ಶಿವಮೊಗ್ಗ, ಮೇ.08: ನಗರದ ಪ್ರಸಿದ್ಧ ಮಾನಸಿಕ ಸಾಮಾಜಿಕ ಪುನರ್ವಸತಿ ಕೇಂದ್ರಕ್ಕೆ ಚಿಕಿತ್ಸೆಗೆಂದು ದಾಖಲಾಗಿದ್ದ ಯುವತಿ ಒಂದೇ ದಿನಕ್ಕೆ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.


ಶಿಕಾರಿಪುರದ ಈಸೂರಿನ ನಿವಾಸಿ ನೇಹಾ (17) ಮೃತ ಯುವತಿ.
ಮಗಳ ಸಾವಿನಿಂದ ಕುಟುಂಬವು ಭಾರೀ ಆಘಾತಕ್ಕೊಳಗಾಗಿದ್ದು, ಹಲವು ಅನುಮಾನ ಹುಟ್ಟಿಕೊಂಡಿದೆ. ಈ ಕುರಿತು ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
8 ತಿಂಗಳ ಹಿಂದೆ ಕಾಲೇಜಿಗೆ ಹೋಗುವಾಗ ಹಾವು ನೋಡಿ ಬೆಚ್ಚಿ ಬಿದ್ದಿದ್ದ ನೇಹಾ, ಓದುವಾ ವಿಚಾರದಲ್ಲಿ ಮಂಕಾಗಿದ್ದು, ಒಮ್ಮೆ ಬ್ಲೇಡ್ನಿಂದ ಕೈ ಕೊಯ್ದುಕೊಂಡಿದ್ದಳು. ಈ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಕೂಡಾ ಬರೆದಿಲ್ಲ. 3 ದಿನಗಳ ಹಿಂದೆಯೂ ಯುವತಿಯನ್ನು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗಿತ್ತು. ಈ ನಡುವೆ ಈಕೆಯನ್ನು ಶಿವಮೊಗ್ಗದ ಮಾನಸಧಾರ ಮಾನಸಿಕ ಸಾಮಾಜಿಕ ಪುನರ್ವಸತಿ ಕೇಂದ್ರದವರು ಬೇಸಿಗೆ ಶಿಬಿರಕ್ಕೆ ಸೇರಿಸಿದರೆ ಗುಣಮುಖಳಾಗುತ್ತಾಳೆ ಎಂದು ಹೇಳಿದ್ದು, ಹೀಗಾಗಿ ಮೊನ್ನೆ ಮಧ್ಯಾಹ್ನ 3 ಗಂಟೆಗೆ ಪುನರ್ ವಸತಿ ಕೇಂದ್ರಕ್ಕೆ ನೇಹಾಳನ್ನು ಕರೆತಂದು ಪೋಷಕರು ಸೇರಿಸಿದ್ದರು.
ಆದರೆ ನಿನ್ನೆ ಮಧ್ಯಾಹ್ನ ಹೊತ್ತಿಗೆ ಪುನರ್ವಸತಿ ಕೇಂದ್ರದ ಕಡೆಯಿಂದ ನೇಹಾ ಪೋಷಕರಿಗೆ ಸವಾರ್ ಲೈನ್ ರಸ್ತೆಯಲ್ಲಿರುವ ಖಾಸಗಿ ನರ್ಸಿಂಗ್ ಹೋಂಗೆ ಬನ್ನಿ, ನೇಹಾ ಕೈ ಕೊಯ್ದುಕೊಂಡಿದ್ದಾಳೆ ಎನ್ನುವ ಮಾಹಿತಿ ಬಂದಿದ್ದು, ಆದರೆ ಮನೆ ಮಂದಿ ತಲುಪುವಷ್ಟರಲ್ಲಿ ಆಕೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ಸಂಪೂರ್ಣ ಜವಾಬ್ದಾರಿ ನಮ್ಮದೇ ಎಂದು ಪುನರ್ ವಸತಿ ಕೇಂದ್ರಕ್ಕೆ ಸೇರಿಸಿಕೊಂಡಿದ್ದ ವೈದ್ಯರು ಇಂತಹ ಘಟನೆ ನಡೆದ್ರೂ ಪೊಲೀಸರಿಗೆ ಮಾಹಿತಿ ನೀಡದೇ ಖಾಸಗಿ ಆಸ್ಪತ್ರೆಗೆ ಆಕೆಯನ್ನು ಕರೆತಂದಿದ್ದಾರೆ. ಬೇಸಿಗೆ ಶಿಬಿರದಲ್ಲಿ ಸಮಾನ ಮನಸ್ಕರರೊಂದಿಗೆ ನೇಹಾಳನ್ನ ಬಿಡಲಾಗುವುದು ಎಂದಿದ್ದ ಆಸ್ಪತ್ರೆಯವರು ಮಾನಸಿಕ ರೋಗಿಗಳ ಜೊತೆ ಆಕೆಯನ್ನು ಬಿಟ್ಟಿದ್ದಾರೆ ಎಂದು ಕುಟುಂಬಸ್ಥರು ದೂರಿದ್ದಾರೆ. ಅಲ್ಲದೆ ಪುನರ್ ವಸತಿ ಕೇಂದ್ರದ ಕೊಠಡಿಯಲ್ಲಿಯೇ ನೇಹಾ ವೇಲ್ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರೋದಾಗಿ ಗಂಭೀರ ಆರೋಪ ಮಾಡಿದ್ದಾರೆ.

