ಪ್ರಿಯತಮೆ ಒಬ್ಬಳು ಫಾರಿನ್ ಸ್ಟೈಲ್ ನಲ್ಲಿ ಪ್ರಪೋಸ್ ಮಾಡ್ತೀನಿ ಅಂತ ಹೇಳಿ ಪ್ರಿಯಕರನ ಕೈಕಾಲು ಕಟ್ಟಿ ಆತನಿಗೆ ಬೆಂಕಿ ಇಟ್ಟು ಹತ್ಯೆ ಮಾಡಿರುವ ಭೀಕರ ಘಟನೆ ಬೆಂಗಳೂರಿನಲ್ಲಿ ನಡೆದಿತ್ತು. ಇದೀಗ ಈ ಪ್ರಕರಣದ ಕುರಿತಾಗಿ ಯುವತಿ ಅಸಲಿ ಕಾರಣಗಳನ್ನು ಬಿಚ್ಚಿಟ್ಟಿದ್ದಾಳೆ.


ಯುವತಿಯ ಪ್ರಿಯತಮ ಕಿರಣ್ ಎಂಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದು, ಆರೋಪಿ ಯುವತಿ ಪ್ರೇಮಾ ಪೊಲೀಸರು ವಶಕ್ಕೆ ಪಡೆದಿದ್ದರು. ಪ್ರೀತಿ ಹೆಸರಲ್ಲಿ ನಡೆದ ಈ ಘಟನೆ ತೀವ್ರ ಆಘಾತ ಮೂಡಿಸಿದ್ದು, ಹತ್ಯೆಯ ಹಿಂದಿನ ನಿಖರ ಕಾರಣಕ್ಕಾಗಿ ತನಿಖೆ ಮುಂದುವರಿದಿದೆ. ಸದ್ಯ ಪ್ರೇಮಾ ಪೊಲೀಸರ ವಶದಲ್ಲಿದ್ದು ತಾನೇಕೆ ಕಿರಣ್ ಕೈಕಾಲುಗಳನ್ನು ಮಂಚಕ್ಕೆ ಕಟ್ಟಿ ಹಾಕಿ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದೆ ಎಂದು ಆಕೆ ನೀಡಿರುವ ಹೇಳಿಕೆ ಕೇಳಿ ಖುದ್ದು ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.
ಪೊಲೀಸರ ತನಿಖೆಯ ವೇಳೆ ದೊರೆತ ಮಾಹಿತಿ ಪ್ರಕಾರ, ಕಳೆದ ವರ್ಷ ಆಗಸ್ಟ್ನಲ್ಲಿ ಪ್ರೇಮಾಗೆ ಕಿರಣ್ ಪರಿಚಯವಾಗಿದ್ದ. ಈ ವರ್ಷದ ಫೆಬ್ರವರಿ 14ರ ‘ವ್ಯಾಲೆಂಟೈನ್ಸ್ ಡೇ’ ದಿನ ಪ್ರೇಮಾ ತನ್ನ ಪ್ರೀತಿಯನ್ನು ನಿವೇದಿಸಿದ್ದಳು. ಕಿರಣ್ ಕೂಡ ಒಪ್ಪಿಕೊಂಡಿದ್ದ. ಪ್ರಿಯಕರನಿಗಾಗಿ ಪ್ರೇಮಾ ಬರೋಬ್ಬರಿ 4.5 ಲಕ್ಷ ರೂಪಾಯಿ ಮೌಲ್ಯದ ಬೈಕ್ ಮತ್ತು ಮೊಬೈಲ್ ಫೋನ್ ಕೊಡಿಸಲು ಮುಂದಾಗಿದ್ದಳು. ಕೊಲೆ ಕೃತ್ಯ ನಡೆದ ದಿನವೂ ಇಬ್ಬರೂ ಸೇರಿ ಬೈಕ್ ನೋಡಲು ಹೋಗಿದ್ದರು. ಆದರೆ, ಇತ್ತೀಚೆಗೆ ಕಿರಣ್ ಪ್ರೇಮಾಳಿಂದ ಅಂತರ ಕಾಯ್ದುಕೊಳ್ಳಲು ಶುರು ಮಾಡಿದ್ದ. ಇದರಿಂದ ಮನನೊಂದಿದ್ದ ಪ್ರೇಮಾ, ಆತನನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಮೊದಲೇ ತೀರ್ಮಾನಿಸಿದ್ದಳು. ಅದಕ್ಕಾಗಿಯೇ ಪೆಟ್ರೋಲ್ ಮತ್ತು ಸೀಮೆ ಎಣ್ಣೆಯನ್ನು ಮೊದಲೇ ಖರೀದಿಸಿ ತಂದಿಟ್ಟುಕೊಂಡಿದ್ದಳು. ಮದುವೆ ವಿಚಾರವಾಗಿ ಮನೆಯಲ್ಲಿ ಮತ್ತೆ ಗಲಾಟೆ ಆರಂಭವಾದಾಗ, ಪ್ಲಾನ್ ಪ್ರಕಾರ ಕಿರಣ್ನನ್ನು ಮಂಚಕ್ಕೆ ಕಟ್ಟಿ ಹಾಕಿ ಬೆಂಕಿ ಹಚ್ಚಿದ್ದಾಳೆ ಎಂದು ತಿಳಿದುಬಂದಿದೆ.
