Tweet War: 2026ರ ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಸಿ ಫಲಿತಾಂಶ ನಿನ್ನೆ ಪ್ರಕಟಗೊಂಡಿದೆ. ಅನೇಕ ವಿದ್ಯಾರ್ಥಿಗಳು ಅತ್ಯಧಿಕ ಅಂಕಗಳನ್ನು ಗಳಿಸಿ, ಉತ್ತಮ ಸಾಧನೆಗೈದು ಸಂಭ್ರಮ ಪಡುತ್ತಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ದಕ್ಷಿಣ ಕನ್ನಡ ಜಿಲ್ಲೆ, ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ಆದರೆ ಬೇಸರದ ಸಂಗತಿ ಎಂದರೆ ಈ ವರ್ಷವೂ ಕೂಡ ಕಲಬುರ್ಗಿ ಜಿಲ್ಲೆ ಫಲಿತಾಂಶದಲ್ಲಿ ಕೊನೆಯ ಸ್ಥಾನದಲ್ಲಿಯೇ ಉಳಿದಿದೆ. ಇದರ ಬೆನ್ನಲ್ಲೇ ಈಗ ಈ ವಿಚಾರ ರಾಜಕೀಯ ಸ್ವರೂಪ ಕಾಪಾಡಿಕೊಂಡಿದ್ದು, ಸಚಿವ ಪ್ರಿಯಾಂಕ ಖರ್ಗೆ ಹಾಗೂ ಬಿಜೆಪಿಗಳ ನಡುವಿನ ಟ್ವೀಟ್ ವಾರ್ ಗೆ ಕಾರಣವಾಗಿದೆ.


ಕೆಲವು ದಿನಗಳ ಹಿಂದೆ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ದಕ್ಷಿಣ ಕನ್ನಡದಲ್ಲಿ ಕೋಮು ಉದ್ವಿಗ್ನತೆಯಿಂದ ಬಂಡವಾಳ ಹೂಡಿಕೆ ಮೇಲೆ ಪ್ರಭಾವ ಬೀರಿದೆ ಎಂದು ಹೇಳಿಕೆ ನೀಡಿದ್ದರು. ಆ ಸಮಯದಲ್ಲಿ ಅವರು ಬಿಜೆಪಿ ನಾಯಕರಿಂದ ಪ್ರಿಯಾಂಕ್ ಖರ್ಗೆ ತೀವ್ರ ಟೀಕೆಗೆ ಗುರಿಯಾಗಿದ್ದು, ಮಂಗಳೂರು ಉತ್ತರ ನಗರದ ಶಾಸಕ ವೈ ಭರತ್ ಶೆಟ್ಟಿ, ಪ್ರಿಯಾಂಕ್ ಅವರನ್ನು ಟೀಕಿಸಿ ಅವರ ಆದ್ಯತೆಗಳನ್ನು ಪ್ರಶ್ನಿಸಿದರು. ಅಲ್ಲದೆ ಎಸ್ಎಸ್ಎಲ್ಸಿ ಫಲಿತಾಂಶ ಉಲ್ಲೇಖಿಸಿ, ದಕ್ಷಿಣ ಕನ್ನಡದ ಸ್ಥಿರ ಶೈಕ್ಷಣಿಕ ಸಾಧನೆ ಕಲಬುರಗಿಯ ಫಲಿತಾಂಶಗಳಿಗೆ ವ್ಯತಿರಿಕ್ತವಾಗಿದೆ. ಸಚಿವರು ತಮ್ಮ ಸ್ವಂತ ಜಿಲ್ಲೆಯಲ್ಲಿ ಶಿಕ್ಷಣ ಗುಣಮಟ್ಟವನ್ನು ಸುಧಾರಿಸುವತ್ತ ಗಮನಹರಿಸಬೇಕು. ದಕ್ಷಿಣ ಕನ್ನಡ ಶಿಕ್ಷಣ, ಆರೋಗ್ಯ ಮತ್ತು ಮೂಲಸೌಕರ್ಯದಲ್ಲಿ ಉತ್ತಮ ಸಾಧನೆ ಮಾಡಿದೆ. ಸಚಿವರು ನಮ್ಮ ಜಿಲ್ಲೆಯನ್ನು ಗುರಿಯಾಗಿಸಿಕೊಳ್ಳುವ ಬದಲು ತಮ್ಮ ಜಿಲ್ಲೆಯನ್ನು ಉನ್ನತೀಕರಿಸುವತ್ತ ಗಮನಹರಿಸಬೇಕು ಎಂದು ಭರತ್ ಶೆಟ್ಟಿ ಒತ್ತಾಯಿಸಿದ್ದರು.
