ಇಂಥವರು ನಮ್ಮೊಂದಿಗೆ ಇದ್ದಾರೆ ! ಇದುವೇ ನಮ್ಮ ಭಾಗ್ಯ !

ಮೃತ ಶರೀರ ವೆಂದರೆ ಅದನ್ನು ನೋಡಲು ಕೆಲವರಿಗಂತೂ ಭಯ, ಅದರಲ್ಲಿಯೂ ಅದನ್ನು ಮುಟ್ಟುವುದಂತೂ ಬೇಡವೇ ಬೇಡ ಎಂದು ದೂರ ಸರಿಯುವ ಅದೆಷ್ಟೋ ಮಂದಿ. ಅದನ್ನು ಸ್ನಾನ ಮಾಡಿಸುವುದು ಅಸಹ್ಯ ಮತ್ತು ಅಸಾಧ್ಯವೆಂದು ಹಿಂಜರಿಯುವ ಕೆಲವು ಮಂದಿ.

ಇವೆಲ್ಲರ ಮಧ್ಯೆ ಅದನ್ನೇ ದೈವ ಮೆಚ್ಚುವ ಕೆಲಸವೆಂದು ಹಾಗೂ ತನ್ನ ಕರ್ತವ್ಯವೆಂದು ಸಂಪೂರ್ಣವಾಗಿ ತೊಡಗಿಸಿಕೊಂಡು ಬಂದವರೂ ಇದ್ದಾರೆ. ಅಂತಹವರಲ್ಲಿ ಒಬ್ಬರಿವರು.

ಸುಮಾರು ಮೂರು ದಶಕಗಳಿಂದ ಮುಸ್ಲಿಂ ಸಮುದಾಯದ ಮೃತ ಶರೀರದ ಶುದ್ಧೀಕರಣ ಸ್ನಾನ (ಮಹಿಯ್ಯತ್ ಸ್ನಾನ) ಕಾರ್ಯವನ್ನು ತೊಡಗಿಸಿಕೊಂಡು ತಾಲೂಕಿನಾದ್ಯಂತ ಹೆಸರು ವಾಸಿಯಾಗಿರುವ ಮೊಹಿಧ್ಧೀನ್ ಹಾಜಿ ಶಾಂತಿನಗರ (ಸಕಲೇಶಪುರ ಮ್ಯದು) ಅವರ ಈ ಸೇವೆಯು ಇಡೀ ಸಮುದಾಯಕ್ಕೆ ಮಾದರಿಯಾಗಿದೆ.

ಇವರು ತಮ್ಮ 26ನೆಯ ವಯಸ್ಸಿನಿಂದ ಆರಂಭಿಸಿದ ಈ ಕಾರ್ಯವು ಮೂವತ್ತು ವರ್ಷಗಳಿಂದ ನಿರಂತರವಾಗಿ ತೊಡಗಿಸಿಕೊಂಡಿರುತ್ತಾರೆ. ಸುಳ್ಯ ಮೊಗರ್ಪಣೆ ಮಸೀದಿಯಲ್ಲಿ ಸುಧೀರ್ಘಕಾಲ ಮುಅಧ್ಧೀನ್ ರಾಗಿ ಸೇವೆಸಲ್ಲಿಸಿದ್ದ ಅಬೂಬಕ್ಕರ್ ಮುಕ್ರಿಯವರಿಂದ ಮಹಿಯ್ಯತ್ ಸ್ನಾನ ಹಾಗೂ ಅದರ ಪರಿಪಾಲನಾ ಕಾರ್ಯಗಳನ್ನು ಅರಿತುಕೊಂಡಿದ್ದರು. ಇದೀಗ ಇವರಿಗೆ 57 ವರ್ಷವಾಗಿದ್ದು, ಇಂದಿಗೂ ಕೂಡ ತಾಲೂಕಿನ ಯಾವುದೇ ಭಾಗಗಳಲ್ಲಿ ಮೃತ ಶರೀರದ ಸ್ನಾನಕ್ಕೆ ಇವರು ಸಿದ್ಧರಾಗಿ ಹೋಗುತ್ತಾರೆ.

