ಎ.20 ರಿಂದ ಪುತ್ತೂರು ಎಪಿಎಂಸಿಯಲ್ಲಿ ಅಡಿಕೆ ಖರೀದಿ | ವರ್ತಕರ ಸಭೆ

ಪುತ್ತೂರು: ಪುತ್ತೂರು ತಾಲೂಕಿಗೆ ಸೀಮಿತವಾಗಿ ಖಾಸಗಿ ವರ್ತಕರಿಗೂ ಅಡಿಕೆ ಖರೀದಿಗೆ ಅವಕಾಶ ಕೊಡಬೇಕೆಂಬ ಬೇಡಿಕೆಯ ಹಿನ್ನೆಲೆಯಲ್ಲಿ ಮತ್ತು ಈ ರೀತಿ ಅವಕಾಶ ನೀಡಿದಾಗ ಒಂದಷ್ಟು ಸ್ಪರ್ಧಾತ್ಮಕ ದರದಲ್ಲಿ ಅಡಿಕೆ ಖರೀದಿ ನಡೆಯುತ್ತದೆ ಎಂಬ ನಿಟ್ಟಿನಲ್ಲಿ ಎಪಿಎಂಸಿಯ ಪ್ರಾಂಗಣದಲ್ಲಿ ಅಡಿಕೆ ಖರೀದಿ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಈ ಕುರಿತಂತೆ ಶುಕ್ರವಾರ ಎಪಿಎಂಸಿ ಪ್ರಾಗಂಣದಲ್ಲಿ ಅಧ್ಯಕ್ಷ ದಿನೇಶ್ ಮೆದು ಅವರ ಅಧ್ಯಕ್ಷತೆಯಲ್ಲಿ ಎಪಿಎಂಸಿ ಯಾರ್ಡ್ ಅಡಿಕೆ ವರ್ತಕರ ಸಭೆ ನಡೆಯಿತು.

ವರ್ತಕರು ಲಾಕ್‌ಡೌನ್ ಅಂತ್ಯ ಕಾಣುವವರೆಗೂ ನಿರಂತರವಾಗಿ ಅಡಿಕೆ ಖರೀದಿ ಮಾಡಬೇಕು ಎಂಬ ಷರತ್ತನ್ನು ವಿಧಿಸಲಾಗಿದೆ. ಒಂದು ವೇಳೆ ಷರತ್ತು ಉಲ್ಲಂಘನೆ ಆದರೆ ಅವರಿಗೆ ಅವಕಾಶವಿಲ್ಲ. ಈ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜವಾಬ್ದಾರಿಯನ್ನು ವರ್ತಕರು ವಹಿಸಿಕೊಳ್ಳಬೇಕು ಎಂಬ ಎಸಿ ಡಾ.ಯತೀಶ್ ಉಳ್ಳಾಲ್ ಅವರ ಸೂಚನೆಯಂತೆ ಎಲ್ಲಾ ವರ್ತಕರು ವ್ಯವಹರಿಸಬೇಕು ಎಂದು ದಿನೇಶ್ ಮೆದು ಹೇಳಿದರು.

