ಬಂಟ್ವಾಳ: ಸಾಲೆತ್ತೂರು-ಮಾರ್ನಬೈಲು ಸಂಪರ್ಕ ರಸ್ತೆಯ ಕುಕ್ಕಾಜೆ ಜಂಕ್ಷನ್ ಬಳಿ ಭೀಕರ ರಸ್ತೆ ಅಪಘಾತ ನಡೆದಿದ್ದು, ಬೈಕ್ ಸವಾರ ಮೃತಪಟ್ಟಿರುವ ಘಟನೆ ನಡೆದಿದೆ.


ಇರಾ ಗ್ರಾಮದ ಕುಕ್ಕಾಜೆಬೈಲ್ ನಿವಾಸಿ, ಅಶೋಕ ಎಂಬುವವರ ಪುತ್ರ ಮನೀಶ್ (22) ಮೃತಪಟ್ಟ ಯುವಕ.
ಮಂಚಿಯಲ್ಲಿರುವ ವಿಕಾಸ್ ಶಾಮಿಯಾನ ಸಂಸ್ಥೆಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎಂದು ವರದಿಯಾಗಿದೆ. ಮನೀಶ್ ಅವರು ಸಾಲೆತ್ತೂರಿನಿಂದ ಕುಕ್ಕಾಜೆ ಕಡೆಗೆ ಬೈಕ್ನಲ್ಲಿ ತೆರಳುತ್ತಿದ್ದ ಸಂದರ್ಭ ಎದುರಿನಿಂದ ಬಂದ ಆಪೆ ರಿಕ್ಷಾ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಬೈಕ್ ಸವಾರ ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯರು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲು ಪ್ರಯತ್ನ ಪಟ್ಟರೂ ದಾರಿಮಧ್ಯೆಯೇ ಯುವಕ ಕೊನೆಯುಸಿರೆಳೆದಿದ್ದಾರೆ.
ಬಂಟ್ವಾಳ ಸಂಚಾರಿ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲು ಮಾಡಿದ್ದಾರೆ.

