ಕಾಡಾನೆ ದಾಳಿಗೆ ಓರ್ವ ಬಲಿ, ಮತ್ತೊಬ್ಬರಿಗೆ ಗಾಯ

ಕುಶಾಲನಗರ : ಕಾಡಾನೆ ದಾಳಿಗೆ ಸಿಲುಕಿ ಒಬ್ಬರು ಮೃತಪಟ್ಟ ಹಾಗೂ ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಶನಿವಾರ ನಡೆದಿದೆ.

ನಂಜರಾಯಪಟ್ಟಣ ಸಮೀಪದ ಕಬ್ಬಿನ ಗದ್ದೆ ಗ್ರಾಮದ ಚನ್ನಪ್ಪ ಎಂಬವರ ಪುತ್ರ ಎಂ.ಸಿ.ಲೋಕೇಶ್ (35) ಮೃತ ದುರ್ದೈವಿ ಮತ್ತು ಅದೇ ಗ್ರಾಮದ ಮುತ್ತ (65) ಎಂಬವರು ಗಂಭೀರವಾಗಿ ಗಾಯಗೊಂಡು ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಗೆ ಸಾಗಿಸಲ್ಪಟ್ಟಿದ್ದಾರೆ.

ಈ ಇಬ್ಬರು ವ್ಯಕ್ತಿಗಳು ಆನೆಕಾಡು ಮೀಸಲು ಅರಣ್ಯ ಪ್ರದೇಶಕ್ಕೆ ಸೌದೆ ಸಂಗ್ರಹಿಸಲು ತೆರಳಿದ್ದರು. ಅವರು ದೂರದಿಂದಲೇ ಕಾಡಾನೆಯನ್ನು ಗುರುತಿಸಿದ್ದಾರೆ. ಆದರೆ ಅವರು ನಿರೀಕ್ಷಿಸದ ವೇಗದಲ್ಲಿ ಕಾಡಾನೆ ಅವರತ್ತ ನುಗ್ಗಿ ಬಂದಿದೆ. ಇಬ್ಬರ ಮೇಲೂ ಏಕಾಏಕಿ ದಾಳಿ ಮಾಡಿದೆ.

ಗಂಭೀರವಾಗಿ ಗಾಯಗೊಂಡ ಲೋಕೇಶ್ ಅವರನ್ನು  ಕುಶಾಲನಗರ ಸರಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಯಿತಾದರೂ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.

Leave A Reply

Your email address will not be published.