Home » “ಸಮಸ್ತ” ಆ್ಯಪ್ ಒತ್ತಡಕ್ಕೆ ಬೇಸತ್ತ ಆಶಾ ಕಾರ್ಯಕರ್ತೆಯರ ಪ್ರೋತ್ಸಾಹ ಧನ ವಿಳಂಬ, ಸೇವಾ ಭದ್ರತೆ ಕೊರತೆ ವಿರುದ್ಧ DHOಗೆ ಮನವಿ

“ಸಮಸ್ತ” ಆ್ಯಪ್ ಒತ್ತಡಕ್ಕೆ ಬೇಸತ್ತ ಆಶಾ ಕಾರ್ಯಕರ್ತೆಯರ ಪ್ರೋತ್ಸಾಹ ಧನ ವಿಳಂಬ, ಸೇವಾ ಭದ್ರತೆ ಕೊರತೆ ವಿರುದ್ಧ DHOಗೆ ಮನವಿ

0 comments

“ಮಂಗಳೂರು, ಮೇ 29:ಗ್ರಾಮೀಣ ಆರೋಗ್ಯ ವ್ಯವಸ್ಥೆಯ ಬೆನ್ನೆಲುಬಾಗಿರುವ ಆಶಾ ಕಾರ್ಯಕರ್ತೆಯರು “ಸಮಸ್ತ” ಆ್ಯಪ್‌ನ ಹೆಚ್ಚುವರಿ ಡಿಜಿಟಲ್ ಕೆಲಸದ ಒತ್ತಡ, ಪ್ರೋತ್ಸಾಹ ಧನ ವಿಳಂಬ ಹಾಗೂ ಸೇವಾ ಭದ್ರತೆ ಕೊರತೆಯ ವಿರುದ್ಧ ಹೋರಾಟದ ಹಾದಿ ಹಿಡಿದಿದ್ದಾರೆ.

ಬಂಟ್ವಾಳ ತಾಲೂಕು ಆಶಾ ಕಾರ್ಯಕರ್ತೆಯರ ತಾಲೂಕು ಸಮಿತಿ (BMS ಗೆ ಸಂಯೋಜಿತ ಸಂಘ) ನೇತೃತ್ವದಲ್ಲಿ ನಾಳೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯವರಿಗೆ ಮನವಿ ಸಲ್ಲಿಸಲಾಗುತ್ತಿದೆ.ಆಶಾ

ಕಾರ್ಯಕರ್ತೆಯರು ಮನೆಮನೆಗೆ ತೆರಳಿ ತಾಯಿ-ಮಗು ಆರೋಗ್ಯ, ಲಸಿಕೆ ಕಾರ್ಯಕ್ರಮ, ಆರೋಗ್ಯ ಜಾಗೃತಿ ಹಾಗೂ ವಿವಿಧ ಆರೋಗ್ಯ ಸೇವೆಗಳನ್ನು ನಿರ್ವಹಿಸುತ್ತಿದ್ದರೂ, ಇತ್ತೀಚೆಗೆ “ಸಮಸ್ತ” ಆ್ಯಪ್ ಮೂಲಕ ನೀಡಲಾಗುತ್ತಿರುವ ಹೆಚ್ಚುವರಿ ಡಿಜಿಟಲ್ ಕೆಲಸದಿಂದ ತೀವ್ರ ಮಾನಸಿಕ ಮತ್ತು ದೈಹಿಕ ಒತ್ತಡಕ್ಕೆ ಒಳಗಾಗಿದ್ದಾರೆ ಎಂದು ಸಂಘಟನೆ ಆರೋಪಿಸಿದೆ.ಒಂದು ಮನೆಯ ಮಾಹಿತಿಯನ್ನು ದಾಖಲಿಸಲು ಒಂದು ಗಂಟೆಯಿಂದ ಒಂದೂವರೆ ಗಂಟೆಯವರೆಗೆ ಸಮಯ ಬೇಕಾಗುತ್ತಿದ್ದು, ನೆಟ್ವರ್ಕ್ ಹಾಗೂ ತಾಂತ್ರಿಕ ಸಮಸ್ಯೆಗಳು ಕೆಲಸವನ್ನು ಇನ್ನಷ್ಟು ಕಷ್ಟಕರವಾಗಿಸುತ್ತಿವೆ ಎಂದು ಆಶಾ ಕಾರ್ಯಕರ್ತೆಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದರ ಜೊತೆಗೆ ಹಲವು ತಿಂಗಳುಗಳಿಂದ ಪ್ರೋತ್ಸಾಹ ಧನ ವಿಳಂಬವಾಗುತ್ತಿರುವುದು ಹಾಗೂ ಕಳೆದ ನಾಲ್ಕು ವರ್ಷಗಳಿಂದ ಧನ ಹೆಚ್ಚಳವಾಗದಿರುವುದು ಕುಟುಂಬ ಜೀವನದ ಮೇಲೂ ದುಷ್ಪರಿಣಾಮ ಬೀರುತ್ತಿದೆ ಎಂದು ಅವರು ತಿಳಿಸಿದ್ದಾರೆ.

banner

“ಸಮಸ್ತ” ಆ್ಯಪ್ ರದ್ದುಪಡಿಸಬೇಕು, ಪ್ರೋತ್ಸಾಹ ಧನವನ್ನು ನಿಗದಿತ ದಿನಾಂಕಕ್ಕೆ ಬಿಡುಗಡೆಗೊಳಿಸಬೇಕು, ಪ್ರೋತ್ಸಾಹ ಧನವನ್ನು ತಕ್ಷಣ ಪರಿಷ್ಕರಿಸಬೇಕು ಹಾಗೂ ಆಶಾ ಕಾರ್ಯಕರ್ತೆಯರ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ರಾಜ್ಯ ಮಟ್ಟದ ಸಮಿತಿ ರಚಿಸಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಸಂಘಟನೆ ಮುಂದಿಟ್ಟಿದೆ.

ನಾಳೆ ಬೆಳಿಗ್ಗೆ 10 ಗಂಟೆಗೆ ಮಂಗಳೂರಿನ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಮನವಿ ಸಲ್ಲಿಕೆ ನಡೆಯಲಿದ್ದು, ಜಿಲ್ಲೆಯ ವಿವಿಧ ಭಾಗಗಳಿಂದ ಆಶಾ ಕಾರ್ಯಕರ್ತೆಯರು ಭಾಗವಹಿಸಲಿದ್ದಾರೆ.

You may also like