ಪ್ರಿಯಾಂಕ್ ಖರ್ಗೆ ಟ್ವೀಟ್ :
ಬಿಜೆಪಿ ನಾಯಕರ ಕಟುವಾದ ಟೀಕೆಗೆ ತಮ್ಮದೇ ಶೈಲಿಯಲ್ಲಿ ಉತ್ತರಿಸಿರುವ ಪ್ರಿಯಾಂಕ ಖರ್ಗೆಯವರು, ಮತ್ತೆ ಹರಿದ ಬಟ್ಟೆಯಲ್ಲಿ ಮುಖ ಮುಚ್ಚಿಕೊಳ್ಳುವ ಕೆಲಸ ಮಾಡಿದ್ದಾರೆ. ಅಂದರೆ ತಮ್ಮ ಕೆಲಸ ಕಾರ್ಯಗಳ ಕುರಿತು ಗಮನಹರಿಸುವುದನ್ನು ಬಿಟ್ಟು, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗುವುದನ್ನು ಮರೆತು ಟ್ವೀಟ್ ವಾರ್ ಆರಂಭಿಸಿದ್ದಾರೆ.
“ಕಲಬುರಗಿಯ ವಿದ್ಯಾರ್ಥಿಗಳನ್ನು ಅವಮಾನಿಸುತ್ತಿರುವ ಬಿಜೆಪಿ, ಅವರ ಆತ್ಮಸ್ಥೈರ್ಯವನ್ನು, ಆತ್ಮವಿಶ್ವಾಸವನ್ನು ಅಡಗಿಸುವ ಪ್ರಯತ್ನ ಮಾಡುತ್ತಿದೆ. ನಿಮಗೆ ಸಮಸ್ಯೆ ಇದ್ದರೆ ನನ್ನನ್ನು ನಿಂದಿಸಿ, ಕಲಬುರಗಿಯ ಮಕ್ಕಳನ್ನು ಅಪಹಾಸ್ಯ ಮಾಡುತ್ತಿರುವುದೇಕೆ? ಜಿಲ್ಲೆಯ ಶೇಕಡಾವಾರು ಫಲಿತಾಂಶ 85% ಇರಬಹುದು, ಕಳೆದ ಶೈಕ್ಷಣಿಕ ವರ್ಷಕ್ಕಿಂತ ಈ ಬಾರಿ ಉತ್ತಮ ಫಲಿತಾಂಶ ಬಂದಿದೆ, ರಾಜ್ಯದಲ್ಲೂ ಮತ್ತು ಕಲಬುರಗಿ ಜಿಲ್ಲೆಯಲ್ಲೂ… ಶೈಕ್ಷಣಿಕ ಗುಣಮಟ್ಟದ ಸುಧಾರಣೆ ಮಾಡಿಕೊಳ್ಳುವ ಶಕ್ತಿ ನಮ್ಮ ಜಿಲ್ಲೆಯ ಮಕ್ಕಳಲ್ಲಿದೆ, ಮತ್ತು ಅದು ಸಾಧ್ಯವಾಗುತ್ತದೆ ಕೂಡ. ಆದರೆ ಪ್ರತಿ ಬಾರಿಯೂ ಕಲಬುರಗಿ ಜಿಲ್ಲೆಯ ಮಕ್ಕಳನ್ನು ಅವಮಾನಿಸುತ್ತಿರುವ ಬಿಜೆಪಿ ರಾಜಕೀಯ ದಿವಾಳಿತನದೊಂದಿಗೆ ನೈತಿಕ ಪ್ರಜ್ಞೆಯೂ ದಿವಾಳಿಯಾಗಿರುವುದನ್ನು ನಿರೂಪಿಸುತ್ತಿದೆ. ಕಲಬುರಗಿ ಜಿಲ್ಲೆಯಲ್ಲಿನ ಬಿಜೆಪಿ ನಾಯಕರ ಮತ್ತು ಕಾರ್ಯಕರ್ತರ ಮಕ್ಕಳಿಗೂ “ದಡ್ಡರು” ಎಂಬ ಹಣೆಪಟ್ಟಿಯನ್ನು ಬಿಜೆಪಿ ಕಟ್ಟುತ್ತಿದೆಯೇ?