ಅಡಿಕೆ ಮಾರಾಟ ಮಾಡುವವರು ಹೀಗೆ ಮಾಡಿ
ರೈತರು ಅಡಿಕೆ ಮಾರಾಟ ಮಾಡಲು ಪುತ್ತೂರು ಎಪಿಎಂಸಿ ದೂರವಾಣಿಗೆ ಅಥವಾ ಅಲ್ಲಿನ ಕಾರ್ಯನಿರ್ವಹಣಾಧಿಕಾರಿ/ ಅಧ್ಯಕ್ಷರಿಗೆ ಕರೆ ಮಾಡಬೇಕು. ಎಷ್ಟು ಕ್ವಿಂಟಾಲ್ ಅಡಕೆ ಮಾರಾಟಕ್ಕಿದೆ. ಯಾವ ಪ್ರದೇಶ ಎಂಬ ಮಾಹಿತಿ ನೀಡುವುದರ ಜೊತೆಗೆ ಆ ಭಾಗದ ಐದಾರೂ ರೈತರು ಒಟ್ಟಿಗೆ ಸೇರಿಕೊಂಡು ಹೆಚ್ಚು ಅಡಕೆ ಮಾರಾಟ ಮಾಡುವ ಯೋಜನೆ ಹಾಕಿಕೊಳ್ಳಬೇಕು.
ಈ ಸಂದರ್ಭ ಅಲ್ಲಿಗೆ ಪುತ್ತೂರು ಎಪಿಎಂಸಿ ವತಿಯಿಂದ ಪಿಕಪ್ ವಾಹನದ ವ್ಯವಸ್ಥೆ ಮಾಡಲಾಗುತ್ತದೆ.
ವಾಹನದ ಕಡಿಮೆ ದರದ ಬಾಡಿಗೆಯನ್ನು ರೈತರೇ ಭರಿಸಬೇಕು. ಬೆಳಿಗ್ಗೆ ಗಂಟೆ 7ರಿಂದ 12 ತನಕ ಮಾತ್ರ ಅಡಿಕೆ ಮಾರಾಟಕ್ಕೆ ಅವಕಾಶ ನೀಡಲಾಗಿದೆ.
ಅಡಿಕೆ ಜತೆ ಗೇರು ಬೀಜ, ಕಾಳುಮೆಣಸು ಇತ್ಯಾದಿ ವಸ್ತುಗಳನ್ನು ಮಾರಾಟ ಮಾಡಲೂ ಅವಕಾಶ ನೀಡಲಾಗಿದೆ, ಬೈಕ್ ಮೂಲಕ ಅಡಕೆಯನ್ನು ತರಬಹುದಾಗಿದೆ. ಅಡಿಕೆಯನ್ನು ಪಿಕಪ್ ವಾಹನದಲ್ಲಿ ತರುವ ರೈತರು ತಮ್ಮ ಬೈಕ್ ಗಳಲ್ಲಿ ಮಾರುಕಟ್ಟೆಗೆ ಬರಬೇಕಾಗುತ್ತದೆ.
ಎಪಿಎಂಸಿ ಪ್ರಾಂಗಣದಲ್ಲಿ ಅಡಿಕೆ ಮಾರಾಟ ಮಾಡಿದ ನಂತರ ಎಪಿಎಂಸಿ ವತಿಯಿಂದ ನೀಡಿ ದಾಖಲೆಯನ್ನು ಪಡೆದು ಕೊಂಡು ತೆರಳಬೇಕು. ಅಡಿಕೆ ಮಾರಾಟದ ಹಣವನ್ನು ನಗದು ಅಥವಾ ಚೆಕ್ ಮೂಲಕ ನೀಡುವುದು ವರ್ತಕರಿಗೆ ಮತ್ತು ರೈತರಿಗೆ ಬಿಟ್ಟ ವಿಚಾರ.
ಪುತ್ತೂರು ಎಪಿಎಂಸಿ ಪ್ರಾಂಗಣದಲ್ಲಿರುವ ಕ್ಯಾಂಪ್ಕೋ ಅಡಕೆ ಖರೀದಿ ಕೇಂದ್ರದಲ್ಲೂ ರೈತರು ಮಾರಾಟ ಮಾಡಬಹುದು ಅಡಿಕೆಯನ್ನು ಬೈಕ್‌ಗಳಲ್ಲೂ ತಂದು ಮಾರಾಟ ಮಾಡಬಹುದು. ಆದರೆ ಪಹಿಣಿ ಪತ್ರ ಅಥವಾ ಕೃಷಿ ಪಾಸು ಪುಸ್ತಕದಂತಹ ದಾಖಲೆಗಳನ್ನು ರೈತರಲ್ಲಿ ಇದ್ದರೆ ಉತ್ತಮ. ಯಾಕೆಂದರೆ ದಾರಿಯಲ್ಲಿ ಪೊಲೀಸರಿಗೆ ದಾಖಲೆ ತೋರಿಸಬೇಕು .