ಪ್ರೀತಿ ಕೊಂದ ಪ್ರೇಮಾ ಹೇಳಿದ್ದೇನು?
ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಪ್ರಿಯಕರನಿಗೆ ಬೆಂಕಿ ಇಟ್ಟು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರೇಮಾಳನ್ನ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ರು. ಖಾಕಿ ಡ್ರಿಲ್ಗೆ ಕಂಗಾಲಾದ ಮಹಿಳೆ ತಪ್ಪೊಪ್ಪಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.
ಕೊಲೆ ಹಿಂದಿನ ಅಸಲಿ ಕಾರಣ ರಿವೀಲ್
ಮದುವೆ ವಿಚಾರ ಬಂದಾಗ ಕಿರಣ್ ತನಗೆ ಅವಮಾನ ಮಾಡ್ತಿದ್ದ. ಜಾತಿ ನೆಪವೇಳಿ ಮದುವೆಯನ್ನೇ ನಿರಾಕರಿಸುತ್ತಿದ್ದ ಎಂದು ಆರೋಪಿ ಪ್ರೇಮಾ ಹೇಳಿಕೆ ನೀಡಿದ್ದು, ಮದುವೆ ವಿಚಾರಕ್ಕೆ ಇಬ್ಬರ ನಡುವೆ ಆಗಾಗ ಗಲಾಟೆ ಆಗ್ತಿತ್ತು ಎನ್ನುವ ಸತ್ಯ ಹೊರಬಿದ್ದಿದೆ. ಅಷ್ಟೇ ಅಲ್ಲದೇ ಕಿರಣ್ ತನ್ನನ್ನು ಭೋಗದ ವಸ್ತುವನ್ನಾಗಿ ಬಳಕೆ ಮಾಡಿಕೊಳ್ತಿದ್ದ ಎಂದು ಪ್ರೇಮಾ ಹೇಳಿದ್ದಾರೆ ಎನ್ನಲಾಗ್ತಿದೆ.
ದುಬಾರಿ ಗಿಫ್ಟ್ ಆಸೆಗೆ ಬಿದ್ದು ಹೆಣವಾದ
ಪ್ರೇಮಾ ದುಬಾರಿ ಗಿಫ್ಟ್ ಕೊಡ್ತಾಳೆ ಅಂತಾನೆ ಕಿರಣ್ ಆಕೆಯ ಮನೆಗೆ ಬಂದಿದ್ದ. ಬೈಕ್ ಗಿಫ್ಟ್ ಕೊಡ್ತೀನಿ ಅಂತ ಕಿರಣ್ನನ್ನ ಕರೆದಿದ್ದ ಪ್ರೇಮಾ ಬಳಿಕ ಇದೇ ಕಾರಣಗಳಿಗೆ ನಾನು ಕಿರಣ್ ಕೊಲೆಗೆ ಪ್ಲಾನ್ ಮಾಡಿದ್ದಾಗಿ ಪೊಲೀಸರ ಮುಂದೆ ಆರೋಪಿ ಪ್ರೇಮಾ ತಪ್ಪೊಪ್ಪಿಕೊಂಡಿದ್ದಾಳೆ.