“ಜಿಲ್ಲೆಯ ಮಕ್ಕಳ ಮನಸಿನ ಮೇಲೆ ದುಷ್ಪರಿಣಾಮ ಬೀರುವಂತಹ ಮಾತುಗಳನ್ನಾಡುತ್ತಿರುವ ಬಿಜೆಪಿಗೆ ಕನಿಷ್ಠ ಸಾಮಾನ್ಯ ಪ್ರಜ್ಞೆ ಇಲ್ಲದಿರುವುದು ನಾಡಿನ ದುರಂತ. ಕಲಬುರಗಿ ಜಿಲ್ಲೆಯ ಮಕ್ಕಳ ಶ್ರಮವನ್ನು, ಅವರ ಬೌದ್ಧಿಕ ಸಾಮರ್ಥ್ಯವನ್ನು ಅವಮಾನಿಸುವ, ಅವರ ಆತ್ಮವಿಶ್ವಾಸವನ್ನು ಕುಗ್ಗಿಸುವ ಕೆಲಸವನ್ನು ಬಿಜೆಪಿ ನಿಲ್ಲಿಸಬೇಕು” ಎಂದು ಅವರು ಹೇಳಿದ್ದಾರೆ.
BJP ಟ್ವೀಟ್!!
ಈ ಸಂಬಂಧ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ನಿಮ್ಮ ವೈಫಲ್ಯ ಮುಚ್ಚಿಕೊಳ್ಳಲು ಮುಗ್ದ ಮಕ್ಕಳ ಹಿಂದೆ ಅಡಗಿ ಟ್ವೀಟ್ ಮಾಡುವುದನ್ನು ಬಿಡಿ ಅದು ಹೇಡಿತನ, ಕಲಬುರಗಿಯ ಮಕ್ಕಳು ಪ್ರತಿಭಾವಂತರು, ನಾವು ಪ್ರಶ್ನಿಸಿದ್ದು ಮಕ್ಕಳನ್ನಲ್ಲ, ಬದಲಿಗೆ ಅವರ ಕಲಿಕೆಗೆ ಸೂಕ್ತ ವಾತಾವರಣವನ್ನು ನಿರ್ಮಿಸಿಕೊಡದ ನಿಮ್ಮ ಕುಟುಂಬದ ದಶಕಗಳ ಅಸಮರ್ಥ ಆಡಳಿತವನ್ನು ಎಂದಿದೆ.
ಅಲ್ಲದೆ ಕುಟುಂಬ ಕಲಬುರ್ಗಿಯನ್ನು ಅಧಿಕ ಬಾರಿ ಪ್ರತಿನಿಧಿಸಿದ್ದೀರಿ ಆದರೆ ಅಭಿವೃದ್ಧಿ ಮಾತ್ರ ಶೂನ್ಯ! ನಿಮ್ಮ ಅಪ್ಪ, ಬಾವ ಮತ್ತು ನಿಮ್ಮ ದುರಾಡಳಿತದ ಫಲ ಕೇವಲ ಶಿಕ್ಷಣದಲ್ಲಷ್ಟೇ ಅಲ್ಲ ತಲಾದಾಯ, ಅಭಿವೃದ್ಧಿ ಪ್ರತಿಯೊಂದರಲ್ಲೂ ಕಲಬುರಗಿ ಜಿಲ್ಲೆಗೆ ಕೊನೆಯ ಸ್ಥಾನ ಎಂಬ ಪಟ್ಟ ಫಿಕ್ಸ್ ಆಗಿಬಿಟ್ಟಿದೆ! ಮೊದಲು ನೀವು ಅಧಿಕಾರದಿಂದ ತೊಲಗಿದರೆ, ಅಭಿವೃದ್ಧಿ ಮತ್ತು ಶಿಕ್ಷಣದಲ್ಲಿ ಕಲಬುರಗಿಗೆ ಅಂಟಿರುವ ಆ ‘ಕೊನೆಯ ಸ್ಥಾನದ ಶಾಪ’ವಾದರೂ ವಿಮೋಚನೆ ಆಗುತ್ತದೆ ಎಂದು ಕಿಡಿ ಕಾರಿದೆ.