ಖಾಸಗಿ ನಾಲ್ಕು ಚಕ್ರದ ವಾಹನದಲ್ಲಿ ಅಡಿಕೆ ಮಾರಾಟಕ್ಕೆ ಅವಕಾಶವಿಲ್ಲ:
ಖಾಸಗಿ 4 ಚಕ್ರದ ವಾಹನಗಳಲ್ಲಿ ಅಡಕೆ ತರುವ ಕೆಲಸ ಮಾಡಬಾರದು. ಎಪಿಂಎಸಿ ಪ್ರಾಂಗಣಕ್ಕೆ ಅಡಕೆ ತರುವ ರೈತರಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ಪೊಲೀಸರಿಗೂ ಸೂಚನೆ ನೀಡಲಾಗಿದೆ.
ರೈತರ ವಸ್ತುಗಳ ಮಾರಾಟಕ್ಕೆ ಯಾವುದೇ ನಿರ್ಬಂಧ ಇಲ್ಲದಿದ್ದರೂ ಲಾಕ್‌ಡೌನ್ ಹಿನ್ನಲೆಯಲ್ಲಿ ಪೊಲೀಸರ ಕರ್ತವ್ಯಕ್ಕೆ ತೊಂದರೆಯಾಗದಂತೆ ರೈತರು ಎಚ್ಚರಿಕೆ ವಹಿಸಬೇಕು. 12  ಗಂಟೆಯ ನಂತರ ಮಾರುಕಟ್ಟೆ ಇಲ್ಲದಿರುವ ಕಾರಣ ಅವಧಿಯೊಳಗೆ ಅಡಕೆ ಮಾರಾಟ ಮಾಡಿ ಹೋಗಬೇಕು.
ಈ ಸಂದರ್ಭದಲ್ಲಿ ಎಪಿಎಂಸಿ ಉಪಾಧ್ಯಕ್ಷ ಮಂಜುನಾಥ್ ಎನ್.ಎಸ್, ಕಾರ್ಯದರ್ಶಿ ರಾಮಚಂದ್ರ ಉಪಸ್ಥಿತರಿದ್ದರು.
ಅಡಿಕೆ ಮಾರಾಟ ಸಂಪರ್ಕ ಸಂಖ್ಯೆಎಪಿಎಂಸಿಗೆ ಕರೆ ಮಾಡುವ ರೈತರು ಸಮರ್ಪಕವಾದ ಮಾಹಿತಿ ನೀಡಬೇಕು. ಎಪಿಎಂಸಿಯಿಂದ ನಿಗಧಿತ ಪ್ರದೇಶಕ್ಕೆ ವಾಹನ ವ್ಯವಸ್ಥೆ ಮಾಡಲಾಗುತ್ತದೆ.

ಅಲ್ಲಿಗೆ ತಮ್ಮ ವಾಹನಗಳಲ್ಲಿ ಅಡಿಕೆ ತರಬೇಕು. ಎಪಿಎಂಸಿಯ ದೂರವಾಣಿ ನಂಬರ್ 08251-230434ಗೆ ಕರೆ ಮಾಡಬೇಕು. ಅಥವಾ ಎಪಿಎಂಸಿ ಕಾರ್ಯದರ್ಶಿ ರಾಮಚಂದ್ರ ಅವರ ಮೊಬೈಲ್ ಸಂಖ್ಯೆ 9449639510, ಅಧ್ಯಕ್ಷ ದಿನೇಶ್ ಮೆದು ಅವರ ಮೊಬೈಲ್ ಸಂಖ್ಯೆ 9008890045ಗೂ ಕರೆ ಮಾಡಬಹುದು.

Comments are closed.