ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ನಿನ್ನೆ ಬಿಜೆಪಿಗೆ ಗುಡ್ಬೈ ಹೇಳಿ, ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಿದ್ದರು. ಆದರೆ ಈ ವಿಚಾರಕ್ಕೆ ಇದೀಗ ಬಿಜೆಪಿ ಚಾಣಕ್ಯ ಅಮಿತ್ ಶಾ ಎಂಟ್ರಿ ಕೊಟ್ಟಿದ್ದು ಅಣ್ಣಾಮಲೈ ಅವರು ರಾಜೀನಾಮೆಯನ್ನು ವಾಪಸ್ ಪಡೆದಿದ್ದಾರೆ ಎನ್ನಲಾಗಿದೆ.


ಅಣ್ಣಾಮಲೈ ಅವರು ಬಿಜೆಪಿಯಿಂದ ಹೊರಬಂದು ತಮಿಳುನಾಡಿನಲ್ಲಿ ಸ್ವತಂತ್ರವಾಗಿ ‘ಮಕ್ಕಳ್ ಶಕ್ತಿ ಇಯಕ್ಕಂ’ (ಜನಶಕ್ತಿ ಆಂದೋಲನ) ಎಂಬ ಹೊಸ ಜನಪರ ಚಳವಳಿಯನ್ನು ಅಥವಾ ಸಂಘಟನೆಯನ್ನು ಆರಂಭಿಸಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿತ್ತು. ಆದ್ರೆ, ನಿತಿನ್ ಭೇಟಿಯ ನಂತರ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ (Amit Shah) ಅವರನ್ನ ಭೇಟಿಯಾದ ಅಣ್ಣಾಮಲೈ ತಮ್ಮ ರಾಜೀನಾಮೆಯ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.
ಯಸ್, ಇಬ್ಬರು ನಾಯಕರ ನಡುವೆ ನಡೆದ ಗಹನವಾದ ಚರ್ಚೆಯ ನಂತರ ಕಥೆ ಸಂಪೂರ್ಣ ಉಲ್ಟಾ ಆಗಿದೆ. ಅಣ್ಣಾಮಲೈ ಅವರ ಅಸಮಾಧಾನವನ್ನು ಶಮನ ಮಾಡುವಲ್ಲಿ ಅಮಿತ್ ಶಾ ಯಶಸ್ವಿಯಾಗಿದ್ದು, ರಾಜೀನಾಮೆ ವಾಪಸ್ ಪಡೆಯುವಂತೆ ಮಾಡುವಲ್ಲಿ ವರಿಷ್ಠರು ಗೆದ್ದಿದ್ದಾರೆ
ಇನ್ನೂ ಅಮಿತ್ ಶಾ ಹಾಗೂ ಅಣ್ಣಾಮಲೈ ಭೇಟಿಯಾಗುತ್ತಿದ್ದಂತೆ, ಕೇಂದ್ರ ಬಿಜೆಪಿ ಘಟಕವು ತಮಿಳುನಾಡಿನ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್ಗೆ ತುರ್ತು ಸಮನ್ಸ್ ಜಾರಿ ಮಾಡಿದೆ ಎಂದು ವರದಿಯಾಗಿದೆ. ಅದರಂತೆ, ಸಮನ್ಸ್ನಲ್ಲಿ ನೇರವಾಗಿ ದೆಹಲಿಗೆ ಬಂದು ಅಧ್ಯಕ್ಷ ನಿತಿನ್ ನಬಿನ್ ಹಾಗೂ ಅಮಿತ್ ಶಾ ಅವರನ್ನು ಭೇಟಿ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ವರದಿಯಾಗಿದೆ. ಈ ಮೂಲಕ ದಕ್ಷಿಣ ರಾಜ್ಯದಲ್ಲಿ ಪಕ್ಷದ ರಚನೆ, ಒಳಗಿನ ಬಣ ರಾಜಕೀಯ ಎಲ್ಲವೂ ಬದಲಾವಣೆಯ ಸನ್ನಿಹಿತವಾದಂತೆ ಕಾಣುತ್ತಿದೆ. ಅದರಲ್ಲೂ, ಈ ಹಠಾತ್ ಸಭೆ ದ್ರಾವಿಡ ನಾಡಿನ ಕಮಲದ ರಣತಂತ್ರವನ್ನೇ ಬದಲಾಯಿಸಬಹುದಾ ಅನ್ನೋ ಚರ್ಚೆ ಶುರುವಾಗಿದೆ.

