ಕರ್ನಾಟಕದಲ್ಲಿ‌ ಸಂಪೂರ್ಣ ಲಾಕ್‌ಡೌನ್ ಗೆ ಸಿದ್ಧತೆ – ಡಾ.ಕೆ.ಸುಧಾಕರ್ | ಕ್ಷಣಗಣನೆ ಆರಂಭ…..!

ಕರ್ನಾಟಕದಲ್ಲಿ ಜನತಾ ಲಾಕ್​ಡೌನ್ ವಿಫಲವಾಗಿದೆ. ನಾವು ನಿರೀಕ್ಷೆ ಮಾಡಿದಷ್ಟು ಪ್ರಯೋಜವಾಗಿಲ್ಲ. ಜನತಾ ಲಾಕ್ ಡೌನ್ ಹೇಗಿದೆ ಅಂತ ನೀವೇ ನೋಡಿದ್ದೀರಾ. ಜನರೇ ಇದನ್ನು ಅರ್ಥ ಮಾಡಿಕೊಳ್ಳಬೇಕು. ಜನರು ಸರ್ಕಾರಕ್ಕೆ ಸಹಕಾರ ನೀಡಬೇಕು. ಇಲ್ಲದೆ ಹೋದರೆ ಯಾವುದೇ ಪ್ರಯೋಜನ ಆಗಲ್ಲ. ಚೈನ್ ಲಿಂಕ್ ಕಟ್ ಆಗೋಕೆ ಕನಿಷ್ಠ 14 ದಿನ ಬೇಕು. ಈಗ 7-8 ದಿನ ಆಗಿದೆ. ಮಹಾರಾಷ್ಟ್ರದಲ್ಲಿ ಕಡಿಮೆ ಆಗಿದೆ ಅಂದರೆ ನಮ್ಮಲ್ಲೂ ಆಗುವುದಿಲ್ಲವಾ? ಜನರು ಸಹಕಾರ ನೀಡಬೇಕು. ಹೀಗಾಗಿ, ಕರ್ನಾಟಕದಲ್ಲಿ ಪೂರ್ಣ ಲಾಕ್ ಡೌನ್ ಬಗ್ಗೆ ಚಿಂತನೆ ಮಾಡುತ್ತಿದ್ದೇವೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳುವ ಮೂಲಕ ಸಂಪೂರ್ಣ ಲಾಕ್​ಡೌನ್​ನ ಸುಳಿವು ನೀಡಿದ್ದಾರೆ.

ಮೇ 12ಕ್ಕೆ ಜನತಾ ಲಾಕ್​ಡೌನ್ ಮುಗಿಯುತ್ತದೆ. ಬಳಿಕ ಸಿಎಂ ಯಡಿಯೂರಪ್ಪ ಜೊತೆ ಮಾತಾಡಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎನ್ನುವ ಮೂಲಕ ಸಚಿವ ಡಾ. ಕೆ. ಸುಧಾಕರ್ ಲಾಕ್ ಡೌನ್ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ.

ನಮ್ಮ ದೇಶದಲ್ಲಿ ಎರಡು ಲಸಿಕಾ ಕಂಪನಿಗಳು ಇವೆ. ಉತ್ಪಾದನೆ ಕಡಿಮೆ ಆಗುತ್ತಿರುವುದರಿಂದ ಕೊರೋನಾ ಲಸಿಕೆ ನಮಗೆ ಲಭ್ಯವಾಗ್ತಿಲ್ಲ. ಈಗಾಗಲೇ ಎರಡು ಕಂಪನಿಗಳ ಜೊತೆ ಮಾತಾಡಿದ್ದೇವೆ. ನಮಗೆ ಮೊದಲ ಆದ್ಯತೆಯಲ್ಲಿ ಲಸಿಕೆ ಕೊಡಿ ಅಂತ ಕೇಳಿದ್ದೇವೆ. ಮೇ 15 ಅಥವಾ ಮೇ 15 ನಂತರ ಲಸಿಕೆ ಅಭಿಯಾನ ಪ್ರಾರಂಭ ಮಾಡಲಾಗುವುದು ಎಂದು ಸಚಿವ ಸುಧಾಕರ್ ಹೇಳಿದ್ದಾರೆ.

ರಾಜ್ಯದಲ್ಲಿ ಕೊವಿಡ್ ಸೋಂಕಿತರ ಸಂಖ್ಯೆ ದಿನೇ ದಿನೇ ಏರುಗತಿಯಲ್ಲಿ ಮುಂದುವರೆದಿದ್ದು, ಜನತಾ ಕರ್ಫ್ಯೂ ಚಾಲ್ತಿಯಲ್ಲಿದ್ದರೂ ಕೊರೋನಾ ಸೋಂಕಿತರ ಸಂಖ್ಯೆ ಮಾತ್ರ ಇಳಿಮುಖವಾಗುತ್ತಿಲ್ಲ.

ಹೀಗಾಗಿ ರಾಜ್ಯಾದ್ಯಂತ ಲಾಕ್​ಡೌನ್ ಮಾಡುವ ಸಾಧ್ಯತೆ ಬಲವಾಗಿದೆ.

ಕ್ಯಾಬಿನೆಟ್​ ಸಭೆಯಲ್ಲೂ ಸಹ ಈ ಬಗ್ಗೆ ಚರ್ಚೆ ಮಾಡಲಾಗಿತ್ತಾದರೂ ಸಿಎಂ ಯಡಿಯೂರಪ್ಪ ಅವರು ಲಾಕ್‌ಡೌನ್ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿರಲಿಲ್ಲ. ಆದರೆ, ಇದೀಗ ರಾಜ್ಯದಲ್ಲಿ ಸೋಂಕಿತರ ಹಾಗೂ ಸಾವಿನ ಸಂಖ್ಯೆ ಮಿತಿ ಮೀರಿದೆ.

ಹೀಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಸಂಜೆ 6 ಗಂಟೆಗೆ ಮಹತ್ವದ ಸಭೆ ಕರೆದಿದ್ದು, ಸಭೆಯಲ್ಲಿ ಕೋವಿಡ್ ಉಸ್ತುವಾರಿ ಸಚಿವರು, ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದು, ಚರ್ಚೆಯ ನಂತರ ಲಾಕ್​ಡೌನ್ ಅಥವಾ ಜನತಾ ಕರ್ಫ್ಯೂವನ್ನು ಮುಂದುವರೆಸುವುದಾ? ಎಂದು ಸಿಎಂ ತಿರ್ಮಾನಿಸಲಿದ್ದಾರೆ.

Leave A Reply

Your email address will not be published.