನಿಖೆ ತೀವ್ರಗೊಳಿಸಿದಾಗ ಶನಿವಾರ ತಡರಾತ್ರಿ ಜಿಗಣಿ ಸಮೀಪದ ನಂಜಾಪುರದ ಶೆಡ್‍ವೊಂದರಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ.

ಬಾಲಕನ ತಲೆ ಮೇಲೆ ಕಲ್ಲು ಎತ್ತಿಹಾಕಿ ಈ ಕೃತ್ಯವೆಸಗಿದ್ದು, ಈ ಸಂಬಂಧ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಕೊಲೆಗೀಡಾಗಿರುವ ಬಾಲಕನ ಮನೆಯಲ್ಲಿ ಬಾಡಿಗೆಗಿದ್ದ ಸಂಬಂಧಿ ಮಹಮದ್ ಜಾವೀದ್ ಶೇಕ್​ ಕೊಲೆ ಮಾಡಿರುವ ಕುರಿತು ಸಂದೇಹವಿದೆ. ಮೃತಪಟ್ಟಿರುವ ಬಾಲಕನ ಸ್ನೇಹಿತ ಇರ್ಫಾನ್​ ಈ ಬಗ್ಗೆ ಸುಳಿವು ನೀಡಿದ್ದಾನೆ. ಒಂದು ವಾರದ ಹಿಂದೆ ಇರ್ಫಾನ್​ನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಜಾವೀದ್ ಕೊಲೆ ಮಾಡಲು ಯತ್ನಿಸಿದ್ದ. ಆದರೆ ಸುತ್ತಮುತ್ತ ಕುರಿಗಾಹಿಗಳು ಇದ್ದಿದ್ದರಿಂದ ಅಂದು ಇರ್ಫಾನ್​ನ್ನು ಜಾವೀದ್ ಬಿಟ್ಟು ಕಳಿಸಿದ್ದ. ಬಳಿಕ ಮೂರು ದಿನಗಳ ಹಿಂದೆ ಅವನೇ ಅಸೀಫ್​​ನನ್ನು ಅಪಹರಿಸಿರಬಹುದು ಎಂದು ಶಂಕಿಸಲಾಗಿದೆ.

ಮಹಮದ್ ಜಾವೀದ್​ಗೆ ಅಸೀಫ್​ ತಂದೆ ಸಂಬಂಧದಲ್ಲಿ ಮಾವ ಆಗಬೇಕಿದ್ದು, ಈತ ಹದಿನೈದು ದಿನಗಳ ಹಿಂದೆ ಛತ್ತೀಸ್​ಗಢದಿಂದ ಬೆಂಗಳೂರಿಗೆ ಬಂದಿದ್ದ. ತನ್ನ ಮದುವೆ ನಿಶ್ಚಯವಾಗಿದ್ದರಿಂದ ಅದಕ್ಕಾಗಿ ಹಣ ಹೊಂದಿಸುವ ಸಲುವಾಗಿ ಇವನು ಬೆಂಗಳೂರಿಗೆ ಬಂದಿದ್ದು, ಅದೇ ಕಾರಣಕ್ಕೆ ಅಪಹರಣ ಮಾಡಿ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಶಂಕಿತ ಆರೋಪಿಯ ಪತ್ತೆಗೆ ಹೆಬ್ಬಗೋಡಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Leave A Reply

Your email address will not be published.