ಮಂಗಳೂರು: ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಅವರು ಉಡುಪಿ ಜಿಲ್ಲೆಯ ಪ್ರಸಿದ್ದ ಧಾರ್ಮಿಕ ಕ್ಷೇತ್ರವಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ದೇವಸ್ಥಾನಕ್ಕೆ ಇಂದು ಮಂಗಳೂರಿಗೆ ಆಗಮಿಸಿದ್ದು, ಸಚಿವ ಯು.ಟಿ. ಖಾದರ್ ಅವರು ಪ್ರೀತಿಯಿಂದ ಬರಮಾಡಿಕೊಂಡರು. ರಾಜ್ಯ ಸರ್ಕಾರದ ವತಿಯಿಂದ ಅವರಿಗೆ ಆತ್ಮೀಯ ಸ್ವಾಗತ ಕೋರಲಾಯಿತು.


ಇಂದು ಮಧ್ಯಾಹ್ನ 3 ಗಂಟೆಗೆ ಕೊಲ್ಲೂರು ದೇವಸ್ಥಾನದಲ್ಲಿ ನಡೆಯಲಿರುವ ವಿಶೇಷ ಪೂಜೆಯಲ್ಲಿ ಅವರು ಸಿಎಂ ವಿಜಯ್ ಭಾಗವಹಿಸಲಿದ್ದಾರೆ.
ದೇವಳದ ಆಡಳಿತ ಮಂಡಳಿಯು ಅರ್ಚಕ ವೃಂದ ಹಾಗೂ ಸಿಬ್ಬಂದಿ ವರ್ಗಕ್ಕೆ ಸೂಕ್ತ ಆದೇಶವನ್ನೂ ನೀಡಿದೆ.
ದೇವಸ್ಥಾನಕ್ಕೆ ವಿಜಯ್ ಅವರು ಭೇಟಿ ನೀಡುತ್ತಿರುವ ಶುಕ್ರವಾರದ ದಿನ ಸಂಜೆ ಎಂದಿನಂತೆ ಪ್ರದೋಷ ಕಾಲದ ಉತ್ಸವ ನಡೆಯಲಿದೆ. ಇದು ಪ್ರತಿ ಶುಕ್ರವಾರದಂದು ದೇವಿಗೆ ನಡೆಯುವ ಸಾಮಾನ್ಯ ಪೂಜಾ ಪ್ರಕ್ರಿಯೆಯಾಗಿದ್ದು, ಸಿಎಂ ಬರುತ್ತಾರೆ ಎಂಬ ಕಾರಣಕ್ಕೆ ವಿಶೇಷವಾಗಿ ಹಮ್ಮಿಕೊಂಡಿದ್ದಲ್ಲ ಎಂದು ಅರ್ಚಕರು ತಿಳಿಸಿದ್ದಾರೆ. ಕೊಲ್ಲೂರು ಮೂಕಾಂಬಿಕಾ ಸನ್ನಿಧಿಯಲ್ಲಿ ಎಷ್ಟೇ ದೊಡ್ಡ ಪ್ರಭಾವಿ ವ್ಯಕ್ತಿಗಳು ಬಂದರೂ ಅವರಿಗಾಗಿ ಪದೇ ಪದೇ ಮಂಗಳಾರತಿ ಮಾಡುವ ಅಥವಾ ವಿಶೇಷ ಪೂಜೆಗಳನ್ನು ನಡೆಸುವ ಪರಿಪಾಠವಿಲ್ಲ. ವಿಜಯ್ ಅವರು ಇತರ ಸಾಮಾನ್ಯ ಭಕ್ತರಂತೆಯೇ ಸರದಿಯಲ್ಲಿ ಬಂದು ದೇವಿಯ ದರ್ಶನ ಪಡೆದು, ದೇವಸ್ಥಾನದ ಆವರಣವನ್ನು ವೀಕ್ಷಿಸಿ ತೆರಳಲಿದ್ದಾರೆ. ಒಂದು ವೇಳೆ ಅವರು ದೇವಸ್ಥಾನಕ್ಕೆ ಬರುವ ಸಮಯಕ್ಕೆ ಸರಿಯಾಗಿ ಮಹಾಮಂಗಳಾರತಿ ನಡೆಯುತ್ತಿದ್ದರೆ, ಅದನ್ನು ನೋಡುವ ಅವಕಾಶ ಅವರಿಗೆ ಸಿಗಲಿದೆ ಎಂದು ಅರ್ಚಕ ನಿತ್ಯಾನಂದ ಅಡಿಗ ಹೇಳಿದ್ದಾರೆ.

