

ಆರ್ಥಿಕ ದಿವಾಳಿಯಾಗಿರುವ ಶ್ರೀಲಂಕಾದಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಹದಗೆಡುತ್ತಿದೆ. ಲಂಕಾದಲ್ಲಿ ಪೆಟ್ರೋಲ್, ಡೀಸೆಲ್ ಅಭಾವ ಉಂಟಾಗಿದೆ. ಈ ವೇಳೆ ಜನಸಾಮಾನ್ಯರಿಗೆ ಚಹಾ ಮತ್ತು ಬನ್ ವಿತರಿಸಿ ಮಾಜಿ ಕ್ರಿಕೆಟಿಗ ರೋಶನ್ ಮಹಾನಾಮ ನೆರವಾಗಿದ್ದಾರೆ.
ಈ ಬಗ್ಗೆ ಟ್ವಿಟ್ಟರ್ ಮೂಲಕ ತಿಳಿಸಿರುವ ರೋಶನ್ ಮಹಾನಾಮ, ನಾವು ಇಂದು ಸಂಜೆ ಸ್ವಯಂ ಸೇವಕ ತಂಡದೊಂದಿಗೆ ವಿಜೆರಾಮ ಮಾವತಾ ಸುತ್ತಲಿನ ಪೆಟ್ರೋಲ್ ಬಂಕ್ನಲ್ಲಿ ಪೆಟ್ರೋಲ್ಗಾಗಿ ಸರದಿ ಸಾಲಿನಲ್ಲಿ ನಿಂತಿದ್ದ ಜನರಿಗೆ ಟೀ ಮತ್ತು ಬನ್ಗಳನ್ನು ವಿತರಿಸಿದ್ದೇವೆ. ದಿನದಿಂದ ದಿನಕ್ಕೆ ಇಲ್ಲಿನ ಪರಿಸ್ಥಿತಿ ಹದಗೆಡುತ್ತಿದೆ. ಸರತಿ ಸಾಲುಗಳು ದಿನದಿಂದ ದಿನಕ್ಕೆ ಉದ್ದವಾಗುತ್ತಿದ್ದು,
ಸರತಿ ಸಾಲಿನಲ್ಲಿ ನಿಲ್ಲುವ ಜನರಿಗೆ ಆರೋಗ್ಯ ಸಮಸ್ಯೆ ಕೂಡ ಇದೆ. ಹಾಗಾಗಿ ಜನರಿಗೆ ನೆವಾಗಲು ಮುಂದಾಗುವವರು ದ್ರವ ರೂಪದ ಆಹಾರವನ್ನು ಹೆಚ್ಚಾಗಿ ನೀಡಿ ಸಹಕರಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.
ದ್ವೀಪ ರಾಷ್ಟ್ರ ತನ್ನ ಸ್ವಾತಂತ್ರ್ಯದ ಬಳಿಕ ಎಂದೂ ಸಂಭವಿಸದ ಅತ್ಯಂತ ಭೀಕರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಅಲ್ಲಿನ 2 ಕೋಟಿಗೂ ಅಧಿಕ ಜನರು ಆಹಾರ, ಇಂಧನ ಹಾಗೂ ಔಷಧಕ್ಕಾಗಿ ತೀವ್ರವಾದ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.













