ಕೊಡಗಿನ ಪ್ರಸಿದ್ಧ ಪ್ರವಾಸಿ ತಾಣವಾದ ದುಬಾರೆ ಸಾಕಾನೆ ಶಿಬಿರದಲ್ಲಿ ಎರಡು ಸಾಕಾಆನೆಗಳ ನಡುವೆ ನಡೆದ ದಿಢೀರ್ ಕಾಳಗ ಏರ್ಪಟ್ಟಿದ್ದು, ಇವುಗಳ ನಡುವೆ ಸಿಲುಕಿ ಮಹಿಳೆಯೊಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ.


ತಮಿಳುನಾಡಿನ ಚೆನ್ನೈ ಮೂಲದ ಜಿನ್ನು (33) ಎಂಬುವವರೇ ಆನೆಗಳ ದಾಳಿಗೆ ತುತ್ತಾಗಿ ಸ್ಥಳದಲ್ಲೇ ಕೊನೆಯುಸಿರೆಳೆದ ದುರ್ದೈವಿ. ಆನೆಗಳನ್ನು ಸ್ನಾನ ಮಾಡಿಸುವ ಸಂದರ್ಭದಲ್ಲಿ ಎರಡು ಆನೆಗಳ ನಡುವೆ ಇದ್ದಕ್ಕಿದ್ದಂತೆ ಕಾಳಗ ಏರ್ಪಟ್ಟು ಈ ದುರ್ಘಟನೆ ನಡೆದಿದೆ.
ಇಂದು (ಮೇ 18) ಮಧ್ಯಾಹ್ನ ಸುಮಾರು 12 ಗಂಟೆಯ ವೇಳೆಗೆ ಶಿಬಿರದಲ್ಲಿ ಎಂದಿನಂತೆ ಆನೆಗಳಿಗೆ ನದಿಯಲ್ಲಿ ಸ್ನಾನ ಮಾಡಿಸುತ್ತಿದ್ದರು. ಈ ವೇಳೆ ಮಾವುತರು ‘ಮಾರ್ತಾಂಡ’ ಮತ್ತು ‘ಕಂಜನ್’ ಎಂಬ ಎರಡು ಸಾಕಾನೆಗಳನ್ನು ನೀರಿಗೆ ಕರೆತಂದಿದ್ದರು. ಮಾವುತ ಗೌಸ್ ಅವರು ಮಾರ್ತಾಂಡ ಆನೆಯನ್ನು ನೀರಿಗೆ ಇಳಿಸುವ ಧಾವಂತದಲ್ಲಿ, ಆನೆ ಸ್ವಲ್ಪ ವೇಗವಾಗಿ ಪಕ್ಕದಲ್ಲೇ ಇದ್ದ ಕಂಜನ್ ಆನೆಗೆ ತಾಗಿದೆ.
ಮಾರ್ತಾಂಡ ಆನೆ ತನ್ನ ಮೈಗೆ ತಾಗುತ್ತಿದ್ದಂತೆ ಕೆರಳಿದ ಕಂಜನ್ ಆನೆ ತೀವ್ರ ಆಕ್ರೋಶಗೊಂಡು ಎದುರಾಳಿ ಆನೆಯ ಮೇಲೆ ಮುಗಿಬಿದ್ದಿದೆ. ನದಿಯ ದಡದಲ್ಲೇ ಎರಡು ದೈತ್ಯ ಆನೆಗಳು ಪರಸ್ಪರ ಕಾದಾಡಲು ಆರಂಭಿಸುತ್ತಿದ್ದಂತೆ ಅಲ್ಲಿದ್ದ ಪ್ರವಾಸಿಗರು ಪ್ರಾಣಭಯದಿಂದ ದಿಕ್ಕಾಪಾಲಾಗಿ ಓಡಿದ್ದಾರೆ. ಈ ಗದ್ದಲದ ನಡುವೆ ಸಿಲುಕಿದ ಪ್ರವಾಸಿ ಮಹಿಳೆ ಜಿನ್ನು ಅವರಿಗೆ ಆನೆಗಳು ಬಲವಾಗಿ ಡಿಕ್ಕಿ ಹೊಡೆದಿದ್ದು, ಕಾಲಡಿ ಸಿಲುಕಿ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
https://x.com/i/status/2056298810499125295