30 ವರ್ಷದ ಅನುಭವದಲ್ಲಿ ಸಾವಿರಾರು ಮೃತ ಶರೀರಗಳನ್ನು ಇವರು ಸ್ನಾನ ನಿರ್ವಹಿಸಿದ್ದು ಅದರಲ್ಲಿ ಕೆಲವು ಅಪಘಾತದಿಂದ ಮೃತರಾದ ಶರೀರಗಳು, ನೀರಿನಲ್ಲಿ ಮುಳುಗಿ ಮೃತವಾದ ಶರೀರಗಳು, ಕೊಳೆತ ಸ್ಥಿತಿಯಲ್ಲಿ ಲಭಿಸಿದ ಶರೀರಗಳು,ಮುಖ್ಯವಾಗಿ ಕಳೆದ ಕೆಲವು ತಿಂಗಳ ಕೆಲವು ತಿಂಗಳ ಹಿಂದೆ ಮಣ್ಣಿನಿಂದ 24 ದಿನಗಳ ನಂತರ ಹೊರತೆಗೆದು ಶರೀರದ ಸ್ನಾನವನ್ನು ಇವರ ನೇತೃತ್ವದಲ್ಲಿ ಮಾಡಿರುತ್ತಾರೆ. ತಾಲೂಕಿನ ಯಾವುದೇ ಸ್ಥಳಗಳಲ್ಲಿ ಯಾವುದೇ ಸಂದರ್ಭಗಳಲ್ಲಿ ನಿಧನ ಹೊಂದಿದ ವಾರ್ತೆ ತಿಳಿದರೆ ಕೂಡಲೇ ತನಗೆ ಅದೆಷ್ಟು ಒತ್ತಡದ ಕೆಲಸಗಳು ಇದ್ದರೂ ಅದನ್ನು ಲೆಕ್ಕಿಸದೆ ಮೃತರ ಮನೆಗೆ ಸಂದರ್ಶನ ನೀಡುವುದು ಮತ್ತು ಪರಿಪಾಲನಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ಇವರ ಅಭ್ಯಾಸವಾಗಿರುತ್ತದೆ.

ಇವರು ಸುಳ್ಯ ಶಾಂತಿನಗರ ನಿವಾಸಿಯಾಗಿದ್ದು ದಿವಂಗತ ಅಬ್ದುಲ್ ರಹಿಮಾನ್ ಮತ್ತು ಜುಲೈಕಾ ದಂಪತಿಯ ಪುತ್ರರಾಗಿರುತ್ತಾರೆ. ಪತ್ನಿ ಝೊಹರಾ ಮತ್ತು ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರೊಂದಿಗೆ ಶಾಂತಿನಗರದ ತಮ್ಮ ನಿವಾಸದಲ್ಲಿ ಜೀವನ ಸಾಗಿಸುತ್ತಿದ್ದಾರೆ.

