ಪಶ್ಚಿಮ ಬಂಗಾಲ, ತಮಿಳುನಾಡು, ಕೇರಳ ಮತ್ತು ಅಸ್ಸಾಂ ರಾಜ್ಯಗಳ ವಿಧಾನಸಭಾ ಚುನಾವಣೆ ಮುಕ್ತಾಯಗೊಂಡಿದ್ದು ಇದೀಗ, ಇಡೀ ದೇಶದ ಚಿತ್ತ ಈ ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶದ ಮೇಲೆ ನೆಟ್ಟಿದೆ. ಜನರು ಮತದಾರ ಯಾರಿಗೆ ಜೈ ಎಂದಿದ್ದಾನೆ ಎಂದು ನೋಡಲು ಕುತೂಹಲದಿಂದ ಕಾಯುತ್ತಿದ್ದಾರೆ. ಹಾಗಿದ್ರೆ ಈ ನಾಲ್ಕು ರಾಜ್ಯಗಳ ಚುನಾವಣೆ ಕುರಿತು ಎಕ್ಸಿಟ್ ಪೋಲ್ ಫಲಿತಾಂಶ ಏನು ಹೇಳುತ್ತೆ ನೋಡೋಣ ಬನ್ನಿ.


ಅಸ್ಸಾಂ :
ಅಸ್ಸಾಂ ಈ ಬಾರಿ ಹೆಚ್ಚು ಕುತೂಹಲ ಕೆರಳಿಸಿದ ಕ್ಷೇತ್ರ. ಇಲ್ಲಿ ಆಡಳಿತಾರೂಢ ಬಿಜೆಪಿ ಮತ್ತೆ ಅಧಿಕಾರಕ್ಕೇರುವ ಸಾಧ್ಯತೆ ಹೆಚ್ಚಿದೆ. ಕಾಂಗ್ರೆಸ್ ಪ್ರಿಯಾಂಕ್ ಖರ್ಗೆ, ಕರ್ನಾಟಕದ ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಪ್ರಚಾರ ನಡೆಸಿದರೂ ಇಲ್ಲಿ ಸಿಎಂ ಹಿಮಂತ ಬಿಸ್ವಾ ಶರ್ಮಾ ವರ್ಚಸ್ಸು ಬಿಜೆಪಿ ಕೈ ಹಿಡಿಯಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ. ಜೊತೆಗೆ ಅಲ್ಪಸಂಖ್ಯಾತರ ಮತಗಳು ಸ್ವಲ್ಪ ಪ್ರಮಾಣದಲ್ಲಿ ಎಐಯುಡಿಎಫ್ ಪಾಲಾಗುವ ಸಾಧ್ಯತೆಯಿದೆ. ಹಾಗಿದ್ದರೂ ಅತಂತ್ರ ಸ್ಥಿತಿ ಬಂದರೆ ಈ ಪಕ್ಷ ಕಿಂಗ್ ಮೇಕರ್ ಆದರೂ ಅಚ್ಚರಿಯಿಲ್ಲ.
ಕೇರಳ:
ದೇವರ ನಾಡು ಎಂದೇ ಖ್ಯಾತಿ ಪಡೆದಿರುವ ಕೇರಳದಲ್ಲಿ ಈ ಬಾರಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಅಧಿಕಾರ ಸಿಗುವ ಸಾಧ್ಯತೆ ಬಹುತೇಕ ನಿಚ್ಚಳವಾಗಿದೆ. ಕಳೆದ ಲೋಕಸಭೆ ಚುನಾವಣೆಯಲ್ಲೂ ಎಲ್ ಡಿಎಫ್ ಗೆ ಭಾರೀ ಹಿನ್ನಡೆಯಾಗಿತ್ತು. ಕೇರಳದಿಂದ ಯುಡಿಎಫ್ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿತ್ತು. ಈಗ ಆಡಳಿತಾರೂಢ ಎಲ್ ಡಿಎಫ್, ವಿಪಕ್ಷ ಯುಡಿಎಫ್ ಜೊತೆಗೆ ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ಕೂಡಾ ಟಫ್ ಫೈಟ್ ನೀಡಿದೆ.
