ಉಡುಪಿ | ಸಾರ್ವಜನಿಕ ಸ್ಥಳದಲ್ಲಿ ಆಟೋ ನಿಲ್ಲಿಸಿ ತರಕಾರಿ ಮಾರಿದಂತೆ ಗಾಂಜಾ ಮಾರಲು ಯತ್ನ, ಇಬ್ಬರ ಬಂಧನ

Share the Article

ಉಡುಪಿಯ ಉದ್ಯಾವರ ಗ್ರಾಮದ ಗುಡ್ಡೆಯಂಗಡಿ ರಾಷ್ಟ್ರೀಯ ಹೆದ್ದಾರಿ ಬಳಿ ಆಟೋ ರಿಕ್ಷಾದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಸೋಮೇಶ್ವರ ಗ್ರಾಮದ ಕುಂಪಲ ನಿವಾಸಿ ಕಾರ್ತಿಕ್ (24) ಹಾಗೂ ತೇಜಸ್ (18) ಎಂದು ಗುರುತಿಸಲಾಗಿದೆ.

ಆರೋಪಿಗಳು ನಿನ್ನೆ ರಾತ್ರಿ 7.45 ರ ಸುಮಾರಿಗೆ ಉದ್ಯಾವರದ ಗುಡ್ಡೆಯಂಗಡಿ ರಾಷ್ಟ್ರೀಯ ಹೆದ್ದಾರಿ ಬಳಿಯ ಬಬ್ಬುಸ್ವಾಮಿ ದೈವಸ್ಥಾನದ ಎದುರು ಸಾರ್ವಜನಿಕ ಸ್ಥಳದಲ್ಲಿ ಆಟೋ ರಿಕ್ಷಾದಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸೆನ್ ಅಪರಾಧ ಪೊಲೀಸ್ ಠಾಣಾ ನಿರೀಕ್ಷಕ ಮಂಜುನಾಥ್‌ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಪೊಲೀಸರು ಬಂಧಿತ ಆರೋಪಿಗಳಿಂದ 1.226 ಕಿಲೋ ಗಾಂಜಾ, ಎರಡು ಮೊಬೈಲ್ ಫೋನ್ ಹಾಗೂ ಆಟೋ ರಿಕ್ಷಾ ಸೇರಿದಂತೆ ಒಟ್ಟು 1.35 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಸೆನ್ ಪೊಲೀಸ್ ಠಾಣಾ ಪಿಎಸ್‌ಐ ಲಕ್ಷಣ, ಐಎಸ್‌ಐ ಕೇಶವ ಗೌ ಹಾಗೂ ಸಿಬ್ಬಂದಿಗಳಾದ ಕೃಷ್ಣಪ್ರಸಾದ್, ಪ್ರವೀಣ, ರಾಘವೇಂದ್ರ ಉಪ್ಪರು ಹಾಗೂ ಪ್ರಸನ್ನ ಸಾಲಿಯಾನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು ಎಂದು ತಿಳಿದುಬಂದಿದೆ.

Leave A Reply