ಫೈನಾನ್ಸ್, ಮೈಕ್ರೋ ಫೈನಾನ್ಸ್, ಹಣಕಾಸು ಸಂಸ್ಥೆಗಳು ಸಾಲ ಮರುಪಾವತಿಗೆ ಒತ್ತಡ ಹೇರುವಂತಿಲ್ಲ | ಜಿಲ್ಲಾಧಿಕಾರಿಯಿಂದ ಮಹತ್ವದ ಆದೇಶ
ಕೊರೋನಾ ಎರಡನೇ ಅಲೆಯಿಂದಾಗಿ ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಈ ಸಮಯದಲ್ಲಿ ಎಷ್ಟೋ ಜನ ಕಷ್ಟದ ಜೀವನ ಸಾಗಿಸುತ್ತಿದ್ದಾರೆ. ಹಲವಾರು ಮಂದಿ ಉದ್ಯೋಗವಿಲ್ಲದೆ ಮನೆಯಲ್ಲೇ ಉಳಿದುಕೊಂಡಿದ್ದಾರೆ. ಹೀಗಿರುವಾಗ ಫೈನಾನ್ಸ್, ಮೈಕ್ರೋ ಫೈನಾನ್ಸ್, ಹಣಕಾಸು ಸಂಸ್ಥೆಗಳು ಸಾಲ ಮರುಪಾವತಿಗೆ ಒತ್ತಡ ಹೇರುವಂತಿಲ್ಲ ಎಂದು ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಆದೇಶ ನೀಡಿದ್ದಾರೆ.
ಲಾಕ್ ಡೌನ್ ಕಾರಣದಿಂದಾಗಿ ಜನಸಾಮಾನ್ಯರು ಕೆಲಸ ಇಲ್ಲದೆ ಮನೆಯಲ್ಲೇ ಉಳಿಯುವಂತಾಗಿದೆ. ಇಂತಹ ಸಂದರ್ಭದಲ್ಲಿ ಪಡೆದಿರುವ ಸಾಲದ ಕಂತು ಮರು ಪಾವತಿ ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಸಾಲ ನೀಡಿರುವ ಹಣಕಾಸು ಸಂಸ್ಥೆಗಳು, ಫೈನಾನ್ಸ್ ಗಳು, ಮೈಕ್ರೋ ಫೈನಾನ್ಸ್ ಗಳು ಸಾಲದ ಕಂತು ಪಾವತಿಸುವಂತೆ ಒತ್ತಾಯಿಸಬಾರದು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.
ಇದರ ಹೊರತಾಗಿಯೂ ಯಾವುದೇ ಸಾಲ ನೀಡಿರುವ ಸಂಸ್ಥೆಗಳು ಸಾರ್ವಜನಿಕರಿಗೆ ಸಾಲ ಮರು ಪಾವತಿಸುವಂತೆ ಒತ್ತಡ ಹೇರಿದ್ದಲ್ಲಿ ಅಂತಹ ಸಂದರ್ಭದಲ್ಲಿ ಆ ಸಂಸ್ಥೆಗಳ ವಿರುದ್ಧ ದೂರು ನೀಡಲು ನೋಡಲ್ ಅಧಿಕಾರಿಗಳನ್ನು ಜಿಲ್ಲಾಧಿಕಾರಿ ನೇಮಿಸಿದ್ದಾರೆ.
ಮೈಕ್ರೋ ಫೈನಾನ್ಸ್ ಗಳು ಹಾಗೂ ಸಹಕಾರಿ ಸಂಸ್ಥೆಗಳು ಸಾಲ ಪಾವತಿಸುವಂತೆ ಒತ್ತಡ ಹೇರಿದ್ದಲ್ಲಿ ಅಂತಹ ಸಂದರ್ಭದಲ್ಲಿ ದೂರು ನೀಡಲು ಸಹಕಾರಿ ಸಂಘಗಳ ಉಪ ನಿಬಂಧಕರಾದ ಪ್ರವೀಣ್ ನಾಯಕ್ (944863338) ಇವರಿಗೆ ದೂರು ನೀಡುವಂತೆ ತಿಳಿಸಲಾಗಿದೆ. ಇನ್ನುಳಿದಂತೆ ಇತರೆ ಸಂಸ್ಥೆಗಳಿಗೆ ಸಂಬಂಧಿಸಿದ ದೂರುಗಳಾದಲ್ಲಿ, ಲೀಡ್ ಡಿಸ್ಟ್ರಿಕ್ ಮ್ಯಾನೇಜರ್ ಪ್ರವೀಣ್ (9449860916) ಇವರ ಮೂಲಕ ದೂರು ನೀಡಬಹುದಾಗಿದೆ.
ಜಿಲ್ಲಾಧಿಕಾರಿಯವರ ಈ ಆದೇಶ ಜನಸಾಮಾನ್ಯರ ಸಾಲ ಮರುಪಾವತಿ ತಲೆನೋವಿನಿಂದ ಪಾರು ಮಾಡಿದೆ. ಹಾಗೆಯೇ ಈ ನಿರ್ಧಾರಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.