ಉಪ್ಪಿನಂಗಡಿ | ಒಎಲ್‌ಎಕ್ಸ್‌ನಲ್ಲಿ ಬೈಕ್ ಮಾರಲು ಹೋದ ವಿದ್ಯಾರ್ಥಿಯೊಬ್ಬನ ಖಾತೆಯಿಂದ ರೂ. 12 ಸಾವಿರ ಮಂಗಮಾಯ !

ಉಪ್ಪಿನಂಗಡಿ : ಇದ್ದದ್ದು ಹೋಯಿತು ಮದ್ದಿನ ಗುಣದಿಂದ ಎಂಬಂತಾಗಿದೆ ! …ಉಪ್ಪಿನಂಗಡಿಯ ಬಜತ್ತೂರು ಗ್ರಾಮದಲ್ಲಿ ಒಎಲ್‌ಎಕ್ಸ್‌ನಲ್ಲಿ ಬೈಕ್ ಮಾರಲು ಹೋದ ವಿದ್ಯಾರ್ಥಿಯೋರ್ವ ಅಲ್ಲಿ ಪರಿಚಯವಾದ ಗ್ರಾಹಕನ ಬಣ್ಣದ ಮಾತಿನ ಮೋಡಿಗೆ ತನ್ನ ಉಳಿತಾಯ ಖಾತೆಯಲ್ಲಿದ್ದ 12 ಸಾವಿರ ರೂ. ಕಳೆದುಕೊಂಡ ಘಟನೆ ನಡೆದಿದೆ.

ಗ್ರಾಹಕ ತನ್ನ ಫೋನ್ ಪೇ ಯ ಕ್ಯೂ ಆರ್ ಕೋಡನ್ನು ಸ್ಕ್ಯಾನ್ ಮಾಡಬೇಕಾದ ವ್ಯವಸ್ಥೆಯ ಬದಲು ತಾನೇ ಗ್ರಾಹಕನ ಕ್ಯೂ ಆರ್ ಕೋಡ್‌ನ ಸ್ಕ್ಯಾನ್ ಮಾಡಿದ ವಿದ್ಯಾರ್ಥಿಯ ಉಳಿತಾಯ ಖಾತೆಯಿಂದ 12 ಸಾವಿರ ರೂ. ಕಡಿತಗೊಂಡಿದ್ದು, ಮೋಸಹೋದ ವ್ಯಕ್ತಿ ಬಜತ್ತೂರು ನಿವಾಸಿಯ ಅಂತಿಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಈತ ತನ್ನಲ್ಲಿರುವ ಹಳೆಯ ಬೈಕ್​ನ ಮಾರಾಟ ಮಾಡಲು ಒಎಲ್‌ಒಕ್ಸ್‌ನಲ್ಲಿ ಬೈಕ್‌ನ ವಿವರವನ್ನು ಅಪ್ಲೋಡ್ ಮಾಡಿದ್ದ. ಆ ಬಳಿಕ ಒಂದು ಕರೆ ಬಂದಿದ್ದು, ತನಗೆ ಬೈಕ್ ಬೇಕು. ಹಣವನ್ನು ಹೇಗೆ ಕಳುಹಿಸಲಿ ಎಂದು ಈತನಲ್ಲಿ ವ್ಯಕ್ತಿಯೋರ್ವ ವಿಚಾರಿಸಿದ್ದಾನೆ. ಈ ವೇಳೆ ಫೋನ್ ಪೇ ಮುಖೇನ ಹಣ ಕಳುಹಿಸಿ ಎಂದು ವಿದ್ಯಾರ್ಥಿಯು ತಿಳಿಸಿದ್ದಾನೆ. ಬಳಿಕ ಯುವಕನ ವಾಟ್ಸ್‌ಆ್ಯಪ್‌ಗೆ ಗ್ರಾಹಕ ಕ್ಯೂ ಆರ್ ಕೋಡ್​ನ ಕಳುಹಿಸಿ ಅದನ್ನು ನಿಮ್ಮ ಫೋನ್ ಪೇಯಿಂದ ಸ್ಕ್ಯಾನ್ ಮಾಡಿದ್ರೆ ನನ್ನ ಖಾತೆಯಿಂದ ನಿಮ್ಮ ಖಾತೆಗೆ ಹಣ ಜಮೆಯಾಗುತ್ತದೆ. ನಾಳೆ ಮುಂಜಾನೆ ನಾನು ಬಂದು ಬೈಕ್ ಪಡೆದುಕೊಂಡು ಹೋಗುವೆ ಎಂದು ತಿಳಿಸಿದ್ದಾನೆ. ಇದಾದ ಬಳಿಕ ತನ್ನ ಖಾತೆಯನ್ನು ವಿಚಾರಿಸಿದಾಗ 12 ಸಾವಿರ ಕಡಿತಗೊಂಡಿರುವುದು ತಿಳಿದಿದೆ.

ಈ ಘಟನೆಯ ಕುರಿತು ವಿದ್ಯಾರ್ಥಿಯು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾನೆ.

Leave A Reply

Your email address will not be published.