ಅಡ್ಯಾರ್ ನದಿಗೆ ಹಾರಿ ತಮಿಳು ಸಿನಿಮಾ ಇಂಡಸ್ಟ್ರಿಯ ಖ್ಯಾತ ನಿರ್ಮಾಪಕ ಕೆ. ರಾಜನ್ ಭಾನುವಾರ ಚೆನ್ನೈನಲ್ಲಿ (Chennai) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ನಿರ್ಮಾಪಕ, ಬರಹಗಾರ, ನಿರ್ದೇಶಕ ಮತ್ತು ನಟನಾಗಿ ತಮಿಳು ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆ ನೀಡುತ್ತಿದ್ದ ಕೆ. ರಾಜನ್ ಚೆನ್ನೈನ ಅಡಯಾರ್ ಸೇತುವೆಯಿಂದ ಹಾರಿ ಸಾವನ್ನಪ್ಪಿದ್ದಾರೆ ಎಂದು ಆರಂಭಿಕ ವರದಿಗಳು ಹೇಳಿವೆ. ಈ ಘಟನೆ ಇಡೀ ತಮಿಳುನಾಡನ್ನೇ ಬೆಚ್ಚಿಬೀಳಿಸಿದೆ.
ಕಳೆದ ಎರಡು ತಿಂಗಳುಗಳಿಂದ ಕೆ. ರಾಜನ್ ಯಾವುದೇ ಸಿನಿಮಾ ಕಾರ್ಯಕ್ರಮಗಳು ಅಥವಾ ಸಂಘದ ಸಭೆಗಳಲ್ಲಿ ಭಾಗವಹಿಸಿರಲಿಲ್ಲ. ಯಾವಾಗಲೂ ಚಟುವಟಿಕೆಯಿಂದ ಇರುತ್ತಿದ್ದ ಅವರು, ಇದ್ದಕ್ಕಿದ್ದಂತೆ ಪ್ರಪಂಚದೊಂದಿಗಿನ ಸಂಪರ್ಕವನ್ನು ಕಡಿದುಕೊಂಡಿದ್ದರು. ಕಳೆದ ಕೆಲವು ಸಮಯದಿಂದ ಕುಟುಂಬದವರೊಂದಿಗೆ ಉಂಟಾದ ಕೆಲವು ಭಿನ್ನಾಭಿಪ್ರಾಯಗಳು ಮತ್ತು ಮನಸ್ತಾಪಗಳಿಂದಾಗಿ, ಅವರು ತಮ್ಮ ಕುಟುಂಬವನ್ನು ತೊರೆದು ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.
ಎಂದಿನಂತೆ ಅವರು ಕಾರಿನಿಂದ ಇಳಿದು ವಾಕಿಂಗ್ ಹೋಗಿದ್ದಾರೆ. ಆಗ ಸೇತುವೆಯ ಮೇಲೆ ವೇಗವಾಗಿ ನಡೆದ ಕೆ. ರಾಜನ್, ಯಾರೂ ನಿರೀಕ್ಷಿಸದ ರೀತಿಯಲ್ಲಿ ಕೆಲವೇ ಕ್ಷಣಗಳಲ್ಲಿ ಸೇತುವೆಯಿಂದ ನದಿಗೆ ಹಾರಿದ್ದಾರೆ. ಚಾಲಕ ಗಾಬರಿಯಿಂದ ಕಿರುಚುವಷ್ಟರಲ್ಲಿ ಎಲ್ಲವೂ ಮುಗಿದುಹೋಗಿತ್ತು. ಚಾಲಕ ಮತ್ತು ಸಾರ್ವಜನಿಕರ ಮಾಹಿತಿಯ ಮೇರೆಗೆ ಸ್ಥಳಕ್ಕೆ ಧಾವಿಸಿದ ಅಡ್ಯಾರ್, ಅಗ್ನಿಶಾಮಕ ದಳದವರು ನದಿಯಲ್ಲಿ ಶೋಧ ನಡೆಸಿದರು. ಸ್ವಲ್ಪ ಸಮಯದ ನಂತರ ಕೆ. ರಾಜನ್ ಅವರ ಮೃತದೇಹ ಪತ್ತೆಯಾಗಿದೆ

