ಬಂಟ್ವಾಳ | ಮನೆಯಲ್ಲಿ ಆಕಸ್ಮಿಕ ಬೆಂಕಿ ಅವಘಡ ನಗ-ನಗದು ಸಹಿತ ಸಾಮಗ್ರಿಗಳು ಭಸ್ಮ

ಮನೆಯೊಂದರಲ್ಲಿ ಆಕಸ್ಮಿಕ ಬೆಂಕಿ ಅವಘಡ ಉಂಟಾಗಿ ಮನೆಯೊಳಗಿನ ಎಲ್ಲಾ ಸಾಮಗ್ರಿಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರುವ ಘಟನೆ ಪಾಣೆಮಂಗಳೂರು ಸಮೀಪದ ಆಲಡ್ಕ ಮಸೀದಿ ಸಮೀಪದ ವಸತಿ ಸಂಕೀರ್ಣ ಒಂದರಲ್ಲಿ ಮಂಗಳವಾರ ಮಧ್ಯರಾತ್ರಿ ಸಂಭವಿಸಿದೆ.

ಉದ್ಯಮಿ ಹನೀಫ್ ಹಾಸ್ಕೋ ಎಂಬವರ ಕುಟುಂಬ ವಾಸ್ತವ್ಯ ಹೊಂದಿರುವ ಮನೆಯಲ್ಲಿ ಈ ಬೆಂಕಿ ಅವಘಡ ಸಂಭವಿಸಿದೆ. ಮನೆ ಇರುವ ವಸತಿ ಸಂಕೀರ್ಣ ಇಸ್ಮಾಯೀಲ್ ಎಂಬವವರಿಗೆ ಸೇರಿದ್ದಾಗಿದೆ.

ಸಂಬಂಧಿಕರೊಬ್ಬರು ಮರಣ ಹೊಂದಿದ್ದ ಹಿನ್ನೆಲೆಯಲ್ಲಿ ಮನೆಮಂದಿ ಅಲ್ಲಿಗೆ ತೆರಳಿದ್ದರೆನ್ನಲಾಗಿದ್ದು, ಈ ವೇಳೆ ಅಗ್ನಿ ಅವಘಡ ಸಂಭವಿಸಿದೆ. ತಕ್ಷಣ ಸ್ಥಳಕ್ಕಾಗಮಿಸಿದ ಬಂಟ್ವಾಳ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಆದರೆ ಅದಾಗಲೇ ಮನೆಯೊಳಗಿನ ಸೊತ್ತುಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ.

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಅವಘಡ ಸಂಭವಿಸಿದೆ ಎಂದು ಶಂಕಿಸಲಾಗಿದೆ.  ಮನೆಯೊಳಗಿನ ವಿದ್ಯುತ್ ಉಪಕರಣಗಳು, ಪೀಠೋಪಕರಣಗಳು ಸಹಿತ ಕಪಾಟಿನೊಳಗಿದ್ದ ವಸ್ತ್ರ, ಬಟ್ಟೆಬರೆಗಳು, ನಗದು ಸಂಪೂರ್ಣ ಸುಟ್ಟು ಕರಕಲಾಗಿದೆ. ಚಿನ್ನಾಭರಣಗಳಿಗೂ ಹಾನಿಯಾಗಿದೆ.

50 ಸಾವಿರ ರೂ.ಗೂ ಅಧಿಕ ನಗದು, ಸುಮಾರು 20 ಪವನ್ ಗೂ ಅಧಿಕ ಚಿನ್ನಾಭರಣ, ಇತರ ಅತ್ಯಮೂಲ್ಯ ದಾಖಲೆ ಪತ್ರಗಳು ಬೆಂಕಿಯ ಕೆನ್ನಾಲಗೆಗೆ ಆಹುತಿಯಾಗಿದೆ. ಈ ಬೆಂಕಿ ಅವಘಡದಿಂದಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ರಾತೋರಾತ್ರಿ ಆಗಮಿಸಿದ ಸ್ಥಳೀಯ ಕೌನ್ಸಿಲರ್ ಅಬೂಬಕರ್ ಸಿದ್ದೀಕ್ ಅಗ್ನಿಶಾಮಕ ದಳದವರನ್ನು ಕರೆಸಿ ಬೆಂಕಿ ನಂದಿಸುವಲ್ಲಿ ಸಹಕರಿಸಿದ್ದು, ಸ್ಥಳೀಯ ಯುವಕರು ಕೈಜೋಡಿಸಿದ್ದಾರೆ.

Leave A Reply

Your email address will not be published.