ರಾತ್ರಿ ವೇಳೆ ಬಿರಿಯಾನಿ ತಿಂದ ಬಳಿಕ ಕಲ್ಲಂಗಡಿ ಹಣ್ಣನ್ನು ತಿಂದು ಮಲಗಿದ ಕುಟುಂಬದ ನಾಲ್ವರು ಸದಸ್ಯರು ಬೆಳಿಗ್ಗೆ ಹೊತ್ತಿಗೆ ಸಾವನ್ನಪ್ಪಿರುವ ಘಟನೆ ಮುಂಬೈನ ಬಾಂದ್ರಾದಲ್ಲಿ ನಡೆದಿತ್ತು. ಇದೀಗ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ನಾಲ್ವರ ಸಾವಿನ ರಹಸ್ಯ ಬಯಲಾಗಿದೆ.


ಮುಂಬೈನಲ್ಲಿ, ಒಂದು ಕುಟುಂಬ ರಾತ್ರಿ ಬಿರಿಯಾನಿ ಪಾರ್ಟಿ ಮಾಡಿ, ನಂತರ ಕಲ್ಲಂಗಡಿ ತಿಂದಿತು. ಆದರೆ ಬೆಳಿಗ್ಗೆ, ಎಲ್ಲರೂ ಇದ್ದಕ್ಕಿದ್ದಂತೆ ಅಸ್ವಸ್ಥರಾಗಿ ಸಾವನ್ನಪ್ಪಿದರು. ಪೈಧುನಿಯ ನಿವಾಸಿಗಳಾದ ಅಬ್ದುಲ್ ಮತ್ತು ನಸ್ರೀನ್ ದೋಕಾಡಿಯಾ ಶನಿವಾರ ರಾತ್ರಿ ಪಾರ್ಟಿ ಮಾಡಿದ್ದರು. ಹಾಗಾಗಿ, ಮನೆಯಲ್ಲಿ ಬಿರಿಯಾನಿಯನ್ನು ವಿಶೇಷವಾಗಿ ತಯಾರಿಸಲಾಗಿತ್ತು. ಅದರಂತೆ, ರಾತ್ರಿ 10 ಗಂಟೆಯ ಸುಮಾರಿಗೆ ಒಂಬತ್ತು ಜನರು ಒಟ್ಟಿಗೆ ಊಟ ಮಾಡಿದರು. ಆದರೆ, ಇದಾದ ಕೆಲವೇ ಗಂಟೆಗಳಲ್ಲಿ ಎಲ್ಲರಿಗೂ ತೀವ್ರವಾಗಿ ವಾಂತಿ ಮತ್ತು ಹೊಟ್ಟೆನೋವು ಕಾಣಿಸಿಕೊಂಡಿದೆ. ನಂತರ, ಗಂಡ, ಹೆಂಡತಿ ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿದ್ದರು. ಈ ಘಟನೆಯು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಹಾಗಾದ್ರೆ, ಈ ನಾಲ್ವರ ಸಾವಿಗೆ ಕಾರಣವೇನು? ಎಂಬುದು ಯಕ್ಷ ಪ್ರಶ್ನೆಯಾಗಿತ್ತು. ಇದೀಗ ಸಾವಿನ ಕಾರಣ ಬಯಲಾಗಿದೆ.
ಯಸ್, ಕುಟುಂಬದ ಸಾವು ಕಲ್ಲಂಗಡಿ ಹಣ್ಣಿನಿಂದ ಉಂಟಾದ ಸಾಮಾನ್ಯ ವಿಷಾಹಾರ ಸೇವನೆಯಿಂದ (Food Poisoning) ಸಂಭವಿಸಿದ್ದಲ್ಲ, ಬದಲಾಗಿ ಹಣ್ಣಿನಲ್ಲಿ ಬೆರೆತಿದ್ದ ಇಲಿ ಪಾಷಾಣದಿಂದ ಉಂಟಾದ ಸಾವು ಎಂದು ವಿಧಿವಿಜ್ಞಾನ (Forensic) ವರದಿ ದೃಢಪಡಿಸಿದೆ. ಅಲ್ಲದೆ ಮೃತರ ದೇಹದಲ್ಲಿ ಮತ್ತು ಅವರು ಸೇವಿಸಿದ್ದ ಕಲ್ಲಂಗಡಿ ಹಣ್ಣಿನ ಮಾದರಿಗಳಲ್ಲಿ ತೀವ್ರ ವಿಷಕಾರಿ ಅಂಶಗಳು ಪತ್ತೆಯಾಗಿವೆ.
ಮರಣೋತ್ತರ ಪರೀಕ್ಷೆಯ ವೇಳೆ ಮೃತರ ಮೆದುಳು, ಹೃದಯ ಮತ್ತು ಕರುಳು ಸೇರಿದಂತೆ ಒಳಗಿನ ಅಂಗಾಂಗಗಳು ಹಸಿರು ಬಣ್ಣಕ್ಕೆ ತಿರುಗಿರುವುದು ಕಂಡುಬಂದಿದೆ. ಇದು ತೀವ್ರ ವಿಷಪೂರಿತ ಅಂಶ ದೇಹ ಸೇರಿರುವುದರ ಲಕ್ಷಣವಾಗಿದೆ. ಅಲ್ಲದೆ ಅಬ್ದುಲ್ಲಾ ಡೊಕಾಡಿಯಾ ಅವರ ದೇಹದಲ್ಲಿ ‘ಮಾರ್ಫಿನ್’ ಎಂಬ ಪ್ರಬಲ ನೋವು ನಿವಾರಕದ ಅಂಶವೂ ಪತ್ತೆಯಾಗಿದ್ದು, ಇದು ವೈದ್ಯಕೀಯ ಕಾರಣಕ್ಕಾಗಿ ನೀಡಲಾಗಿದ್ದೇ ಅಥವಾ ಇದರ ಹಿಂದೆ ಬೇರೇನಾದರೂ ಸಂಚಿದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

