Home Business ಎತ್ತಿನ ಗಾಡಿ ಓಟಕ್ಕೆ ಇನ್ನು ಮುಂದೆ ಅನುಮತಿ ಪಡೆಯದಿದ್ದರೆ ಕಠಿಣ ಕ್ರಮ – ಡಿಸಿ ಆದೇಶ

ಎತ್ತಿನ ಗಾಡಿ ಓಟಕ್ಕೆ ಇನ್ನು ಮುಂದೆ ಅನುಮತಿ ಪಡೆಯದಿದ್ದರೆ ಕಠಿಣ ಕ್ರಮ – ಡಿಸಿ ಆದೇಶ

Hindu neighbor gifts plot of land

Hindu neighbour gifts land to Muslim journalist

ಎತ್ತಿನ ಓಟ ಅಥವಾ ಎತ್ತಿನ ಗಾಡಿ ಓಟವು ಒಂದು ಸಾಂಪ್ರದಾಯಿಕ ಕ್ರೀಡೆಯಾಗಿದ್ದು, ಇದನ್ನು ಆಯೋಜನೆ ಮಾಡುವ ಮೊದಲು ಕಡ್ಡಾಯವಾಗಿ ಅನುಮತಿ ಪಡೆಯಬೇಕೆಂದು ಸೂಚಿಸಲಾಗಿದ್ದು, ಇಲ್ಲದೇ ಹೋದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿಯವರು ಎಚ್ಚರಿಕೆ ನೀಡಿದ್ದಾರೆ.ಜಿಲ್ಲಾಡಳಿತ ಭವನದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಮಾತನಾಡಿದ್ದು ಎತ್ತಿನ ಓಟ/ ಎತ್ತಿನ ಗಾಡಿ ಓಟ ಕ್ರೀಡೆಯ ಮಾರ್ಗಸೂಚಿ ಕುರಿತು ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವ ಹಿನ್ನೆಲೆಯಲ್ಲಿ (ಕರ್ನಾಟಕ ತಿದ್ದುಪಡಿ) ಸುಗ್ರೀವಾಜ್ಞೆ 2017 ರನ್ವಯ ಎತ್ತಿನ ಓಟ/ ಎತ್ತಿನ ಗಾಡಿ ಓಟ ಆಯೋಜಿಸುವ ಆಯೋಜಕರು ಕ್ರೀಡೆಯ 15 ದಿನಗಳ ಮೊದಲೇ ಸ್ಥಳೀಯ ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು ಎಂದು ಸೂಚನೆ ನೀಡಿದ್ದಾರೆ.

ಶಿವಮೊಗ್ಗ ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ಈ ಕುರಿತು ಮಾತನಾಡಿದ್ದು, “ಎತ್ತಿನ ಓಟ/ ಎತ್ತಿನ ಗಾಡಿ ಓಟವು ಒಂದು ಸಾಂಪ್ರದಾಯಿಕ ಕ್ರೀಡೆ. ಆಯೋಜಕರು ಕ್ರೀಡೆಗೆ ಮುನ್ನ ಸ್ಥಳೀಯ ವ್ಯಾಪ್ತಿಯ ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕಾಗಿದೆ. ಅನುಮತಿ ಪಡೆಯದೆ ಇದ್ದಲ್ಲಿ ಅಂತಹವರ ವಿರುದ್ದ ಸೂಕ್ತ ಕ್ರಮ ಜರುಗಿಸಲಾಗುವುದು” ಎಂದಿದ್ದಾರೆ.

ಎತ್ತಿನ ಓಟ ನಡೆಸುವ ಗ್ರಾಮಗಳಲ್ಲಿ ಮೊದಲು ಗ್ರಾಮ ಪಂಚಾಯಿತಿ ಮತ್ತು ಪಶುವೈದ್ಯರಿಂದ ಎನ್‍ಓಸಿ ಪಡೆದು ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಬೇಕಾಗಿದ್ದು, ಆ ಬಳಿಕ, ತಹಶೀಲ್ದಾರರಿಗೆ ಸಲ್ಲಿಸಿದ ಅರ್ಜಿಯನ್ನು ಅವರು ವಿವರವಾಗಿ ಪರಿಶೀಲಿಸಿ ಸೂಕ್ತ ಶಿಫಾರಸ್ಸಿನೊಂದಿಗೆ ಜಿಲ್ಲಾಧಿಕಾರಿಗಳಿಗೆ ಕಳುಹಿಸುತ್ತಾರೆ. ಜಿಲ್ಲಾಧಿಕಾರಿಗಳು ಈ ಕ್ರೀಡೆಯಿಂದ ಆಗುವ ಸಾಧಕ ಬಾಧಕಗಳನ್ನು ಪರಿಶೀಲನೆ ನಡೆಸಿ ಅನುಮತಿ ನೀಡುವ ಇಲ್ಲವೇ ತಿರಸ್ಕರಿಸುವ ಅಧಿಕಾರ ಹೊಂದಿದ್ದಾರೆ.

ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಇಓ, ಪಶುಸಂಗೋಪನೆ, ಆರೋಗ್ಯ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವ ಷರತ್ತುಗಳಿಗೊಳಪಟ್ಟು ಎತ್ತಿನ ಓಟ ಕ್ರೀಡೆಯನ್ನು ನಡೆಸುವ ಸಂಬಂಧ ಅಧಿಕಾರಿಗಳಿಗೆ ಸಭೆ ನಡೆಸಿ ಅರಿವು ಮೂಡಿಸಬೇಕು ಎಂದು ಸೂಚನೆ ನೀಡಲಾಗಿದೆ.

ಒಂದು ವೇಳೆ ಕ್ರೀಡೆಯ ಪರಿಶೀಲನೆ ನಡೆಸಿ ಅನುಮತಿ ಪಡೆಯದೇ ಹೋದಲ್ಲಿ ಸ್ಥಳೀಯ ಸಂಸ್ಥೆಗಳು ಜವಾಬ್ದಾರರಾಗಿದ್ದು ಜೊತೆಗೆ ಆಯೋಜಕರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಕ್ರೀಡೆಯ ಆಯೋಜನೆ ಪರಿಶೀಲಿಸಲು ಕಂದಾಯ ಇಲಾಖೆ, ಪೊಲೀಸ್, ಯುವ ಸಬಲೀಕರಣ ಮತ್ತು ಕ್ರೀಡೆ, ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲೆಯ ಎಸ್‍ಪಿಸಿಎ ಪ್ರತಿನಿಧಿ ಈ ಕುರಿತ ಕಾರ್ಯ ನಿರ್ವಹಿಸುತ್ತಾರೆ.

ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಅವರು ಕೂಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ಎತ್ತಿನ ಓಟದ ಅಧಿಸೂಚನೆ ಉದ್ದೇಶ ಪ್ರಾಣಿಗಳಿಗೆ ಆಗುವ ಕ್ರೌರ್ಯ ಹಾಗೂ ಮನುಷ್ಯರಿಗೆ ಆಗುವ ಹಾನಿ ತಡೆಗಟ್ಟಬೇಕಾಗಿದ್ದು, ಕ್ರೀಡೆಯಲ್ಲಿ ಭಾಗಿಯಾಗುವ ಎತ್ತುಗಳಿಗೆ ಅಪಘಾತ ಸಂಭವಿಸಿದಲ್ಲಿ ತುರ್ತು ವೈದ್ಯಕೀಯ ವ್ಯವಸ್ಥೆ, ಆಂಬುಲೆನ್ಸ್ ಇತರೆ ವ್ಯವಸ್ಥೆ ಸೇರಿದಂತೆ ಮಾರ್ಗಸೂಚಿಯಲ್ಲಿನ ಎಲ್ಲ ಅಂಶಗಳನ್ನು ಅನುಸರಿಸಬೇಕಾಗಿದೆ. ಜೊತೆಗೆ ಕ್ರೀಡಾ ಸ್ಥಳದಲ್ಲಿ ಬ್ಯಾರಿಕೇಡ್ ಹಾಕಿ, ಜನರನ್ನು ನಿಯಂತ್ರಿಸಲು ಸ್ಥಳೀಯರನ್ನು ನೇಮಿಸಬೇಕು. ಹಾಗೂ ಆ ಸ್ಥಳದಲ್ಲಿ ಮದ್ಯ ಸೇವನೆ ಮಾಡಿದವರಿಗೆ ಬಿಡಬಾರದು” ಎಂದು ಮನವಿ ಮಾಡಿದ್ದಾರೆ.

ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ.ಶಿವಯೋಗಿ ಯಲಿ ಕೂಡ ಮಾತನಾಡಿದ್ದು, “ಕ್ರೀಡೆಯ ಆಯೋಜಕರು ಎತ್ತುಗಳಿಗೆ ಒಂದು ಪ್ರತ್ಯೇಕ ಸಮತಟ್ಟಾದ ಟ್ರ್ಯಾಕ್ ನಿರ್ಮಿಸಿ, ಗರಿಷ್ಟ 100 ಮೀಟರ್ ಉದ್ದ ಮತ್ತು 7.5 ಮೀಟರ್ ಅಗಲ ಇರಬೇಕು ಎಂದು ಸೂಚಿಸಿದ್ದಾರೆ. ಮಧ್ಯಾಹ್ನ 12 ರಿಂದ 3 ಗಂಟೆ ನಡುವಿನ ಅವಧಿ 38 ಡಿಗ್ರಿ ಉಷ್ಣಾಂಶ ಮೀರಿದ ಯಾವುದೇ ಪ್ರದೇಶದಲ್ಲಿ ಕ್ರೀಡೆಗಾಗಿ ಎತ್ತುಗಳನ್ನು ಬಳಸುವಂತಿಲ್ಲ” ಎಂದು ಈ ಸಂದರ್ಭದಲ್ಲಿ ಮಾಹಿತಿ ನೀಡಿದ್ದಾರೆ.