ಬಂಟ್ವಾಳ: ಸ್ಕೂಟರ್ ಜಾರಿ ಬಿದ್ದು ಸವಾರರೊಬ್ಬರು ಸಾವಿಗೀಡಾದ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ರಸ್ತೆಯ ರಾಮಲ್ ಕಟ್ಟೆಯ ಬ್ರಹ್ಮರಕೂಟ್ಟು ಟೋಲ್ಗೇಟ್ ಸಮೀಪ ಗುರುವಾರ ರಾತ್ರಿ ಸಂಭವಿಸಿದೆ.


ಪಿ.ಸೋಮನಾಥ ಪ್ರಭು (65) ಮೃತಪಟ್ಟ ವ್ಯಕ್ತಿ. ಮೃತರು ಅವಿವಾಹಿತರಾಗಿದ್ದು, ಬಂಟ್ವಾಳದ ದೈವಗುಡ್ಡೆ ನಿವಾಸಿ. ಮಂಗಳೂರು ಕಡೆಯಿಂದ ಬಿಸಿರೋಡು ಕಡೆಗೆ ಅವರು ಸ್ಕೂಟರ್ನಲ್ಲಿ ಬರುವ ಸಂದರ್ಭದಲ್ಲಿ ಟೋಲ್ಗೇಟ್ ಸಮೀಪ ಜಾರಿ ಬಿದ್ದಾಗ ತಲೆಗೆ ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಅವರನ್ನು ತುಂಬೆಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಛಾಯಾಚಿತ್ರ ಗ್ರಾಹಕರಾಗಿ ಸೇವೆ ಸಲ್ಲಿಸುತ್ತಿದ್ದ ಇವರು, ಜೊತೆಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಣಿತಿ ಹೊಂದಿದ್ದರು. ಘಟನೆ ಸಂಬಂಧ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
