ಮಡಿಕೇರಿ ಮೇ 8: ಚಲಿಸುತ್ತಿದ್ದ ಖಾಸಗಿ ಬಸ್ನಲ್ಲಿ ಚಾಲಕನಿಗೆ ಹಠಾತ್ ಹೃದಯಾಘಾತ ಸಂಭವಿಸಿದ್ದು, ಸ್ಥಳದಲ್ಲಿಯೇ ಸಾವಿಗೀಡಾಗಿರುವ ಘಟನೆ ಮಡಿಕೇರಿ ತಾಳತ್ ಮನೆ ಬಳಿ ಇಂದು ಮುಂಜಾನೆ ನಡೆದಿರುವ ಕುರಿತು ವರದಿಯಾಗಿದೆ.


ʼಪೂರ್ಣಿಮಾ ಟ್ರಾವೆಲ್ಸ್ʼ ಬಸ್ ಬೆಂಗಳೂರಿನಿಂದ ಮಡಿಕೇರಿ ಕಡೆಗೆ ಹೊರಟಿತ್ತು. ಬೆಳಗ್ಗೆ ಐದು ಗಂಟೆ ಸುಮಾರಿಗೆ ತಾಲೂಕಿನ ತಾಳತ್ ಮನೆ ಬಳಿ ಚಲಿಸುತ್ತಿದ್ದ ಸಂದರ್ಭದಲ್ಲಿ ಚಾಲಕನಿಗೆ ಹೃದಯಾಘಾತ ಸಂಭವಿಸಿದೆ. ಬಸ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಇಳಿಜಾರಿಗೆ ವಾಲಿದೆ. ಚಾಲಕ ಕೂಡಲೇ ತನ್ನ ಶಕ್ತಿಯನ್ನು ಬಳಸಿ ಬಸ್ ಅನ್ನು ನಿಯಂತ್ರಣಕ್ಕೆ ತರಲು ಪ್ರಯತ್ನ ಪಟ್ಟಿದ್ದು, ಬಸನ್ನು ಚರಂಡಿಯ ಸಮೀಪ ನಿಲ್ಲಿಸಲು ಯಶಸ್ವಿಯಾಗಿದ್ದು, ಇದರಿಂದ ದೊಡ್ಡ ಅನಾಹುತವೊಂದು ತಪ್ಪಿದೆ.
ಪ್ರಯಾಣಿಕರ ಜೀವಕ್ಕೆ ಯಾವುದೇ ಅಪಾಯ ಸಂಭವಿಸಿಲ್ಲ. ಆದರೆ ಚಾಲಕ ತೀವ್ರ ಹೃದಯಾಘಾತದಿಂದ ಬಸ್ನಲ್ಲೇ ಕೊನೆಯುಸಿರೆಳೆದಿದ್ದಾನೆ. ಘಟನೆ ನಡೆದ ಸ್ಥಳಕ್ಕೆ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಬಸ್ನಲ್ಲಿದ್ದ ಪ್ರಯಾಣಿಕರು ಆತಂಕಗೊಂಡಿದ್ದು, ಅವರಿಗೆ ಬದಲಿ ವಾಹನದ ವ್ಯವಸ್ಥೆ ಮಾಡಲಾಗಿದ್ದು, ಅವರನ್ನು ಸುರಕ್ಷಿತವಾಗಿ ಕಳುಹಿಸಲಾಗಿದೆ.
