ಕೊಪ್ಪ: ಪಕ್ಕದ ಮನೆಯ ಕೋಳಿ ಮನೆಗೆ ಬಂದ ವಿಚಾರಕ್ಕೆ ಮಾತಿನ ಚಕಮಕಿ ನಡೆದಿದ್ದು, ಮಾರಣಾಂತಿಕವಾಗಿ ಹಲ್ಲೆ ನಡೆದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ತುಳುವಿನಕೊಪ್ಪದಲ್ಲಿ ನಡೆದಿದೆ. ಈ ಘಟನೆಯಲ್ಲಿ ಇಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.


ಗಾಯಾಳುಗಳನ್ನು ಕೂಲಿ ಕಾರ್ಮಿಕ ಚಂದ್ರು ಹಾಗೂ ಅವರ ಪುತ್ರಿ ಅಶ್ವಿನಿ ಎಂದು ಗುರುತಿಸಲಾಗಿದೆ.
ಚಂದ್ರು ಅವರ ಸಾಕು ಕೋಳಿ ಪಕ್ಕದ ಮನೆಯ ನಾಗೇಶ್ ಅವರ ಮನೆಗೆ ಹೋಗಿದ್ದ ವಿಚಾರಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ನಿನ್ನ ಕೋಳಿ ಯಾಕೆ ನನ್ನ ಮನೆಗೆ ಬರುತ್ತದೆ ಎಂದು ನಾಗೇಶ್ ಪ್ರಶ್ನೆ ಮಾಡಿದ್ದು, ಉದ್ದೇಶಪೂರ್ವಕವಾಗಿ ಕೋಳಿ ಬಿಡಲಿಲ್ಲ ಎಂದು ಚಂದ್ರ ಸಮಾಧಾನಪಡಿಸಲು ಯತ್ನ ಮಾಡಿದ್ದಾರೆ ಎನ್ನಲಾಗಿದೆ.
ಆದರೆ ಮಾತಿನ ಚಕಮಕಿ ನಡೆದಿದ್ದು, ನಾಗೇಶ್ ಹಾಗೂ ಅವರ ಪತ್ನಿ ಚಂದ್ರು ಅವರ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿದೆ. ಅಲ್ಲದೆ ತಮ್ಮ ಸಾಕು ನಾಯಿಯನ್ನು ಚಂದ್ರ ಅವರ ಮೇಲೆ ಬಿಟ್ಟು ಕಚ್ಚಿಸಿರುವುದಾಗಿ ದೂರಲಾಗಿದೆ.
ಅಪ್ಪನ ಮೇಲಿನ ಹಲ್ಲೆಯನ್ನು ತಡೆಯಲು ಬಂದ ಪುತ್ರಿ ಅಶ್ವಿನಿ ಮೇಲೂ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಚಂದ್ರು ಮತ್ತು ಅಶ್ವಿನಿ ಅವರನ್ನು ಕೊಪ್ಪ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

