ರಾಜ್ಯದ ಗಮನ ಸೆಳೆದಿದ್ದ ಪೂಜಾ ಆಚಾರ್ಯ ಹಾಗೂ ಕೃಷ್ಣ ಜೆ. ರಾವ್ ನಡುವಿನ ವಿವಾದಿತ ಪ್ರಕರಣಕ್ಕೆ ಇದೀಗ ಸಂಧಾನದ ಮೂಲಕ ಸುಖಾಂತ್ಯ ಕಂಡುಕೊಳ್ಳುವ ಮಹತ್ವದ ಪ್ರಯತ್ನ ಹಾಗೂ ಲಕ್ಷಣಗಳು ಕಂಡುಬಂದಿದೆ.


ತಮ್ಮ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣದ ತನಿಖೆಗೆ ತಡೆ ಕೋರಿ ಆರೋಪಿ ಕೃಷ್ಣ ಜೆ. ರಾವ್ ಸಲ್ಲಿಸಿರುವ ರಿಟ್ ಅರ್ಜಿಯು ಹೈಕೋರ್ಟ್ನ ಮಾನ್ಯ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತ್ತು. ಈ ವೇಳೆ ಕೃಷ್ಣ ರಾವ್ ಪರ ಹಾಜರಾಗಿದ್ದ ಹಿರಿಯ ವಕೀಲ ಪಿ.ಪಿ. ಹೆಗ್ಡೆ ಅವರು, “ಪ್ರಕರಣವನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಕಕ್ಷಿದಾರರು ಸಿದ್ಧರಿದ್ದು, ಈ ಪ್ರಸ್ತಾಪವನ್ನು ಪರಿಗಣಿಸಬೇಕು” ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು. ಆರೋಪಿ ಪರ ವಕೀಲರ ಪ್ರಸ್ತಾಪವನ್ನು ಮಾನ್ಯ ಪೀಠವು ಪರಿಗಣಿಸಿದೆ
ಜೂನ್ 19ರಂದು ಕರ್ನಾಟಕ ಹೈಕೋರ್ಟ್ನಲ್ಲಿ ನಡೆಯಲಿರುವ ಮಧ್ಯಸ್ಥಿಕೆ (Mediation) ಸಭೆಯ ಮೂಲಕ ಈ ಜಟಾಪಟಿಗೆ ಶಾಶ್ವತ ಪರಿಹಾರ ಸಿಗುವ ವಿಶ್ವಾಸವಿದ್ದು, ಅಂದೇ ಮಗುವಿನ ನಾಮಕರಣವೂ ನಡೆಯುವ ಸಾಧ್ಯತೆ ಇದೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕೆ.ಪಿ. ನಂಜುಂಡಿ ತಿಳಿಸಿದ್ದಾರೆ.
ಜೂನ್ 19ರಂದು ಹಿರಿಯ ವಕೀಲೆ ಸುಶೀಲ ಅವರ ನೇತೃತ್ವದಲ್ಲಿ ಹೈಕೋರ್ಟ್ ಉಸ್ತುವಾರಿಯಲ್ಲಿ ಮಹತ್ವದ ಮಧ್ಯಸ್ಥಿಕೆ ಸಭೆ ನಡೆಯಲಿದ್ದು, ಜೂನ್ 30ರಂದು ಮುಂದಿನ ನ್ಯಾಯಾಲಯದ ವಿಚಾರಣೆ ನಿಗದಿಯಾಗಿದೆ. ಪೂಜಾ ಆಚಾರ್ಯ ಅವರಿಗೆ ನ್ಯಾಯ ದೊರಕಬೇಕು ಹಾಗೂ ಅವರ ಕುಟುಂಬ ಜೀವನ ಸುಗಮವಾಗಬೇಕು ಎಂಬುದು ನಮ್ಮ ಸಂಘಟನೆಯ ಏಕೈಕ ನಿಲುವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

