ರಾಜ್ಯ ರಾಜಧಾನಿ ಬೆಂಗಳೂರಿನ ರಸ್ತೆಗಳನ್ನು ಎಷ್ಟು ಬಾರಿ ದುರಸ್ತಿಗೊಳಿಸಿದರೂ ಗುಂಡಿಗಳು ಮಾತ್ರ ಕಡಿಮೆಯಾಗಿಲ್ಲ. ಇವುಗಳಿಂದ ಅನೇಕ ಸಂದರ್ಭದಲ್ಲಿ ಅಪಘಾತಗಳು ಸಂಭವಿಸಿ ತುಂಬಾ ಜನ ಪ್ರಾಣ ಕಳೆದುಕೊಂಡಿದ್ದಾರೆ. ಆದರೂ, ಬೆಂಗಳೂರಿನಲ್ಲಿ ಪೂರ್ಣ ಪ್ರಮಾಣದಲ್ಲಿ ಗುಂಡಿಗಳನ್ನು ಮುಚ್ಚಲು ಸಾಧ್ಯವಾಗುತ್ತಿಲ್ಲ. ಈ ರಸ್ತೆ ಗುಂಡಿ ಸಮಸ್ಯೆಗೆ ಬೇಸತ್ತ ಉದ್ಯಮಿಯೊಬ್ಬರು ಭಿನ್ನ ರೀತಿಯಲ್ಲಿ ರಸ್ತೆ ಗುಂಡಿ ಮುಚ್ಚುವ ಅಭಿಯಾನವನ್ನು ಕೈಗೊಂಡಿದ್ದಾರೆ. ಅದೇನೆಂದರೆ ತನ್ನ ಪೋರ್ಷೆ ತಂದು ಅದರ ಮೇಲೆ ಸಿಮೆಂಟ್ ಕಲಸಿ ರಸ್ತೆಗುಂಡಿಯನ್ನು ಮುಚ್ಚಿರುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


ಹೌದು, ಬೆಂಗಳೂರು ಮೂಲದ ಉದ್ಯಮಿ ಅಖಿಲ್ ಹೇಮಾದ್ರಿ ಎಂಬುವವರು ಕೋಟ್ಯಂತರ ರೂಪಾಯಿ ಬೆಲೆಯ ಪೋರ್ಷೆ ಕಾರಿನ ಬಾನೆಟ್ ಮೇಲೆ ಸಿಮೆಂಟ್ ಕಲಸಿ ರಸ್ತೆ ಗುಂಡಿಯನ್ನು ಮುಚ್ಚಿದ್ದಾರೆ. ಸದ್ಯ, ಈ ವಿಡಿಯೊಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
“ಭಾರತದಂತಹ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶದಲ್ಲಿ, ಸಾರ್ವಜನಿಕ ಸ್ಥಳಗಳ ನಿರ್ವಹಣೆಯಲ್ಲಿ ನಾಗರಿಕರೂ ಕೈಜೋಡಿಸಬೇಕು. ಎಲ್ಲವನ್ನೂ ಸರ್ಕಾರವೇ ಮಾಡುತ್ತದೆ ಎಂದು ಕಾಯಲು ಸಾಧ್ಯವಿಲ್ಲ” ಎಂದು ಹೇಳುವ ಮೂಲಕ ಅಖಿಲ್ ಸಾರ್ವಜನಿಕರಿಗೆ ಸಂದೇಶ ರವಾನಿಸಿದ್ದಾರೆ.
ಈ ವಿಡಿಯೋ ಕಂಡು ನೆಟ್ಟಿಗರು ಒಂದೆಡೆ ಮೆಚ್ಚುಗೆ ವ್ಯಕ್ತಪಡಿಸಿದರೆ ಇನ್ನೊಂದೆಡೆ ಟೀಕೆ, ಸಂಶಯ ಕೂಡ ಕೇಳಿಬಂದಿದೆ. ಕೆಲವು ಬಳಕೆದಾರರು ಅಖಿಲ್ ಅವರ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ದಿನನಿತ್ಯದ ರಸ್ತೆ ಸಮಸ್ಯೆಯತ್ತ ಗಮನ ಸೆಳೆಯಲು ಮತ್ತು ನಾಗರಿಕ ಜವಾಬ್ದಾರಿಯನ್ನು ನೆನಪಿಸಲು ಇದು ಉತ್ತಮ ಮಾರ್ಗ ಎಂದು ಅವರು ಹೇಳಿದ್ದಾರೆ. ಇನ್ನು ಕೆಲವರು ಇದನ್ನು ತೀವ್ರವಾಗಿ ಟೀಕಿಸಿದ್ದಾರೆ. ಇದು ಕೇವಲ ಪ್ರಚಾರಕ್ಕಾಗಿ ಮಾಡಿದ ಕೆಲಸ ಎಂದು ಅವರು ಆರೋಪಿಸಿದ್ದಾರೆ.
ಅಲ್ಲದೆ, ಪೋರ್ಷೆ ಕಾರಿನ ಬಾನೆಟ್ ಮೇಲೆ ರಕ್ಷಣಾತ್ಮಕ ಪದರವೊಂದನ್ನು ಹಾಕಿ ನಂತರ ಸಿಮೆಂಟ್ ಕಲಸಿರುವುದು, ಇದು ವ್ಯವಸ್ಥಿತವಾಗಿ ಚಿತ್ರೀಕರಿಸಿದ ವಿಡಿಯೋ ಎಂಬ ಟೀಕೆಗೆ ಗುರಿಯಾಗಿದೆ. ಇದು ಪ್ರೊಟೆಕ್ಟಿವ್ ಲೇಯರ್ ಜಾಹೀರಾತಿಗಾಗಿ ವಿಡಿಯೋ ಎಂದು ಹಲವರು ಕಮೆಂಟ್ ಮಾಡಿದ್ದಾರೆ.

