Home » ಮೂಡಬಿದಿರೆ: ದೈವದ ಭಂಡಾರ ಮೆರವಣಿಗೆ ವೇಳೆ ಕಾಲು ಸಂಕ ಕುಸಿತ: 8 ಮಂದಿಗೆ ಗಾಯ

ಮೂಡಬಿದಿರೆ: ದೈವದ ಭಂಡಾರ ಮೆರವಣಿಗೆ ವೇಳೆ ಕಾಲು ಸಂಕ ಕುಸಿತ: 8 ಮಂದಿಗೆ ಗಾಯ

0 comments

ಮೂಡುಬಿದಿರೆ: ಪುಚ್ಚೆಮೊಗರು ಗ್ರಾಮದ ಬಾವದಬೈಲು ಎನ್ನುವಲ್ಲಿ ದೈವದ ಭಂಡಾರ ಮೆರವಣಿಗೆಯ ವೇಳೆ ಕಾಲು ಸಂಕ ಮುರಿದುಬಿದ್ದಿದ್ದು, ಭಾರೀ ಅವಘಡ ನಡೆದಿದೆ. ಈ ಘಟನೆಯಲ್ಲಿ ಎಂಟು ಮಂದಿ ಗಾಯಗೊಂಡಿದ್ದು, ಇವರನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ತಾಕೋಡೆ ಬರ್ಕೆ ಧರ್ಮನೇಮೋತ್ಸವದ ಅಂಗವಾಗಿ ದೈವದ ಭಂಡಾರವನ್ನು ಪಲ್ಲಕ್ಕಿಯಲ್ಲಿ ಹೊತ್ತುಕೊಂಡು ಮೆರವಣಿಗೆಯ ಮೂಲಕ ಕೊಂಡೊಯ್ಯಲಾಗುತ್ತಿತ್ತು. ಕೊಂಬು, ಬ್ಯಾಂಡ್‌ ವಾದ್ಯಗಳ ಜೊತೆ ಭಕ್ತರು ಸಾಗುತ್ತಿದ್ದಾಗ, ಬಾವದಬೈಲು ಎನ್ನುವಲ್ಲಿ ಸಣ್ಣ ಕಾಲು ಸಂಕವನ್ನು ದಾಟುವ ಸಂದರ್ಭ ಈ ಅವಘಡ ನಡೆದಿದೆ. ಸಂಕ ಏಕಾಏಕಿ ಮುರಿದುಬಿದ್ದ ಪರಿಣಾಮ ಭಂಡಾರ ಹೊತ್ತ ಪಲ್ಲಕ್ಕಿ ಸಮೇತ ಭಕ್ತರು ಕೆಳಗೆ ಬಿದ್ದಿದ್ದಾರೆ.

ಸಂಕದ ಭಾರೀ ಗಾತ್ರದ ಬೀಮ್‌ ಪಲ್ಲಕ್ಕಿ ಹೊತ್ತವರ ಮೇಲೆಯೇ ಬಿದ್ದ ಪರಿಣಾಮ ಗಾಯದ ತೀವ್ರತೆ ಹೆಚ್ಚಿದೆ ಎಂದು ವರದಿಯಾಗಿದೆ. ಪಲ್ಕಕ್ಕಿಯಲ್ಲಿದ್ದ ದೈವದ ಮೊಗಮೂರ್ತಿಗಳು ಹಾಗೂ ಪವಿತ್ರ ಧಾರ್ಮಿಕ ಪರಿಕರಗಳಿಗೂ ಹಾನಿಯಾಗಿದೆ ಎಂದು ವರದಿಯಾಗಿದೆ.

ಘಟನೆಯ ಆತಂಕಕಾರಿ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ಘಟನೆಯಿಂದ ಭಕ್ತ ಸಮೂಹದಲ್ಲಿ ಆತಂಕ ಮನೆ ಮಾಡಿದೆ. ದೈವದ ಕಾರ್ಯದ ಸಂದರ್ಭದಲ್ಲಿ ಈ ಅನಿರೀಕ್ಷಿತ ಅವಘಡ ನಡೆದಿದ್ದು, ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣಗೊಂಡಿತ್ತು.

banner

You may also like