ಕರಾಯದ ಸುತ್ತಮುತ್ತ ವಿಧಿಸಲಾಗಿದ್ದ ದಿಗ್ಬಂಧನ ಸಡಿಲಿಕೆ | ಸೋಂಕಿತ ಗುಣಮುಖನಾದ ಹಿನ್ನೆಲೆ
ಬೆಳ್ತಂಗಡಿ ತಾಲೂಕು ಕರಾಯ ಗ್ರಾಮದ ಜನತಾ ಕಾಲೋನಿಯ ಯುವಕನಿಗೆ ಕೋರೋನಾ ಸೋಂಕಿನಿಂದ ಗುಣಮುಖವಾಗಿ ಮನೆಯ ಕಡೆ ಹೆಜ್ಜೆ ಹಾಕಿದ ಮೂರು ದಿನದ ನಂತರ ಆತನ ಮನೆಯ ಸುತ್ತಮುತ್ತ ವಿಧಿಸಲಾಗಿದ್ದ
ದಿಗ್ಬಂಧನವನ್ನು ಸಡಿಲಿಸಲಾಗಿದೆ.
![](https://hosakannada.com/wp-content/uploads/2024/07/First.jpeg)
ಕರಾಯದ ಜನತಾ ಕಾಲನಿಯ ನಿವಾಸಿಯಾದ ಆತನ ಮನೆಗೆ ಹೋಗುವ ರಸ್ತೆ, ಉಪ್ಪಿನಂಗಡಿ-ಮಡಂತ್ಯಾರು ರಸ್ತೆ ಮತ್ತು ಸುತ್ತಮುತ್ತ 5 ಕಿಲೋಮೀಟರ್ ವ್ಯಾಪ್ತಿಯಲ್ಲಿ ಎಲ್ಲ ರಸ್ತೆಗಳನ್ನು ಬಂದ್ ಮಾಡಿ ಸೀಲ್ ಡೌನ್ ಮಾಡಲಾಗಿತ್ತು. ಆತನ ಜತೆ ಸಂಪರ್ಕದಲ್ಲಿ ಇದ್ದಿದ್ದ ಎಲ್ಲರನ್ನೂ ಹೋಂ ಕ್ವಾರಂಟೈನ್ ನಲ್ಲಿ ಇರಿಸಲಾಗಿತ್ತು.
![](https://hosakannada.com/wp-content/uploads/2024/07/Middle.jpeg)
21 ವರ್ಷ ವಯಸ್ಸಿನ ಈ ಸೋಂಕಿತ ವ್ಯಕ್ತಿ ದುಬೈನಿಂದ ಮಾರ್ಚ್ 21ರಂದು ಆಗಮಿಸಿದ್ದ. ಆತ ಮನೆಗೆ ಬರುತ್ತಿದ್ದಂತೆ ಆತನನ್ನು ಹೋಂ ಕ್ವಾರಂಟೈನ್ ನಲ್ಲಿ ಇರಿಸಲಾಗಿತ್ತು. ಅಷ್ಟರಲ್ಲಿ ಆತ ಹೋಂ ಕ್ವಾರಂಟೈನ್ ಧಿಕ್ಕರಿಸಿ ಊರಲ್ಲಿ ತಿರುಗಾಡಿದ್ದ. ಮಾರ್ಚ್ 24 ರಂದು ಆತನಿಗೆ ಕೋರೋನಾ ರೋಗ ಲಕ್ಷಣಗಳು ಗೋಚರಿಸಿದ್ದವು. ಆ ತಕ್ಷಣ ಆತನನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಸೇರಿಸಲಾಗಿತ್ತು ಹೀಗೆ ಮೂರು ದಿನಗಳ ಹಿಂದೆ ಆತ ಪೂರ್ತಿ ಗುಣಮುಖನಾಗಿ ಮನೆಗೆ ಮರಳಿದ್ದ.
ಆತನ ಜೊತೆ ಹೋಂ ಕ್ವಾರಂಟೈನ್ ನಲ್ಲಿ ಇರಿಸಲಾಗಿದ್ದ, ಆತನ ಜೊತೆ ಸಂಪರ್ಕಕ್ಕೆ ಬಂದ ಎಲ್ಲರ ಹೋಂ ಕ್ವಾರಂಟೈನ್ ಅವಧಿಯು ಮುಕ್ತಾಯವಾಗಿದ್ದು ಅವರ್ಯಾರಲ್ಲಿಯೂ ರೋಗಲಕ್ಷಣಗಳು ಗೋಚರಿಸದ ಹಿನ್ನೆಲೆಯಲ್ಲಿ ಆತನ ಮನೆಯ ಸುತ್ತಮುತ್ತ ವಿಧಿಸಲಾಗಿದ್ದ ಧಿಗ್ಬಂದನವನ್ನು ತೆರವುಗೊಳಿಸಲಾಗಿದೆ.