ಪಶ್ಚಿಮ ಬಂಗಾಳ :
ಈ ಬಾರಿ ಅತೀ ಹೆಚ್ಚು ಕುತೂಹಲದಿಂದ ದೇಶವೇ ಎದಿರು ನೋಡುತ್ತಿರುವ ಚುನಾವಣೆ ಎಂದರೆ ಪಶ್ಚಿಮ ಬಂಗಾಲದಲ್ಲಿ ಈ ಬಾರಿ ಬಿಜೆಪಿ ಅಧಿಕಾರ ಹಿಡಿಯುವ ಯತ್ನದಲ್ಲಿದೆ. ಒಂದು ವೇಳೆ ಬಿಜೆಪಿ ಇಲ್ಲಿ ಗೆದ್ದರೆ ಅದು ಐತಿಹಾಸಿಕ ಗೆಲುವಾಗಲಿದೆ. ಆದರೆ ಪಶ್ಚಿಮ ಬಂಗಾಲದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸೋಲಿಸುವುದು ಅಷ್ಟು ಸುಲಭವಲ್ಲ. ಆದರೆ ಈ ಬಾರಿ ಇಲ್ಲಿ ಮತಪಟ್ಟಿ ಪರಿಷ್ಕರಣೆ, ಸಿಆರ್ ಪಿಎಫ್ ಯೋಧರಿಂದ ಬಿಗಿ ಭದ್ರತೆ ನಡುವೆ ನಡೆದ ಚುನಾವಣೆ, ಮಮತಾ ಆಡಳಿತದಲ್ಲಿ ಹಿಂದೂಗಳ ಮೇಲೆ ನಡೆದಿದ್ದ ಹಿಂಸಾಚಾರಗಳು ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು ಎನ್ನಲಾಗಿದೆ. ಇಲ್ಲಿ ಬಿಜೆಪಿ ಮತ್ತು ಟಿಎಂಸಿ ನಡುವೆ ಈ ಬಾರಿ ನೇರ ಹಣಾಹಣಿಯಿದೆ. ಕಾಂಗ್ರೆಸ್ ಸ್ಪರ್ಧೆಯಲ್ಲಿದ್ದರೂ ಏಕಾಂಗಿಯಾಗಿ ಸ್ಪರ್ಧಿಸುತ್ತಿರುವ ಅದಕ್ಕೆ ಅಷ್ಟು ಶಕ್ತಿಯಿಲ್ಲ.
ತಮಿಳುನಾಡು :
ತಮಿಳುನಾಡು ಚುನಾವಣೆ ಫಲಿತಾಂಶ ಈ ಬಾರಿ ತೀವ್ರ ಕುತೂಹಲ ಕೆರಳಿಸಿದೆ. ಹೊಸದಾಗಿ ಪಕ್ಷ ಸ್ಥಾಪಿಸಿ ಸ್ಪರ್ಧಿಸಿರುವ ದಳಪತಿ ವಿಜಯ್ ಅವರ ಟಿವಿಕೆ ಕಿಂಗ್ ಮೇಕರ್ ಆಗುವ ವಿಶ್ವಾಸದಲ್ಲಿದೆ. ಇಲ್ಲಿ ಡಿಎಂಕೆ, ಎಐಡಿಎಂಕೆ ಮತ್ತು ಟಿವಿಕೆ ನಡುವೆ ಹಣಾಹಣಿಯಿದೆ. ಬಿಜೆಪಿ ಇಲ್ಲಿ ಮಿತ್ರ ಪಕ್ಷ ಎಐಡಿಎಂಕೆ ಜೊತೆ ಸರ್ಕಾರ ರಚಿಸುವ ಸರ್ಕಸ್ ಮಾಡುತ್ತಿದೆಯಾದರೂ ಅದು ಅಷ್ಟು ಸುಲಭವಲ್ಲ. ಡಿಎಂಕೆ ನಾಯಕತ್ವದ ವರ್ಚಸ್ಸು ತಮಿಳುನಾಡಿನಲ್ಲಿ ಪಕ್ಷದ ಕೈ ಹಿಡಿಯಬಹುದು. ಆದರೆ ದಳಪತಿ ವಿಜಯ್ ತಮ್ಮ ಸಿನಿಮಾ ಜನಪ್ರಿಯತೆ ಜೊತೆಗೆ ಈ ಬಾರಿ ಸಾಕಷ್ಟು ರೋಡ್ ಶೋ, ಪಾದಯಾತ್ರೆಗಳ ಮೂಲಕ ಜನರ ಗಮನ ಸೆಳೆದಿದ್ದಾರೆ. ಹೀಗಾಗಿ ಇಲ್ಲಿ ಫಲಿತಾಂಶ ಏನಾಗಬಹುದು ಎಂದು ಹೇಳಲು ಸಾಧ್ಯವಿಲ್ಲ.

