ಅಪ್ರಾಪ್ತ ಬಾಲಕಿಯ ಮಿಸ್ಸಿಂಗ್ ಕೇಸ್ನಲ್ಲಿ ಬಂಧಿತನಾಗಿದ್ದ ಆರೋಪಿ, ಪೋಕ್ಸೋ ಕೇಸ್ ಭಯಕ್ಕೆ ಪೊಲೀಸ್ ಠಾಣೆಯಲ್ಲೇ ಲಾಕರ್ ಕೀ ನುಗಿದ್ದು ಬಳಿಕ ಪೊಲೀಸರು 10 ಕೆ.ಜಿ ಬಾಳೆಹಣ್ಣನ್ನು ತಿನ್ನಿಸಿ ಹೊರ ತೆಗೆದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.


ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಕಾರ್ತಿಕ್ ಅಲಿಯಾಸ್ ರಾಮು ಎಂಬಾತ ಆತ್ಮಹತ್ಯೆಯ (Suicide Attempt) ಹೈಡ್ರಾಮಾ ಮಾಡಿದ ಆರೋಪಿ. ಬಳ್ಳಾರಿ ಮೂಲದ ಕಾರ್ತಿಕ್ ಅಲಿಯಾಸ್ ರಾಮು ಅಪ್ರಾಪ್ತ ಬಾಲಕಿಯನ್ನು ಕರೆದುಕೊಂಡು ಹೋದ ಬಗ್ಗೆ ಏಪ್ರಿಲ್ 24ರಂದು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದರು. ಈ ಸಂಬಂಧ ಆತನ ವಿರುದ್ಧ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಲಾಗುತ್ತಿತ್ತು.
ಈ ವೇಳೆ ಠಾಣೆಯಲ್ಲಿದ್ದಾಗಲೇ ಆರೋಪಿ ಕೀ ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆದರಿಂದ ಗಾಬರಿಗೊಂಡ ಪೊಲೀಸರು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿಯ ಹೊಟ್ಟೆಯಲ್ಲಿದ್ದ ಕೀಯನ್ನು ಹೊರತೆಗೆಯಲು ವೈದ್ಯರು ಮತ್ತು ಪೊಲೀಸರು ವಿಭಿನ್ನ ಹಾದಿ ತುಳಿದಿದ್ದಾರೆ. ಸತತ ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಅಲ್ಲದೆ, ಆ ಮೂರು ದಿನ 10 ಕೆ.ಜಿ.ಬಾಳೆಹಣ್ಣು ತಿನ್ನಿಸಿದ್ದಾರೆ. ಬಳಿಕ ಶೌಚಕ್ಕೆ ಹೋದಾಗ ಕೀ ಹೊರಬಂದಿದ್ದು, ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ. ನಂತರ ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಗುರಿಪಡಿಸಿ ಪೋಕ್ಸೋ ಪ್ರಕರಣದೊಂದಿಗೆ ಸರ್ಕಾರಿ ನೌಕರರಿಗೆ ಆತಂಕ ಸೃಷ್ಟಿಸಿದ ಆರೋಪದಲ್ಲಿ ಇತರೆ ಸೆಕ್ಷನ್ಗಳನ್ನು ವಿಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ
