ಮಧ್ಯಪ್ರದೇಶದ (Madhya Pradesh) ಧಾರ್ ಜಿಲ್ಲೆಯ ವಿವಾದಿತ ಭೋಜಶಾಲಾ-ಕಮಾಲ್ ಮೌಲಾ ಮಸೀದಿ ಕಟ್ಟಡವು ಸರಸ್ವತಿ ದೇವಿಯ ದೇಗುಲ ಎಂದು ಮಧ್ಯಪ್ರದೇಶ ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಈ ತೀರ್ಪು ನೀಡಿದ ಮರುದಿನವೇ ಭೋಜಶಾಲೆಯಲ್ಲಿ ಹಿಂದೂಗಳು ಮೊದಲ ಪೂಜೆ ಸಲ್ಲಿಸಿದ್ದಾರೆ.


ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿರುವ ವಿವಾದಿತ ಭೋಜಶಾಲಾ ಕಮಲ್ ಮೌಲಾ ಮಸೀದಿ ಸಂಕೀರ್ಣವು ಮೂಲತಃ ಸರಸ್ವತಿ ದೇವಿಗೆ ಅರ್ಪಿತವಾದ ದೇವಾಲಯ ಎಂದು ಮಧ್ಯಪ್ರದೇಶ ಹೈಕೋರ್ಟ್ನ ಇಂದೋರ್ ಪೀಠವು ನಿನ್ನೆ (ಮೇ 15) ಐತಿಹಾಸಿಕ ತೀರ್ಪು ಪ್ರಕಟಿಸಿದೆ. ಕೋರ್ಟು ತೀರ್ಪು ನೀಡಿದ ಬೆನ್ನಲ್ಲೇ ಭೋಜಶಾಲೆಗೆ ಭಕ್ತರ ದಂಡು ಆಗಮಿಸಿ ಪೂಜೆ ಸಲ್ಲಿಸಿ, ಹನುಮಾನ್ ಚಾಲೀಸಾ ಪಠಿಸಿದ್ದಾರೆ. ಭೋಜ್ ಉತ್ಸವ ಸಮಿತಿಯ ಸದಸ್ಯರು ನೂರಾರು ಭಕ್ತರೊಂದಿಗೆ ವೈದಿಕ ಪದ್ಧತಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾ ಪೂಜೆ ಸಲ್ಲಿಸಿದ್ದಾರೆ.
ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದ್ದ 98 ದಿನಗಳ ಸುದೀರ್ಘ ಎಎಸ್ಐ ವೈಜ್ಞಾನಿಕ ಸಮೀಕ್ಷೆಯ ವರದಿಯನ್ನು ಆಧರಿಸಿ ಹೈಕೋರ್ಟ್ ಈ ಆದೇಶ ನೀಡಿದೆ. ಸಮೀಕ್ಷೆಯ ವೇಳೆ ಸಂಕೀರ್ಣದ ಒಳಗಡೆ ಗಣೇಶ, ವಿಷ್ಣು ಹಾಗೂ ನರಸಿಂಹ ದೇವರ ವಿಗ್ರಹಗಳು ಮತ್ತು 150ಕ್ಕೂ ಹೆಚ್ಚು ಸಂಸ್ಕೃತ ಶಾಸನಗಳು ಪತ್ತೆಯಾಗಿದ್ದವು. ಇದು 11ನೇ ಶತಮಾನದ ರಾಜ ಭೋಜನ ಕಾಲದ ವಾಗ್ದೇವಿ (ಸರಸ್ವತಿ) ದೇವಸ್ಥಾನ ಮತ್ತು ಸಂಸ್ಕೃತ ಅಧ್ಯಯನ ಕೇಂದ್ರವಾಗಿತ್ತು ಎಂಬುದನ್ನು ನ್ಯಾಯಾಲಯ ಅಧಿಕೃತವಾಗಿ ಎತ್ತಿಹಿಡಿದಿದೆ. ನ್ಯಾಯಮೂರ್ತಿಗಳಾದ ವಿಜಯ್ ಕುಮಾರ್ ಶುಕ್ಲಾ ಮತ್ತು ಅಲೋಕ್ ಅವಸ್ತಿ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಐತಿಹಾಸಿಕ ತೀರ್ಪನ್ನು ನೀಡಿದೆ. ಮೇ 12ರಂದು ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ಶುಕ್ರವಾರ ಪ್ರಕಟಿಸಲಾಗಿದೆ.
ಮುಸ್ಲಿಂ ಸಮುದಾಯದ ಪ್ರಾರ್ಥನಾ ಹಕ್ಕನ್ನು ಪರಿಗಣಿಸಿರುವ ನ್ಯಾಯಾಲಯ, ಧಾರ್ ಜಿಲ್ಲೆಯ ವ್ಯಾಪ್ತಿಯಲ್ಲೇ ಮಸೀದಿ ನಿರ್ಮಾಣಕ್ಕಾಗಿ ಸೂಕ್ತವಾದ ಪರ್ಯಾಯ ಭೂಮಿಯನ್ನು ಮಂಜೂರು ಮಾಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಇದರೊಂದಿಗೆ, ಪ್ರಸ್ತುತ ಲಂಡನ್ ಮ್ಯೂಸಿಯಂನಲ್ಲಿರುವ ಭೋಜಶಾಲೆಯ ಮೂಲ ವಾಗ್ದೇವಿ ವಿಗ್ರಹವನ್ನು ಭಾರತಕ್ಕೆ ಮರಳಿ ತಂದು ಇದೇ ಸಂಕೀರ್ಣದಲ್ಲಿ ಮರುಸ್ಥಾಪಿಸಲು ಅಗತ್ಯವಿರುವ ರಾಜತಾಂತ್ರಿಕ ಹಾಗೂ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ.
ಇದೇ ವೇಳೆ ಹೈಕೋರ್ಟ್ ಆದೇಶಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ‘ಕಮಲ್ ಮೌಲಾ ಮಸೀದಿ ವೆಲ್ಫೇರ್ ಸೊಸೈಟಿ’ ಹಾಗೂ ಮುಸ್ಲಿಂ ಕಡೆಯ ಅರ್ಜಿದಾರರು, ಹೈಕೋರ್ಟ್ ತೀರ್ಪಿಗೆ ತಡೆಯಾಜ್ಞೆ ಕೋರಿ ಶೀಘ್ರದಲ್ಲೇ ಸುಪ್ರೀಂ ಕೋರ್ಟ್ಗೆ ತುರ್ತು ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.

