ಬಳಂಜ: ತಡರಾತ್ರಿ ಕಿಡಿಗೇಡಿಯೊಬ್ಬ ಏಕಾಏಕಿ ದಾಂಧಲೆ ಎಬ್ಬಿಸಿ, ಇತಿಹಾಸ ಪ್ರಸಿದ್ದ ಬಳಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿಕ್ಕೆ ನುಗ್ಗಿ ದೇವರ ಮೂರ್ತಿಯನ್ನು ಭಗ್ನಗೊಳಿಸಿದ ಘಟನೆ ಎ.22ರಂದು ತಡರಾತ್ರಿ ನಡೆದಿದೆ.


ಘಟನೆ ವಿವರ: ಕಳೆದ ರಾತ್ರಿ ಸಮಯ ಎರಡು ಗಂಟೆಗೆ ಕಪ್ಪು ಕಲರಿನ ಥಾರ್ ವಾಹನದಲ್ಲಿ ದೇವಸ್ಥಾನದ ಪಕ್ಕದಲ್ಲಿರುವ ಸುಬ್ರಹ್ಮಣ್ಯ ಭಟ್ ಅವರ ಮನೆಗೆ ಬಂದ ಅಜೇಯ್ ಎಂಬ ಕೀಡಿಗೇಡಿ “ಎನನ್ ಬಚಾವ್ ಮಲ್ಪಿ” ಎಂದು ಜೋರಾಗಿ ಕೂಗಾಡಿ ಮನೆಗೆ ನುಗ್ಗಲು ಯತ್ನಿಸಿದಾಗ ಮನೆಯರು ಜೋರು ಮಾಡಿದ ವಿಚಾರ ಬೆಳಕಿಗೆ ಬಂದಿದೆ.
ಬಳಿಕ ಕೀಡಿಗೇಡಿ ಬಳಂಜ ದೇವಸ್ಥಾನದ ಪವಿತ್ರವಾದ ದೇವರ ಜಲಕದ ಕೆರೆಗೆ ಹಾರಿ ಅಲ್ಲಿಂದ ಸೀದಾ ದೇವಸ್ಥಾನಕ್ಕೆ ಬಂದು ಕಂಬದ ಮೂಲಕ ದೇವಸ್ಥಾನದ ಮೇಲೆ ಹೋಗಿ ಹಂಚು ತೆಗೆದು ಒಳನುಗ್ಗಿ ಕೊಡಮಣಿತ್ತಾಯ ದೈವದ ಗುಡಿಗೆ ಇಳಿದು ದೈವದ ಮಣೆ ಮಂಚದಲ್ಲಿದ್ದ ಘಂಟಾಮಣಿಯನ್ನು ತೆಗೆದು ದೇವಸ್ಥಾನ ಮೇಲ್ಟಾವಣಿಯಲ್ಲಿ ಹಂಚುಗಳ ಪಕ್ಕದಲ್ಲಿ ಇಟ್ಟು ವಿಕೃತಿ ಮೆರೆದಿದ್ದಾನೆ.
ಬಳಿಕ ದೇವಸ್ಥಾನ ತೀರ್ಥ ಮಂಟಪದ ಬಳಿಯಿರುವ ದೊಡ್ಡ ಘಂಟೆಯನ್ನು ಬಾರಿಸಿ, ಗೋಪಾಲಕೃಷ್ಣ ದೇವರ ಗುಡಿಯೊಳಗೆ ನುಗ್ಗಿ ದೇವರ ವಿಗ್ರಹವನ್ನು ತೆಗೆದು ನೆಲಕ್ಕೆ ಎಸೆದು ಭಗ್ನಗೊಳಿಸಿದ್ದಾನೆ. ಗುಡಿಯೊಳಗಿದ್ದ ದೇವರ ಪರಿಕರಗಳನ್ನು ಚೆಲ್ಲಾಪಿಲ್ಲಿಗೊಳಿಸಿ ವಿಕೃತಿ ಮರೆದಿದ್ದಾನೆ.
ಈ ಘಟನೆಯ ಬಗ್ಗೆ ಬಳಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಅನುವಂಶೀಯ ಆಡಳಿತ ಮೊಕೇಸರ ಬಿ.ಶೀತಲ್ ಪಡಿವಾಳ್ ಅವರು ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಘಟನೆಯಿಂದ ಸ್ಥಳೀಯರ ದೇವಸ್ಥಾನದ ಭಕ್ತ ವರ್ಗದಲ್ಲಿ ದಿಗ್ಧಮೆ ಮೂಡಿಸಿದ್ದು ಈ ಘಟನೆಯಿಂದ ಆತಂಕ ಕೂಡ ನಿರ್ಮಾಣವಾಗಿದೆ.
ಪೋಲಿಸ್ ಇಲಾಖೆ ಈ ಘಟನೆಯನ್ನು ಗಂಭೀರವಾಗಿ ತನಿಖೆ ನಡೆಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಕಿಡಿಗೇಡಿಯ ಈ ಕೃತ್ಯಕ್ಕೆ ಕಾರಣವೇನು ಎಂಬುದು ನಿಗೂಢವಾಗಿದೆ.ಇತ್ತಿಚೀನ ದಿನಗಳಲ್ಲಿ ರಾತ್ರಿ ತಿರುಗುವ ವಾಹನ, ಗಾಂಜಾ, ಡ್ರಗ್ಸ್ ಬಗ್ಗೆ ಗಾಳಿ ಸುದ್ದಿಯಿದ್ದು ಇದರ ಬಗ್ಗೆಯೂ ತನಿಖೆ ಆಗಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.ಕೀಡಿಗೇಡಿಯ ಕಪ್ಪು ಬಣ್ಣದ ಥಾರ್ ವಾಹನ ಸುಬ್ರಹ್ಮಣ್ಯ ಭಟ್ ಅವರ ಮನೆಯಂಗಳದಲ್ಲಿದೆ.