ವೃತ್ತಿಯಲ್ಲಿ ಗುತ್ತಿಗೆದಾರರಾಗಿ ಕೆಲಸ ನಿರ್ವಹಿಸುವ ಇವರು ಸಾಮಾಜಿಕ-ಧಾರ್ಮಿಕ ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಸುಳ್ಯದ ನಗರ ಪಂಚಾಯತಿನ ಪ್ರಥಮ ಆಶ್ರಯ ಸಮಿತಿ ಸದಸ್ಯರಾಗಿ ಅಲ್ಪಸಂಖ್ಯಾತರ ಸೊಸೈಟಿಯ ಸದಸ್ಯರಾಗಿ, ಎಲ್ ಡಿ ಬ್ಯಾಂಕಿನ ಸದಸ್ಯರಾಗಿ, ಶಾಂತಿನಗರ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾಗಿ ಆರು ವರ್ಷಗಳ ಸೇವೆ ಸಲ್ಲಿಸಿರುತ್ತಾರೆ. ಕೊಡುಗೈ ದಾನಿಯಾದ ಇವರು ಹಲವಾರು ಹೆಣ್ಣುಮಕ್ಕಳ ಮದುವೆ ಕಾರ್ಯಕ್ರಮಗಳಿಗೆ, ಬಡವರ ಕಷ್ಟಕ್ಕೆ ಸಹಾಯ ಹಸ್ತ ನೀಡುವ ಮೂಲಕ ಸ್ಪಂದಿಸುವ ಇವರು ಸಮಾಜಮುಖಿ ಸೇವೆಯಲ್ಲಿ ಮುಂಚೂಣಿಯಲ್ಲಿ ಕಂಡುಬರುತ್ತಾರೆ. ಇವರ ಈ ರೀತಿಯ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಗುರುತಿಸಿ ಹಲವು ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿ ಗೌರವಿಸಿದೆ.

ಇದೇ ರೀತಿ ಸೇವನೆಯನ್ನು ತೊಡಗಿಸಿಕೊಂಡವರು ಇನ್ನೊಬ್ಬ ವ್ಯಕ್ತಿ ದಿವಂಗತ ಹಾಜಿ ಅಬ್ಬಾಸ್ ಕಟ್ಟೆ ಕ್ಕಾರ್ಸ್ ರವರು. ಇವರು ಕೂಡ ತಮ್ಮ ಜೀವನದ ಅರ್ಧದಷ್ಟು ಕಾಲವನ್ನು ಈ ರೀತಿಯ ಸಾಮಾಜಿಕ ಕಾರ್ಯದಲ್ಲಿ , ಮೈಯತ್ತ್ ಸ್ನಾನ ನಿರ್ವಹಿಸುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅವರಿಂದ ಕೆಲವು ಬಾರಿ ಮಾರ್ಗದರ್ಶನವನ್ನು ಪಡೆದುಕೊಂಡಿದ್ದನ್ನು ಮೈದೀನ್ ರವರು ಸ್ಮರಿಸಿಕೊಳ್ಳುತ್ತಾರೆ.

ಸಮಾಜದಲ್ಲಿ ಪ್ರತಿಯೊಂದು ಧರ್ಮಗಳು ತಮ್ಮದೇ ಆದ ಆಚಾರ ವಿಚಾರಗಳನ್ನು ಆಚರಿಸಿಕೊಂಡು ಬರುತ್ತವೆ. ಅವುಗಳೆಲ್ಲಾದರಲ್ಲಿಯೂ ಇದೇ ರೀತಿಯ ಮಹಾನ್ ವ್ಯಕ್ತಿ ವ್ಯಕ್ತಿಗಳು ಕಂಡುಬರುತ್ತಾರೆ. ಇಂತಹ ಆಚಾರ-ವಿಚಾರಗಳನ್ನು ಮತ್ತು ಕಾರ್ಯವಿಧಾನಗಳನ್ನು ಮುಂದಿನ ಪೀಳಿಗೆ ಹಾಗೂ ಯುವ ಸಮುದಾಯದ ಯುವಕರು ಅರಿತುಕೊಂಡರೆ ಸಮಾಜಕ್ಕೆ ಮತ್ತು ಸಮುದಾಯಕ್ಕೆ ಉತ್ತಮ ಸೇವೆಯಾಗುತ್ತದೆ. ಒಟ್ಟಿನಲ್ಲಿ ಈ ರೀತಿಯ ನಿಸ್ವಾರ್ಥ ಸೇವನೆ ಸಮಾಜದಲ್ಲಿ ಮಾದರಿಯಾಗಿ ಉಳಿಯಲಿ ಎಂಬುದು ಈ ಬರಹದ ಆಶಯವಾಗಿದೆ.
ಲೇಖನ.

ಹಸೈನಾರ್ ಜಯನಗರ

Leave A Reply

Your email address will not be published.