ಕಟ್ನಿ (ಮಧ್ಯಪ್ರದೇಶ): ಜೀವ ಉಳಿಸುವ ಆಂಬುಲೆನ್ಸ್ ಸಿಬ್ಬಂದಿಯಿಂದ ಅಮಾನವೀಯ ಘಟನೆಯೊಂದು ಮಧ್ಯಪ್ರದೇಶದ ಕಟ್ನಿ ಜಿಲ್ಲೆಯಲ್ಲಿ ನಡೆದಿದೆ.


ಅಪಘಾತದಲ್ಲಿ ಗಾಯಗೊಂಡು ರಕ್ತಸಿಕ್ತನಾಗಿದ್ದ ಪತಿಯನ್ನು ಆಸ್ಪತ್ರೆಗೆ ಕರೆತಂದಿದ್ದ ಮಹಿಳೆಗೆ, ಆಂಬುಲೆನ್ಸ್ನಲ್ಲಿದ್ದ ರಕ್ತದ ಕಲೆಗಳನ್ನು ತೊಳೆಯುವಂತೆ ಸಿಬ್ಬಂದಿ ಆದೇಶಿಸಿದ ಘಟನೆ ನಡೆದಿದೆ.
ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಜಿಲ್ಲಾಡಳಿತ ಇಬ್ಬರು ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಿದೆ.
ಕೇರಳ ಗ್ರಾಮದ ನಿವಾಸಿ ರಾಹುಲ್ ಬರ್ಮನ್ ಎಂಬುವವರು ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದು, ಚಿಕಿತ್ಸೆಗೆಂದು 108 ಆಂಬುಲೆನ್ಸ್ ಮೂಲಕ ಕಟ್ನಿ ಜಿಲ್ಲಾ ಆಸ್ಪತ್ರೆಗೆ ಕರೆತರಲಾಗಿತ್ತು. ರಾಹುಲ್ ದೇಹದಿಂದ ಹರಿದ ರಕ್ತವು ಆಂಬುಲೆನ್ಸ್ನ ಒಳಭಾಗದ ನೆಲದ ಮೇಲೆ ಚೆಲ್ಲಿದೆ. ರೋಗಿಯನ್ನು ಆಸ್ಪತ್ರೆಗೆ ದಾಖಲು ಮಾಡಿದ ನಂತರ, ಮೋಹಿತ್ ಖಾಟಿಕ್ ಎನ್ನುವಾತ ರಾಹುಲ್ ಪತ್ನಿ ಪ್ರರ್ಮೀಳಾ ಬರ್ಮುನ್ ಅವರಿಗೆ ಆಂಬುಲೆನ್ಸ್ ತೊಳೆಯುವಂತೆ ಸೂಚಿಸಿದ್ದಾನೆ.
ತನ್ನ ಪತಿಯ ಪ್ರಾಣದ ಚಿಂತೆಯಲ್ಲಿದ್ದ ಮಹಿಳೆ, ಅಸಹಾಯಕತೆಯಿಂದ ಇಡೀ ವಾಹನವನ್ನು ನೀರಿನಿಂದ ತೊಳೆದು ಸ್ವಚ್ಛಗೊಳಿಸಿದ್ದಾರೆ. ಈ ದೃಶ್ಯವನ್ನು ಅಲ್ಲಿದ್ದವರು ಮೊಬೈಲ್ನಲ್ಲಿ ಸೆರೆಹಿಡಿದಿದ್ದು, ವಿಡಿಯೋ ವೈರಲ್ ಆಗಿದೆ.
ಈ ಘಟನೆ ಕುರಿತು ತನಿಖೆ ಮಾಡಿದ ನಂತರ ಆಂಬುಲೆನ್ಸ್ ಸಿಬ್ಬಂದಿಯ ಈ ವರ್ತನೆ ನಿಯಮಾವಳಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಮತ್ತು ಇದು ಯಾವುದೇ ಹಂತದಲ್ಲೂ ಒಪ್ಪಲು ಸಾಧ್ಯವಿಲ್ಲದ ಕೃತ್ಯ ಎಂದು ವರದಿ ನೀಡಿದ್ದಾರೆ. ಜಿಲ್ಲಾಧಿಕಾರಿ ಆಶಿಶ್ ತಿವಾರಿ ಅವರು ಸಂಸ್ಥೆಯ ಚಾಲಕ ದೇವ ಸಾಹು ಮತ್ತು ಇಎಂಟಿ ಮೋಹಿತ್ ಖಾಟಿಕ್ ಇಬ್ಬರನ್ನೂ ಕೆಲಸದಿಂದ ವಜಾ ಮಾಡಿ ಆದೇಶ ಹೊರಡಿಸಿದ್ದಾರೆ.

